
ಯಳಂದೂರು: ‘ಮಕ್ಕಳು ಕಲಿಕೆಯ ಹಂತದಲ್ಲಿ ವಿವಿಧ ಮಾನಸಿಕ ತಳಮಳಕ್ಕೆ ತುತ್ತಾಗುವ ಸಾಧ್ಯತೆ ಇದ್ದು, ಪೋಷಕರು ಅವರ ಕಡೆಗೆ ಹೆಚ್ಚಿನ ಗಮನ ಹರಿಸಬೇಕು’ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ ಹೇಳಿದರು.
ಪಟ್ಟಣದ ಎಸ್ಡಿವಿಎಸ್ ಶಾಲೆಯಲ್ಲಿ ಮಕ್ಕಳ ದಿನದ ಹಿನ್ನಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಮಕ್ಕಳ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
‘ಪಾಲಕ, ಬಾಲಕ ಮತ್ತು ಶಿಕ್ಷಕರ ಸಂಯೋಜನೆಯಲ್ಲಿ ವಿದ್ಯಾರ್ಥಿಗಳನ್ನು ಉತ್ತಮ ನಾಗರೀಕರನ್ನಾಗಿ ಸೃಷ್ಟಿಸಲು ಸಾಧ್ಯ, ಉತ್ತಮ ಪುಸ್ತಕಗಳ ಓದು, ಸಹಪಠ್ಯ ಚಟುವಟಿಕೆ ಕ್ರೀಡೆ ಹಾಗೂ ಪತ್ರಿಕೆಗಳನ್ನು ಪರಿಚಯಿಸುವ ಮೂಲಕ ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಮಕ್ಕಳಿಗೆ ತಿಳಿಸುವ ಕೆಲಸ ಮಾಡಬೇಕು. ಸಾಮಾಜಿಕ ಜಾಲತಾಣಗಳಿಂದ ಉಂಟಾಗುತ್ತಿರುವ ತೊಂದರೆಗಳ ಬಗ್ಗೆ ಎಳೆಯರಿಗೆ ಮನದಟ್ಟು ಮಾಡಿಕೊಡಬೇಕು ’ ಎಂದರು.
ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಹತ್ತಾರು ಆಟೋಟ ಸ್ಪರ್ಧೆಗಳನ್ನು ಆಯೋಜಿಸಿ ಶಿಕ್ಷಕರು ಬಹುಮಾನ ವಿತರಿಸಿದರು. ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಮತ್ತು ಇಂದಿರಗಾಂಧಿ ಅವರ ಬಗ್ಗೆ ತಿಳಿಸಲಾಯಿತು.
ಮುಖ್ಯಶಿಕ್ಷಕ ವೀರಭದ್ರಸ್ವಾಮಿ. ಶಿಕ್ಷಕರಾದ ನಂದಿನಿ, ಮಂಜುನಾಥ್, ಶಿವಮೂರ್ತಿ, ಬಸವರಾಜು, ರಾಜಶೇಖರ್, ವಿ.ರೂಪಾ, ರಂಜಿತಾ ಹಾಗೂ ಇತರರು ಇದ್ದರು.