ADVERTISEMENT

ಚಾಮರಾಜನಗರ: ಬೈಕ್‌ಗಳ ಡಿಕ್ಕಿಯಿಂದಾಗಿ ಒಬ್ಬ ಸಾವು, ಮೂವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 14:21 IST
Last Updated 15 ಜುಲೈ 2020, 14:21 IST
ಅಪಘಾತ ಸಂಭವಿಸಿದ ಸ್ಥಳದಲ್ಲಿ ಬೈಕ್‌ ಹಾಗೂ ಸವಾರರು ಬಿದ್ದಿರುವುದು
ಅಪಘಾತ ಸಂಭವಿಸಿದ ಸ್ಥಳದಲ್ಲಿ ಬೈಕ್‌ ಹಾಗೂ ಸವಾರರು ಬಿದ್ದಿರುವುದು   

ಚಾಮರಾಜನಗರ: ನಗರದ ಸೋಮವಾರಪೇಟೆಯ ಬಳಿ ಬುಧವಾರ ಮಧ್ಯಾಹ್ನ ಎರಡು ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ಹಿಂಬದಿ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂವರು ಗಾಯಗೊಂಡಿದ್ದಾರೆ. ಈ ಪೈಕಿ ಒಬ್ಬರಿಗೆ ತೀವ್ರ ಗಾಯವಾಗಿದೆ.

ಹರದನಹಳ್ಳಿ ನಿವಾಸಿ ಬಸವರಾಜು ಎಂಬುವವರ ಮಗ ಮೋಹನ್‌ ರಾಜ್‌ (32) ಮೃತಪಟ್ಟವರು. ಅದೇ ಗ್ರಾಮದ ಸುರೇಶ್‌ ಅವರಿಗೆ ತೀವ್ರವಾದ ಏಟಾಗಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಂದು ಬೈಕ್‌ನಲ್ಲಿದ್ದ ಹೊಸ ಹಳ್ಳಿ ಗ್ರಾಮದವರಾದ ಸಂತೋಷ್‌ ಹಾಗೂ ರಾಜೇಂದ್ರ ಅವರೂ ಗಾಯಗೊಂಡಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುರೇಶ್‌ ಮತ್ತು ಮೋಹನ್‌ರಾಜ್‌ ಅವರು ಹರದನಹಳ್ಳಿಯಿಂದ ನಗರದ ಕಡೆ ಬರುತ್ತಿದ್ದರು. ಸಂತೋಷ್‌ ಹಾಗೂ ರಾಜೇಂದ್ರ ಅವರು ನಗರದಿಂದ ಹರದನಹಳ್ಳಿ ಕಡೆಗೆ ಹೋಗುತ್ತಿದ್ದರು.

ADVERTISEMENT

ಬೈಕ್‌ ಚಲಾಯಿಸುತ್ತಿದ್ದ ಸುರೇಶ್‌ ಅವರು ಸೋಮವಾರಪೇಟೆ ಬಳಿಯ ರಸ್ತೆ ವಿಭಜಕದ ಬಳಿ ಬಲಭಾಗಕ್ಕೆ ತಿರುಗಲು ಯತ್ನಿಸುವಾಗ ಎದುರುನಿಂದ ತೆರಳುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಬೈಕ್‌ನ ಹಿಂಬದಿ ಕುಳಿದಿದ್ದಮೋಹನ್‌ರಾಜ್‌ ಅವರು ರಸ್ತೆಗೆ ಬಿದ್ದಾಗ ತಲೆಗೆ ತೀವ್ರವಾದ ಪೆಟ್ಟು ಬಿತ್ತು. ಅವರು ಸ್ಥಳದಲ್ಲಿಯೇ ಮೃತಪಟ್ಟರು. ಸುರೇಶ್‌ ಅವರ ಬಲಗಾಲಿಗೆ ತೀವ್ರವಾದ ಏಟು ಬಿದ್ದಿದೆ. ತಕ್ಷಣ ಎಲ್ಲರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಸುರೇಶ್‌ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕಳುಹಿಸಲಾಯಿತು.

ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.