ಯಳಂದೂರು: ತಾಲ್ಲೂಕಿನ ಟಿ.ಹೊಸೂರು ಗ್ರಾಮದ ಸ್ಮಶಾನ ಜಾಗವನ್ನು ರೈತ ಮುಖಂಡರು ಒತ್ತುವರಿ ಮಾಡಿಕೊಂಡು, ಶವ ಸಂಸ್ಕಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿ ಸೋಮವಾರ ಸಾರ್ವಜನಿಕರು ಸ್ಮಶಾನದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.
ಮುಖಂಡ ಮಹದೇವೇಗೌಡ ಮಾತನಾಡಿ, ‘2005 ಮತ್ತು 2006ರಲ್ಲಿ ಸರ್ವೆ ನಂಬರ್ 48ರಲ್ಲಿ 1 ಎಕರೆ 10 ಗುಂಟೆ ಸ್ಥಳವನ್ನು ಸರ್ಕಾರ ಸ್ಮಶಾನಕ್ಕೆ ಮಂಜೂರು ಮಾಡಿದೆ. ಡಿಸೆಂಬರ್ 2024ರಲ್ಲಿ ಸರ್ವೇ ಅಧಿಕಾರಿಗಳು ಅಳತೆ ಮಾಡಿ ಗಡಿ ಕಲ್ಲು ನೆಟ್ಟಿದ್ದಾರೆ. ಗ್ರಾಮಸ್ಥರು ಶವ ಸಂಸ್ಕಾರಕ್ಕೆ ತೆರಳಿದಾಗ ರೈತ ಮುಖಂಡ ಸ್ವಾಮಿಗೌಡ ಅಳತೆ ಕಲ್ಲು ಕಿತ್ತು ಹಾಕಿದ್ದು ಕಂಡುಬಂದಿದೆ. ಪದೇಪದೇ ಶವ ಸಂಸ್ಕಾರ ಸಮಯದಲ್ಲಿ ಅಡಚಣೆ ಉಂಟುಮಾಡುತ್ತಾರೆ. ಈ ಬಗ್ಗೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಹಶೀಲ್ದಾರ್ ಭೇಟಿ: ಗ್ರಾಮಸ್ಥರ ಪ್ರತಿಭಟನೆ ಹಿನ್ನೆಲೆಯಲ್ಲಿ ತಹಶೀಲ್ದಾರ್ ಎಸ್.ಎನ್.ನಯನ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಆಲಿಸಿದರು. ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಪಿಎಸ್ಐ ಕರಿಬಸಪ್ಪ, ಗ್ರಾಮದ ಮಹದೇವಗೌಡ, ಮುಖಂಡರಾದ ಚಂದ್ರಶೇಖರ್, ಶ್ರೀಧರ್, ಯಜಮಾನರಾದ ರಾಜ್, ಲಿಂಗರಾಜ್, ರಂಗಸ್ವಾಮಿ, ನಿಂಗರಾಜ್, ಲಿಂಗರಾಜ್, ದಲಿತ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.