ADVERTISEMENT

ಯಳಂದೂರು: ರಂಗನಾಥಸ್ವಾಮಿ ಚಿಕ್ಕ ಜಾತ್ರೆ ನಾಳೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 5:39 IST
Last Updated 15 ಜನವರಿ 2026, 5:39 IST
ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟದ ರಂಗನಾಥಸ್ವಾಮಿ ದೇವಾಲಯದಲ್ಲಿ ಚಿಕ್ಕತೇರು ಆಚರಣೆಯ ಹಿನ್ನಲೆಯಲ್ಲಿ ಬುಧವಾರ ತೇರು ಅಲಂಕರಿಸುವ ಕಾರ್ಯ ನಡೆಯಿತು
ಯಳಂದೂರು ತಾಲ್ಲೂಕಿನ ಬಿಳಿಗಿರಿಬೆಟ್ಟದ ರಂಗನಾಥಸ್ವಾಮಿ ದೇವಾಲಯದಲ್ಲಿ ಚಿಕ್ಕತೇರು ಆಚರಣೆಯ ಹಿನ್ನಲೆಯಲ್ಲಿ ಬುಧವಾರ ತೇರು ಅಲಂಕರಿಸುವ ಕಾರ್ಯ ನಡೆಯಿತು   

ಯಳಂದೂರು: ತಾಲ್ಲೂಕಿನಲ್ಲಿ ಮಳೆ ಬೆಳೆ ಸಮೃದ್ಧವಾಗಿ ರೈತರ ಕೈಹಿಡಿದಿದೆ. ಸಂಕ್ರಾಂತಿ ಹಬ್ಬದ ದಿನ ಭತ್ತ, ರಾಗಿಯ ರಾಶಿಯ ಪೂಜೆಗೆ ರೈತರು ಸಿದ್ಧತೆ ನಡೆಸಿದ್ದಾರೆ.

ಹೆಣ್ಣು ಮಕ್ಕಳು ಹೊಸ ವಸ್ತ್ರ ತೊಟ್ಟು ಮಕರ ಸಂಕ್ರಮಣದಂದು ಎಳ್ಳು ಬೆಲ್ಲ ಬೀರಲು ಸಿದ್ಧರಾಗಿದ್ದಾರೆ. ಜಾನುವಾರು ಸಾಕಣೆದಾರರು  ವರ್ಷಪೂರ್ತಿ ದುಡಿದ ದನ ಕರುಗಳನ್ನು ಶುಚಿಗೊಳಿಸಿ ಕೊಟ್ಟಿಗೆ ಶುದ್ಧಗೊಳಿಸಿ ಕಿಚ್ಚು ಹಾಯಿಸಲು ಅಣಿಯಾಗಿದ್ದಾರೆ.

ಹಬ್ಬದ ಮಾರನೆ ದಿನ (ಜ.16) ಬಿಳಿಗಿರಿಬೆಟ್ಟದಲ್ಲಿ ರಂಗನಾಥಸ್ವಾಮಿಯ ಸಂಕ್ರಾಂತಿ ಚಿಕ್ಕತೇರು ಕಳೆಗಟ್ಟುತ್ತದೆ. ಇದಕ್ಕೆ ಸೋಲಿಗರು ಗೆಡ್ಡೆ ಗೆಣಸು ಸಂಗ್ರಹಿಸಿ, ಹಬ್ಬದ ಸಡಗರ ಹೆಚ್ಚಿಸುತ್ತಾರೆ. ಸ್ಥಳೀಯರು ಪೂಜಾ ಕೈಂಕರ್ಯದಲ್ಲಿ ಭಾಗಿಯಾಗುತ್ತಾರೆ. ತೇರು ಸಿದ್ಧಗೊಳಿಸುವ ಕಾಯಕವನ್ನು ಭಕ್ತರು ವ್ರತದಂತೆ ಪಾಲಿಸುತ್ತಾರೆ. ಕಂದ ಮೂಲ ಮತ್ತು ಫಲ ಪುಷ್ಪಗಳ ನೈವೇದ್ಯ ಸಮರ್ಪಿಸುವ ಪದ್ಧತಿ ಬುಡಕಟ್ಟು ಜನರಲ್ಲಿ ಇದೆ.

