ADVERTISEMENT

ಭತ್ತ, ರಾಗಿ ಉತ್ತಮ ಇಳುವರಿ ನಿರೀಕ್ಷೆ: ಖರೀದಿ ಕೇಂದ್ರಕ್ಕೆ ರೈತರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 7:56 IST
Last Updated 3 ಡಿಸೆಂಬರ್ 2025, 7:56 IST
ಯಳಂದೂರು ತಾಲ್ಲೂಕಿನ ಅಂಬಳೆಯಲ್ಲಿ ಕಟಾವಿನ ಹಂತದಲ್ಲಿರುವ ಭತ್ತದ ಬೆಳೆ
ಯಳಂದೂರು ತಾಲ್ಲೂಕಿನ ಅಂಬಳೆಯಲ್ಲಿ ಕಟಾವಿನ ಹಂತದಲ್ಲಿರುವ ಭತ್ತದ ಬೆಳೆ   

ಯಳಂದೂರು: ‘ಇದೇ ತಿಂಗಳಿಂದ ಭತ್ತ ಕೊಯ್ಲು ಆರಂಭವಾಗಲಿದ್ದು, ಕಟಾವು ಮಾಡಿದ ಭತ್ತ ಕೊಳ್ಳುವ ನಿಟ್ಟಿನಲ್ಲಿ ಪ್ರತಿ ತಾಲ್ಲೂಕಿನಲ್ಲೂ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು’ ಎಂದು ರೈತರು ಒತ್ತಾಯಿಸಿದ್ದಾರೆ.

ತಾಲ್ಲೂಕಿನಲ್ಲಿ 3 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿಯಾಗಿದೆ. ಉತ್ತಮ ಮಳೆ ಕಾರಣ ಬೆಳೆಯೂ ಸಮೃದ್ಧವಾಗಿ ಬೆಳೆದಿದೆ. ಡಿಸೆಂಬರ್ ಮೊದಲ ವಾರದಿಂದ ಕೊಯ್ಲಿಗೆ ಕೃಷಿಕರು ಸಿದ್ಧತೆ ನಡೆಸಿದ್ದಾರೆ. ಕೆಲವೆಡೆ ಕಟಾವು ಯಂತ್ರಗಳು ಬಂದಿದ್ದು, ರಾಗಿ ಮತ್ತು ಭತ್ತದ ಕೊಯ್ಲು ಆರಂಭ ಆಗಲಿದೆ.

‘ದಿತ್ವಾ ಚಂಡಮಾರುತದಿಂದ ಇನ್ನೂ ವಾತಾವರಣದಲ್ಲಿ ಶೀತ ಗಾಳಿ ಬೀಸುತ್ತಿದೆ. ಭತ್ತದ ತಾಕು ಮಳೆ, ಗಾಳಿಗೆ ಬಾಗಿದೆ. ಮುಂದಿನ ದಿನಗಳಲ್ಲಿ ಹವಾಮಾನ ಸಹಕಾರಿಯಾದರೆ ಬೆಳೆಗಾರರು ಕಟಾವು ಆರಂಭಿಸಲಿದ್ದಾರೆ. ಆದರೆ, ಗ್ರಾಮೀಣ ಪ್ರದೇಶಗಲ್ಲಿ ರೈತರು ಕಾಳು ಸಂಗ್ರಹ ಮಾಡುವ ಸುಸಜ್ಜಿತ ವ್ಯವಸ್ಥೆ ಇಲ್ಲ. ಹಾಗಾಗಿ, ಕೆಲವರು ಮಧ್ಯವರ್ತಿಗಳಿಗೆ ತಕ್ಷಣವೇ ಮಾರಾಟ ಮಾಡುತ್ತಾರೆ. ಈ ದೆಸೆಯಲ್ಲಿ ಶಾಸಕರು ಮತ್ತು ಕೃಷಿ ಅಧಿಕಾರಿಗಳು ಖರೀದಿ ಕೇಂದ್ರ ತೆರೆಯಲು ಮುಂದಾಗಬೇಕು’ ಎಂದು ಭತ್ತ ಸಾಗುವಳಿದಾರ ಚಂದ್ರಶೇಖರ್ ಹಾಗೂ ನಂಜಶೆಟ್ಟಿ ಒತ್ತಾಯಿಸಿದರು.

ADVERTISEMENT

ಹಿಂಗಾರು ಬೆಳೆ ಖರೀದಿಗೆ ಅವಕಾಶ ಇಲ್ಲ: ‘ಹಿಂಗಾರು ಬೆಳೆಗಳಾದ ಭತ್ತ, ರಾಗಿ ಕೊಳ್ಳಲು ಖರೀದಿ ಕೇಂದ್ರ ತೆರೆಯಲು ಅವಕಾಶವಿಲ್ಲ. ಈ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ’ ಎಂದು ಕೃಷಿ ಇಲಾಖೆಯ ಅಧಿಕಾರಿ ವೈ.ಎನ್.ಅಮೃತೇಶ್ವರ ತಿಳಿಸಿದರು.

ಶಾಸಕ ಭರವಸೆ

‘ರೈತರ ಸಮಸ್ಯೆಗಳ ಬಗ್ಗೆ ಕೃಷಿ ಸಚಿವ ಕೃಷ್ಣಬೈರೆಗೌಡರ ಗಮನಕ್ಕೆ ತರಲಾಗುವುದು. ಖರೀದಿ ಕೇಂದ್ರಗಳು ವರ್ಷಪೂರ್ತಿ ಕಾರ್ಯನಿರ್ವಹಿಸುವಂತೆ ಮನವಿ ಸಲ್ಲಿಸಲಾಗುವುದು. ಈ ಬಗ್ಗೆ ಕೃಷಿಕರು ಆತಂಕ ಪಡುವ ಅಗತ್ಯ ಇಲ್ಲ’ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.