ADVERTISEMENT

ಅಂತ್ಯಕ್ರಿಯೆಗೆ ನೆರವಾಗದ ಗ್ರಾಮಸ್ಥರು: ಬೈಕಿನಲ್ಲಿ ಶವ ಸಾಗಣಿಕೆ

​ಪ್ರಜಾವಾಣಿ ವಾರ್ತೆ
Published 11 ಮೇ 2021, 8:44 IST
Last Updated 11 ಮೇ 2021, 8:44 IST
   

ಚಾಮರಾಜನಗರ: ಇಲ್ಲಿನ ಕೊಳ್ಳೇಗಾಲ ತಾಲ್ಲೂಕಿನ ಟಗರಪುರ ಗ್ರಾಮದಲ್ಲಿ ಅನಾರೋಗ್ಯದಿಂದ ಮೃತಪಟ್ಟ ಮಹದೇವಯ್ಯ (65) ಅವರ ಅಂತ್ಯಕ್ರಿಯೆಗೆ ಗ್ರಾಮಸ್ಥರು ನೆರವಾಗಲಿಲ್ಲ. ಮೃತಪಟ್ಟ 2 ದಿನಗಳ ನಂತರ ಪಿಎಫ್‌ಐ ಸಂಘಟನೆಯ ಸ್ವಯಂಸೇವಕರು ಇವರ ಸ್ವಂತ ಜಮೀನಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ಯತ್ನಿಸಿದರಾದರೂ ಪಕ್ಕದ ಹಳ್ಳಿಯ ಗ್ರಾಮಸ್ಥರು ಅವಕಾಶ ನೀಡಲಿಲ್ಲ. ಕೊನೆಗೆ ಪೊಲೀಸರ ಸಹಕಾರದಿಂದ ಸರ್ಕಾರಿ ಜಾಗದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಮಹದೇವಯ್ಯ ಅವರಿಗೆ ಊರಿನಲ್ಲಿ ಸಂಬಂಧಿಕರು ಇರಲಿಲ್ಲ. ಜ್ವರದಿಂದ ಇವರು ಮನೆಯಲ್ಲೇ ಮೃತಪಟ್ಟರು ಎಂಬ ಸುದ್ದಿ ಊರಿನಲ್ಲಿ ಹರಡಿತು. ಕೊರೊನಾ ಭೀತಿಯಿಂದ ಯಾರೂ ಮನೆಯತ್ತ ಸುಳಿಯಲಿಲ್ಲ. ಇವರ ತಮ್ಮನ ಮಗ ಲಕ್ಷ್ಮೀಕಾಂತ್ ಅವರು ಬೆಂಗಳೂರಿನಿಂದ ಬಂದರಾದರೂ, ಗ್ರಾಮಸ್ಥರು ಅಂತ್ಯಸಂಸ್ಕಾರ ನೆರವೇರಿಸಲು ನೆರವಾಗಲಿಲ್ಲ. ಈ ವಿಷಯವನ್ನು ಪಿಎಫ್‌ಐ ಕಾರ್ಯಕರ್ತರ ಗಮನಕ್ಕೆ ತರಲಾಯಿತು.

ಸ್ಥಳಕ್ಕೆ ಬಂದ ಪಿಎಫ್‌ಐ ಕಾರ್ಯಕರ್ತರು ಇರುವೆಗಳು ಮುತ್ತಿಕೊಂಡಿದ್ದ ಮಹದೇವಯ್ಯ ಮೃತದೇಹವನ್ನು ಅವರ ಜಮೀನಿಗೆ ಬೈಕಿನಲ್ಲಿ ಕೊಂಡೋಯ್ದರು. ಈ ವೇಳೆ ಸಹಾಯಕ್ಕೆ ಕೋರಿದರೂ ಗ್ರಾಮಸ್ಥರು ಸ್ಪಂದಿಸಲಿಲ್ಲ. ಜಮೀನಿನ ಪಕ್ಕದಲ್ಲೇ ಇರುವ ಆಲನಹಳ್ಳಿ ಗ್ರಾಮಸ್ಥರೂ ಅಂತ್ಯಸಂಸ್ಕಾರ ನೆರವೇರಿಸಲು ಒಪ್ಪಲಿಲ್ಲ. ಪೊಲೀಸರು ಮಧ್ಯಪ್ರವೇಶಿಸಿ, ಮೃತದೇಹದ ಅಂತ್ಯಸಂಸ್ಕಾರವನ್ನು ಸರ್ಕಾರಿ ಜಾಗದಲ್ಲಿ ನೆರವೇರಿಸಲು ಅವಕಾಶ ಮಾಡಿಕೊಟ್ಟರು ಎಂದು ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ದ ಚಾಮರಾಜನಗರ ಜಿಲ್ಲಾ ಘಟಕದ ಅಧ್ಯಕ್ಷ ಕಫಿಲ್‌ ಅಹಮ್ಮದ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಈ ಕುರಿತು ‘ಪ್ರಜಾವಾಣಿ’ ಕೊಳ್ಳೇಗಾಲ ಗ್ರಾಮಾಂತರ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಅಶೋಕ್‌ ಅವರನ್ನು ಸಂಪರ್ಕಿಸಿದಾಗ, ಅವರು, ‘ಕೋವಿಡ್‌ ಭಯದಿಂದ ಗ್ರಾಮಸ್ಥರು ಅಂತ್ಯಸಂಸ್ಕಾರಕ್ಕೆ ನೆರವಾಗಲಿಲ್ಲ. ಮೃತವ್ಯಕ್ತಿಯ ಜಮೀನಿಗೆ ಹೋಗಲು ಪಕ್ಕದ ಗ್ರಾಮದ ಮೂಲಕ ಹಾದು ಹೋಗಬೇಕಿತ್ತು. ಕೋವಿಡ್‌ ಬರಬಹುದು ಎಂಬ ಭಯದಿಂದ ಅವರೂ ಅವಕಾಶ ಕೊಡಲಿಲ್ಲ. ಕೊನೆಗೆ ಸರ್ಕಾರಿ ಜಾಗದಲ್ಲಿ ಸ್ವಯಂಸೇವಕರ ನೆರವಿನಿಂದ ಅಂತ್ಯಸಂಸ್ಕಾರ ನೆರವೇರಿಸಲಾಯಿತು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.