ADVERTISEMENT

ಮೈದುಂಬಿದ ಮಲೆಮಹದೇಶ್ವರ, ಕಾವೇರಿ ವನ್ಯಧಾಮ

ಅವಧಿಗೂ ಮುನ್ನ ವರುಣನ ಆಗಮನ; ಹಸಿರಿನಿಂದ ಕಂಗೊಳಿಸುತ್ತಿರುವ ಕಾನನ; ಕಾಡ್ಗಿಚ್ಚು ಭೀತಿ ನಿವಾರಣೆ, ಸಮೃದ್ಧ ಮೇವು ಲಭ್ಯ

ಬಿ.ಬಸವರಾಜು
Published 1 ಜೂನ್ 2025, 6:10 IST
Last Updated 1 ಜೂನ್ 2025, 6:10 IST
ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಹಸಿರಿನಿಂದ ಕಂಗೊಳಿಸುತ್ತಿರುವ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಧಾಮ
ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಹಸಿರಿನಿಂದ ಕಂಗೊಳಿಸುತ್ತಿರುವ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಧಾಮ    

ಹನೂರು: ಈ ವರ್ಷ ವಾಡಿಕೆಗಿಂತ ಮೊದಲೇ ಉತ್ತಮ ಮಳೆ ಬಿದ್ದ ಪರಿಣಾಮ ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಧಾಮಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಹಚ್ಚ ಹಸಿರಿನ ಕಾನನದ ನಡುವೆ ಸಫಾರಿ ಮಾಡುತ್ತಿರುವ ಪ್ರವಾಸಿಗರಿಗೂ ಪ್ರಾಣಿಗಳು ದರ್ಶನ ನೀಡುತ್ತಿವೆ. ಮತ್ತೊಂದೆಡೆ ಕಾಡಂಚಿನ ಜಮೀನುಗಳ ಮೇಲೆ ಕಾಡುಪ್ರಾಣಿಗಳ ಹಾವಳಿಯೂ ಕಡಿಮೆಯಾಗಿದೆ.

ರಾಜ್ಯದಲ್ಲೇ ಹೆಚ್ಚು ವಿಸ್ತೀರ್ಣ ಹೊಂದಿರುವ ವನ್ಯಧಾಮ ಎಂಬ ಹೆಗ್ಗಳಿಕೆಗೆ ಭಾಜನವಾಗಿರುವ ಕಾವೇರಿ ವನ್ಯಧಾಮ ಮತ್ತು ಮಲೆಮಹದೇಶ್ವರ ವನ್ಯಧಾಮಗಳು ಬೇಸಿಗೆಯಲ್ಲಿ ಕಳೆಗುಂದಿದ್ದವು. ಈ ವರ್ಷ ಉತ್ತಮ ಮಳೆ ಸುರಿಯುತ್ತಿರುವುದರಿಂದ ಉಭಯ ವನ್ಯಜೀವಿ ಧಾಮಗಳು ಪ್ರಕೃತಿ ಪ್ರಿಯರ ಕಣ್ಮನ ಸೆಳೆಯುತ್ತಿವೆ. ಬೇಸಿಗೆಯಲ್ಲಿ ನೀರು, ಮೇವಿಗೆ ಪರದಾಡುತ್ತಿದ್ದ ವನ್ಯಜೀವಿಗಳಿಗೆ ಸಮೃದ್ಧ ಮೇವು ದೊರೆಯುತ್ತಿದ್ದು ಮಳೆ ಹರ್ಷವನ್ನುಂಟು ಮಾಡಿದೆ.

ಹನೂರು ತಾಲ್ಲೂಕು ಶೇ 60ರಷ್ಟು ಅರಣ್ಯದಿಂದ ಆವೃತವಾಗಿರುವ ವಿಶಿಷ್ಟ ಭೂಪ್ರದೇಶ. ಇಷ್ಟಾಗಿಯೂ ಈ ಭಾಗದಲ್ಲಿ ಪ್ರತಿ ವರ್ಷ ಜೂನ್ ಮೊದಲ ವಾರದಿಂದ ಮಳೆ ಆರಂಭವಾಗುವುದು ವಾಡಿಕೆ. ಆದರೆ, ಈ ಬಾರಿ ಮೇ ತಿಂಗಳಲ್ಲೇ ಮಳೆ ಆರಂಭವಾಗಿರುವುದರಿಂದ ಭೂಭಾಗ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಮರ–ಗಿಡಗಳು ಚಿಗರೊಡೆದು ಹಸಿರ ರಾಶಿಯನ್ನು ತುಂಬಿಕೊಂಡು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.

ADVERTISEMENT

ಪ್ರತಿವರ್ಷ ಬೇಸಿಗೆಯ ಸಂದರ್ಭ ಎರಡೂ ಅರಣ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡ್ಗಿಚ್ಚು ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿತ್ತು. ಕಾವೇರಿ ವನ್ಯಧಾಮ ವ್ಯಾಪ್ತಿಯ ಹನೂರು, ಕೌದಳ್ಳಿ, ಕೊತ್ತನೂರು ವನ್ಯಜೀವಿ ವಲಯ ಹಾಗೂ ಮಲೆಮಹದೇಶ್ವರ ವನ್ಯಧಾಮದ ಕೊಳ್ಳೇಗಾಲ, ಹನೂರು, ರಾಮಾಪುರ, ಹೂಗ್ಯಂ ಹಾಗೂ ಪಿ.ಜಿ ಪಾಳ್ಯ ವನ್ಯಜೀವಿ ವಲಯಗಳಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡು ಅಪಾರ ಪ್ರಮಾಣದ ಕಾಡು ಬೆಂಕಿಯ ಕೆನ್ನಾಲಿಗೆಗೆ ಭಸ್ಮವಾಗಿತ್ತು.

