ADVERTISEMENT

ದಾರಿಯಲ್ಲೇ ಹೆಣ್ಣುಮಗುವಿಗೆ ಜನ್ಮ ನೀಡಿದ ಗರ್ಭಿಣಿ

ಮಹದೇಶ್ವರ ಬೆಟ್ಟದ ಆಣೆಹೊಲ ಗ್ರಾಮದಲ್ಲಿ ಘಟನೆ, ಮಗು, ತಾಯಿ ಸುರಕ್ಷಿತ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 15:21 IST
Last Updated 9 ಅಕ್ಟೋಬರ್ 2020, 15:21 IST
ಮಹಿಳೆ ಹಾಗೂ ಅವರ ಹೆಣ್ಣು ಮಗು ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಿಳೆ ಹಾಗೂ ಅವರ ಹೆಣ್ಣು ಮಗು ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.   

ಮಹದೇಶ್ವರ ಬೆಟ್ಟ: ಹೆರಿಗೆಗಾಗಿ ಆಸ್ಪತ್ರೆಗೆ ಕಾಲ್ನಡಿಗೆಯಲ್ಲಿ ಬರುತ್ತಿರುವಾಗ ದಾರಿ ಮಧ್ಯೆಯೇ ಗರ್ಭಿಣಿಯೊಬ್ಬರು ಹೆಣ್ಣುಮಗುವಿಗೆ ಜನ್ಮ ನೀಡಿದ ಪ್ರಕರಣ ಸಮೀಪದ ಆಣೆಹೊಲ ಗ್ರಾಮದಲ್ಲಿಗುರುವಾರ ರಾತ್ರಿ ಜರುಗಿದೆ.

ಗ್ರಾಮದ ವೀರಣ್ಣ ಎಂಬುವವರ ಪತ್ನಿ ಕಮಲ ಅವರು ತುಂಬು ಗರ್ಭಿಣಿಯಾಗಿದ್ದರು. ಗುರುವಾರ ರಾತ್ರಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಅವರ ಮನೆಗೆ ಸರಿಯಾದ ರಸ್ತೆ ಇಲ್ಲದೇ ಇರುವುದರಿಂದ ಬೆಟ್ಟದಲ್ಲಿರುವ ಪ್ರಾಥಮಿಕ ಚಿಕಿತ್ಸಾ ಕೇಂದ್ರಕ್ಕೆ ನಡೆದುಕೊಂಡೇ ಬರಲು ಮನೆಯಿಂದ ಇಬ್ಬರೂ ಹೊರಟಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಮನೆಯಿಂದ 250 ಮೀಟರ್‌ ದೂರ ಬಂದಾಗ ಹೆರಿಗೆ ನೋವು ತೀವ್ರಗೊಂಡು ದಾರಿ ಮಧ್ಯೆಯೇ ಮಗುವಿಗೆ ಜನ್ಮ ನೀಡಿದ್ದಾರೆ.

ನಂತರ ಸ್ಥಳೀಯ ಆಶಾ ಕಾರ್ಯಕರ್ತೆ ಹಾಗೂ ಗ್ರಾಮದವರ ನೆರವಿನಿಂದ ಬಾಡಿಗೆ ವಾಹನದಲ್ಲಿ ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು.

ADVERTISEMENT

ಆಸ್ಪತ್ರೆವೈದ್ಯಾಧಿಕಾರಿ ಡಾ.ಮುಕುಂದ್ ಹಾಗೂ ನರ್ಸ್‌ಗಳು ಅವರಿಗೆ ತಕ್ಷಣ ಚಿಕಿತ್ಸೆ ನೀಡಿ ಉಪಚರಿಸಿದ್ದು, ತಾಯಿ, ಮಗು ಇಬ್ಬರೂ ಆರೋಗ್ಯದಿಂದ ಇದ್ದಾರೆ.

‘ರಾತ್ರಿ ವಾಹನಹೋಗಲುಸಾಧ್ಯವಾಗದೇ ಇದ್ದುದರಿಂದ ಆಸ್ಪತ್ರೆಗೆ ನಡೆದುಕೊಂಡೇ ಹೊಗುತ್ತಿದ್ದೆವು. ದಾರಿ ಮಧ್ಯೆಯೇ ಹೆರಿಗೆ ಆಯಿತು. ಆಸ್ಪತ್ರೆಗೆ ದಾಖಲಾದ ನಂತರ ವೈದ್ಯರು ಹಾಗೂ ನರ್ಸ್‌ಗಳು ಚೆನ್ನಾಗಿ ನೋಡಿಕೊಂಡರು. ಇದುನನಗೆಮೂರನೇ ಹೆರಿಗೆ’ ಎಂದು ಕಮಲ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಘಟನೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಮುಕುಂದ್‌ ಅವರು ‘ಗುರುವಾರ ರಾತ್ರಿ 9.15ರ ಸುಮಾರಿಗೆ ನಮಗೆ ಮಾಹಿತಿ ಸಿಕ್ಕಿತು. ತಕ್ಷಣ ವೈದ್ಯಕೀಯ ಮಹಿಳಾ ಸಹಾಯಕಿಯರನ್ನು ಸ್ಥಳಕ್ಕೆ ಕಳುಹಿಸಿ ತಾಯಿ ಮತ್ತು ಮಗುವನ್ನು ಸುರಕ್ಷಿತವಾಗಿ ಕೇಂದ್ರಕ್ಕೆ ಕರೆತರಲಾಯಿತು.ಹೊಕ್ಕಳುಬಳ್ಳಿಯನ್ನು ಕತ್ತರಿಸಿ ಚಿಕಿತ್ಸೆ ನೀಡಿದೆವು. ತಾಯಿಹಾಗೂಮಗು ಆರೋಗ್ಯದಿಂದ ಇದ್ದಾರೆ’ ಎಂದರು.

ಸೌಲಭ್ಯಕ್ಕೆ ಆಗ್ರಹ:ಆಣೆಹೊಲ ಗ್ರಾಮವು ಬೆಟ್ಟಕ್ಕೆ ಹೊಂದಿಕೊಂಡಂತೆ ಇದ್ದು, ಒಂದೂವರೆ ಕಿ.ಮೀ ದೂರದಲ್ಲಿದೆ.‌ವೀರಣ್ಣ ಅವರ ಮನೆ ಇರುವ ಜಾಗ ಆಣೆಹೊಲ ಗ್ರಾಮದಿಂದ ಅರ್ಧ ಕಿ.ಮೀ ದೂರದಲ್ಲಿದ್ದು, ಅಲ್ಲಿಗೆ ವಾಹನ ಹೋಗಲು ಸಾಧ್ಯವಿಲ್ಲ.

ಈ ಗ್ರಾಮದಲ್ಲಿ 20 ಕುಟುಂಬಗಳು ವಾಸವಿದ್ದು, ವ್ಯವಸಾಯವೇ ಇವರಿಗೆ ಜೀವನಾಧಾರ. ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆಯೂ ಇದೆ. ತುರ್ತು ಸಂದರ್ಭದಲ್ಲಿ ಯಾರನ್ನಾದರೂ ಸಂಪರ್ಕಿಸುವುದಕ್ಕೂ ಆಗುವುದಿಲ್ಲ. ಗ್ರಾಮಗಳಿಗೆ ಕನಿಷ್ಠ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.