ADVERTISEMENT

ರೈತರು ಈ ಬಾರಿ ಉತ್ತಮ ಧಾರಣೆಗೆ ಭತ್ತ ಮತ್ತು ರಾಗಿ ಮಾರಾಟ ಮಾಡಿದ್ದಾರೆ. ವ್ಯಾಪಾರಿಗಳು ಹೊಲ, ಗದ್ದೆಗಳಿಗೆ ತೆರಳಿ ಕೊಂಡರು. ಇದರಿಂದ ಮನೆವಾರ್ತೆ, ಸಾಗುವಳಿ ಹಾಗೂ ಮಕ್ಕಳ ಹೊಸ ಧಿರಿಸು ಕೊಳ್ಳುವ ಕೆಲಸಗಳಿಗೆ ಆದಾಯ ನೆರವಾಗಿದೆ. ಮನೆ ಮಂದಿ ಎಳ್ಳು, ಬೆಲ್ಲ, ಕೊಬ್ಬರಿ, ಹುರಿಗಡಲೆ, ಬೆಲ್ಲದ ಅಚ್ಚು ಮತ್ತು ಕಬ್ಬನ್ನು ಇಟ್ಟು ಪೂಜಿಸಲು ಬೇಕಾದ ವಸ್ತುಗಳ ಖರೀದಿಗೆ ಮುಂದಾಗಿದ್ದಾರೆ ಎಂದು ರೈತ ಅಂಬಳೆ ಮಹೇಶ ಹೇಳಿದರು.

ಸಂಕ್ರಾಂತಿ ಬಂದರೆ ಹಿಗ್ಗಿನ ಜೊತೆ ಸುಗ್ಗಿಯೂ ಸೇರಿ ಸಂತಸ ಮನೆ ಮಾಡುತ್ತದೆ. ಸಾಗುವಳಿದಾರರು ಕೊಯ್ಲಾದ ಭತ್ತವನ್ನು ರಾಶಿ ಹಾಕಿ ಪೂಜೆ ಪುನಸ್ಕಾರದಲ್ಲಿ ತೊಡಗುವರು. ಕೃಷಿಯಲ್ಲಿ ಯಾಂತ್ರೀಕರಣ ಹೆಚ್ಚಾದ ನಂತರ ರೈತರು ಒಕ್ಕಣೆ ಮಾಡಿದ ಭತ್ತ, ದವಸ ಧಾನ್ಯವನ್ನು ಎತ್ತಿನ ಗಾಡಿಯಲ್ಲಿ ಹಾಕಿಕೊಂಡು ತೆರಳುವ ದೃಶ್ಯಗಳು ನೇಪತ್ಯಕ್ಕೆ ಸರಿದಿದೆ ಎನ್ನುತ್ತಾರೆ ಬೇಸಾಯಗಾರ ಮದ್ದೂರು ಹನುಮಂತ.

ನಾಳೆ ರಂಗಪ್ಪನ ರಥೋತ್ಸವ: ಜ.15 ಉತ್ತರಾಯಣ ಪುಣ್ಯಕಾಲದ ಆರಂಭ ಆಗಲಿದೆ. ಧನುರ್ಮಾಸ ಪೂಜಾ ಕಾರ್ಯ ಸಮಾಪ್ತಿಯಾಗುತ್ತದೆ. ಜ.16ರಂದು ಬೆಳಿಗಿರಿಬೆಟ್ಟದಲ್ಲಿ ರಂಗನಾಥಸ್ವಾಮಿ ಚಿಕ್ಕಜಾತ್ರೆ ವೈಭವದಿಂದ ನಡೆಯಲಿದೆ. ಈ ವೇಳೆ ರೈತರು ಹೊಲ ಗದ್ದೆಗಳಲ್ಲಿ ಬೆಳೆದ ಭತ್ತ, ರಾಗಿಯನ್ನು ತೇರಿಗೆ ಎಸೆದು, ಹರಕೆ ಒಪ್ಪಿಸುತ್ತಾರೆ. ರಥಕ್ಕೆ ಕಬ್ಬು, ಬಾಳೆ, ಮಾವಿನ ತೋರಣಗಳ ಅಲಂಕಾರ ಮಾಡಿ ಹರಕೆ ತೀರಿಸುವರು. ಭಕ್ತರು ಹಣ್ಣು ಕಾಯಿ ಪೂಜೆ ನೆರವೇರಿಸಿ, ಹಣ್ಣು ಜವನ ಎಸೆದು ಧನ್ಯತೆ ಮೆರೆಯುವ ವಾಡಿಕೆ ನಡೆದುಕೊಂಡು ಬಂದಿದೆ ಎನ್ನುತ್ತಾರೆ ದೇವಳದ ಪಾರುಪತ್ತೆಗಾರ ರಾಜು.

ವೈ.ಕೆ.ಮೋಳೆ ಗ್ರಾಮದ ಕೃಷಿಕರು ಭತ್ತ ಮಾರಾಟ ಮಾಡಲು ಸಿದ್ಧತೆ ನಡೆಸಿದರು
ವಿದ್ಯುತ್ ಅಲಂಕಾರದಲ್ಲಿ ರಂಗನಾಥಸ್ವಾಮಿ ರಾಜಗೋಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.