ಕಿಡಿಗೇಡಿಗಳು ಹಾಕುತ್ತಿದ್ದ ಬೆಂಕಿಯಿಂದ ಅರಣ್ಯದೊಳಗಿನ ಅಪರೂಪದ ಜೀವವೈವಿಧ್ಯಕ್ಕೂ ಅಪಾಯ ಎದುರಾಗುತ್ತಿತ್ತು. ಪ್ರಾಣಿಗಳಿಗೆ ಕುಡಿಯುವ ನೀರು, ಸಮರ್ಪಕ ಆಹಾರದ ಕೊರತೆ ಕಾಡುತ್ತಿತ್ತು. ಪ್ರತಿ ವರ್ಷ ಮೇ ಮುಗಿಯುವವರೆಗೂ ಬೆಂಕಿಯ ಆತಂಕ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕಾಡುತ್ತಿತ್ತು.

ಈ ಬಾರಿ ಮುಂಗಾರು ಅವಧಿಪೂರ್ವದಲ್ಲೇ ಕಾಲಿಟ್ಟಿರುವುದರಿಂದ ಗಂಭೀರ ಸಮಸ್ಯೆಗಳು ಎದುರಾಗಿಲ್ಲ. ವರುಣನ ಆಗಮನದಿಂದ ಅರಣ್ಯ ಇಲಾಖೆ ಸಿಬ್ಬಂದಿ ನಿಟ್ಟುಸಿರು ಬಿಡುವಂತಾಗಿದೆ. ಬೆಂಕಿಬಿದ್ದ ಜಾಗದಲ್ಲಿ ಹೊಸ ಚಿಗುರು ಮೂಡಿದ್ದು ಎಲ್ಲೆಡೆ ಹಸಿರು ಆವರಿಸು‌ತ್ತಿದೆ.

ಸಫಾರಿಯಲ್ಲಿ ಪ್ರವಾಸಿಗರಿಗೆ ಕಾಣಿಸಿಕೊಂಡ ಹುಲಿ
ಅರಣ್ಯದೊಳಗೆ ಗುಂಪಾಗಿ ಕಾಣಿಸಿಕೊಂಡ ಕಾಡೆಮ್ಮೆಗಳು

ಕಣ್ಮನ ಸೆಳೆಯುತ್ತಿರುವ ಉಭಯ ವನ್ಯಧಾಮಗಳು ಸಫಾರಿಯಲ್ಲೂ ಪ್ರಾಣಿಗಳ ದರ್ಶನ; ಪ್ರವಾಸಿಗರಲ್ಲಿ ಸಂತಸ ಮಳೆಯ ಸಿಂಚನದ ನಡುವೆ ವಿಶಿಷ್ಟ ಸಫಾರಿ ಅನುಭವ

ಸಫಾರಿಗರಿಗೆ ವನ್ಯಪ್ರಾಣಿಗಳ ದರ್ಶನ ಉತ್ತಮ ಮಳೆಯಾಗಿ ಕಾಡು ಹಸಿರಿನಿಂದ ಕಂಗೊಳಿಸುತ್ತಿರುವ ಬೆನ್ನಲ್ಲೇ ಸಫಾರಿಗೆ ಬರುವವರಿಗೆ ವನ್ಯಪ್ರಾಣಿಗಳ ದರ್ಶನವಾಗುತ್ತಿದೆ. ಹನೂರು ಹಾಗೂ ಪಿ.ಜಿ ಪಾಳ್ಯ ವನ್ಯಜೀವಿ ವಲಯದಲ್ಲಿರುವ ಸಫಾರಿಗೆ ಪ್ರವಾಸಿಗರು ಹೆಚ್ಚಾಗಿ ಬರುತ್ತಿದ್ದು ಪ್ರಕೃತಿಯ ಸಹಜ ಸೌಂದರ್ಯ ಹಾಗೂ ಕಾಡುಪ್ರಾಣಿಗಳ ಸ್ವಚ್ಛಂದ ಓಡಾಟವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಬೆಳಿಗ್ಗೆ ಹಾಗೂ ಸಂಜೆ ವೇಳೆ ಸಫಾರಿಯಲ್ಲಿ ಪಾಲ್ಗೊಳ್ಳುತ್ತಿರುವ ಪ್ರವಾಸಿಗರಿಗೆ ಹೆಚ್ಚು ಪ್ರಾಣಿಗಳು ಕಾಣಸಿಗುತ್ತಿವೆ. ಶನಿವಾರ ಬೆಳಿಗ್ಗೆಯೂ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಹುಲಿ ದರ್ಶನವಾಗಿದೆ. ಹಿಂದೆಯೂ ಎರಡು ಮೂರು ಬಾರಿ ಪಿ.ಜಿ ಪಾಳ್ಯ ಸಫಾರಿಯಲ್ಲಿ ಹುಲಿ ಕಾಣಿಸಿಕೊಂಡಿತ್ತು. ಹನೂರು ಸಫಾರಿಯಲ್ಲೂ ಎರಡು ಬಾರಿ ಹುಲಿ ಕಾಣಿಸಿಕೊಂಡಿದೆ. ಪಿ.ಜಿ ಪಾಳ್ಯ ಸಫಾರಿ ವೇಳೆ ಕಾಣಿಸಿಕೊಂಡ ಕಾಟಿಗಳ ಹಿಂಡು ಶನಿವಾರ ಸಫಾರಿಯಲ್ಲಿ ಕಂಡು ಕಾಣಿಸಿಕೊಂಡ ಹುಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.