ADVERTISEMENT

‘ಅಂಬೇಡ್ಕರ್‌ ಯಾವುದೇ ಸಮುದಾಯಕ್ಕೆ ಸೀಮಿತವಾಗಿಲ್ಲ’

ಭಾವಚಿತ್ರದ ಅದ್ಧೂರಿ ಮೆರವಣಿಗೆ, ಸಂಘಟನೆಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2018, 6:53 IST
Last Updated 16 ಏಪ್ರಿಲ್ 2018, 6:53 IST

ಚಿಂತಾಮಣಿ: ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನಗರ ಹಾಗೂ ತಾಲ್ಲೂಕಿನಾದ್ಯಂತ ಅಂಬೇಡ್ಕರ್‌ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.

ನಗರದಲ್ಲಿ ಚಲವಾದಿ ಸಂಘಟನೆ ಸ್ತಬ್ದಚಿತ್ರಗಳ ಮೆರವಣಿಗೆಯನ್ನು ಏರ್ಪಡಿಸಿತ್ತು. ಅಂಬೇಡ್ಕರ್‌ ಭಾವಚಿತ್ರಗಳನ್ನು ಹೊತ್ತ ಅಲಂಕೃತ ಟ್ರಾಕ್ಟರ್‌ಗಳ ಮೆರವಣಿಗೆ ನಗರದ ಪ್ರವಾಸಿ ಮಂದಿರದ ಮುಂಭಾಗದಿಂದ ಚಾಲನೆ ನೀಡಲಾಯಿತು.

ತಮಟೆವಾದ್ಯ ಗಳೊಂದಿಗೆ ನೂರಾರು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಬೆಂಗಳೂರು ವೃತ್ತ, ಕೆನರಾ ಬ್ಯಾಂಕ್‌ ರಸ್ತೆ, ಗಜಾನನ ವೃತ್ತ, ಎಂ.ಜಿ.ರಸ್ತೆ, ಪಿಸಿಆರ್‌ ಕಾಂಪ್ಲೆಕ್ಸ್‌, ಚೇಳೂರು ವೃತ್ತ, ಸರ್ಕಾರಿ ಬಸ್‌ ನಿಲ್ದಾಣದ ಮೂಲಕ ಮೆರವಣಿಗೆ ಸಾಗಿತು. ವೃತ್ತಗಳಲ್ಲಿ ವಿವಿಧ ಸಂಘ ಸಂಸ್ಥೆಗಳ ಸಂಘಟನೆಯ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು.

ADVERTISEMENT

ನಗರದ ತಾಲ್ಲೂಕು ಪಂಚಾಯಿತಿ ಕಚೇರಿ, ತಾಲ್ಲೂಕು ಕಚೇರಿ, ನಗರಸಭೆ ಕಚೇರಿಗಳಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಜಯಂತಿ ಆಚರಿಸಲಾಯಿತು.

ಹಾದಿಗೆರೆ: ಡಾ.ಬಿ.ಆರ್‌.ಅಂಬೇಡ್ಕರ್‌ ಯಾವುದೇ ಒಂದು ಜಾತಿ, ಸಮುದಾಯಕ್ಕೆ ಮಾತ್ರ ಮೀಸಲಾಗಿಲ್ಲ. ಅವರು ಇಡೀ ಸಮಾಜದ ಆಸ್ತಿ ಎಂದು ಜನಪದ ಕಲಾವಿದ ಮುನಿರೆಡ್ಡಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹಾದಿಗೆರೆ ಗ್ರಾಮದಲ್ಲಿ ಕರ್ನಾಟಕ ಛಲವಾದಿ ಮಹಾಸಭಾ ವತಿಯಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್‌ ಅವರ 127ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂವಿಧಾನದ ಬಗ್ಗೆ ಅರಿವಿಲ್ಲದ ಜನತೆ ಸಂವಿಧಾನದ ವಿರುದ್ಧ ಅಮಾತನಾಡುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು. .ಸಂಘದ ಅಧ್ಯಕ್ಷ ತುಳಸೀಕೃಷ್ಣ ಹಾಗೂ ಮುನಿರೆಡ್ಡಿ ಅಂಬೇಡ್ಕರ್‌ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಲೇಖನಿ ಸಾಮಗ್ರಿ ವಿತರಣೆ ಮಾಡಲಾಯಿತು.

ತಪತೇಶ್ವರ ಕಾಲೊನಿ: ಅಂಬೇಡ್ಕರ್‌ ದೇಶದ ಆಸ್ತಿ, ಬದುಕಿನುದ್ದಕ್ಕೂ ಶೋಷಿತರ ಧ್ವನಿಯಾಗಿದ್ದರು. ಸಂವಿಧಾ ನದ ಕೆಳವರ್ಗವನ್ನು ಮುಖ್ಯವಾಹಿನಿಗೆ ತರಲು ಯತ್ನಿಸಿದರು ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ವಿಜಯನರಸಿಂಹ ತಿಳಿಸಿದರು.

ನಗರದ ತಪತೇಶ್ವರ ಕಾಲೊನಿಯಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್‌ ಅವರ 127 ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.