ADVERTISEMENT

ಅಗಲಗುರ್ಕಿಯಲ್ಲಿ ಫುಟ್‌ಬಾಲ್‌ ಪಂದ್ಯಾವಳಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 9:01 IST
Last Updated 13 ಡಿಸೆಂಬರ್ 2013, 9:01 IST

ಚಿಕ್ಕಬಳ್ಳಾಪುರ: ತಾಲ್ಲೂಕಿನ ಅಗಲಗುರ್ಕಿ ಸರ್ಕಾರಿ ದೈಹಿಕ ಶಿಕ್ಷಣ ಕಾಲೇಜು ವತಿಯಿಂದ ಈಚೆಗೆ ಅಂತರ್‌ಶಾಲಾ ಮಟ್ಟದ ಫುಟ್‌ಬಾಲ್‌ ಪಂದ್ಯಾವಳಿ ನಡೆಯಿತು.

ಆಜಾದ್‌, ಸುಭಾಷ್‌ ಮತ್ತು ವಿವೇಕಾನಂದ ಎಂಬ ಮೂರು ತಂಡಗಳನ್ನು ರಚಿಸಿಕೊಂಡು ಡಬ್ಬಲ್‌ ಲೀಗ್‌ ಮಾದರಿಯಲ್ಲಿ ಪಂದ್ಯಗಳನ್ನು ನಡೆಸಲಾಯಿತು. ಬೆಳಿಗ್ಗೆ ಮತ್ತು ಮಧ್ಯಾಹ್ನದ ಅವಧಿಯಲ್ಲಿ ತಲಾ ಮೂರು ಪಂದ್ಯಗಳನ್ನು ಆಧರಿಸಿ ಒಟ್ಟು ಆರು ಪಂದ್ಯಗಳನ್ನು ನಡೆಸಲಾಯಿತು.

ಆಜಾದ್‌ ತಂಡ ನಾಲ್ಕು ಪಂದ್ಯಗಳನ್ನು ಆಡಿ 4 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಗಳಿಸಿತು. ವಿವೇಕಾನಂದ ತಂಡ ದ್ವಿತೀಯ ಮತ್ತು ಸುಭಾಷ್‌ ತಂಡ ತೃತೀಯ ಸ್ಥಾನ ಗಳಿಸಿತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಪ್ರವೀಣ್‌ಕುಮಾರ್‌, ಉತ್ತಮ ದಾಳಿಪಟು ಪ್ರಶಸ್ತಿಯನ್ನು ಪ್ರಥಮ ಡಿಪಿ.ಇಡಿ ವಿದ್ಯಾರ್ಥಿ ಸತೀಶ್‌, ಉತ್ತಮ ರಕ್ಷಕ ಪ್ರಶಸ್ತಿಯನ್ನು ದ್ವಿತೀಯ ಡಿಪಿ.ಇಡಿ ವಿದ್ಯಾರ್ಥಿ ಮಣಿ ಮತ್ತು ಗೋಲುರಕ್ಷಕ ಪ್ರಶಸ್ತಿಯನ್ನು ದ್ವಿತೀಯ ಡಿಪಿ.ಇಡಿ ವಿದ್ಯಾರ್ಥಿ ಅಶೋಕ್‌ ಪಡೆದುಕೊಂಡರು.

ಕಾಲೇಜು ಪ್ರಾಂಶುಪಾಲ ಡಿ.ಅರುಣ್‌ಕುಮಾರ್‌, ಪ್ರಾಧ್ಯಾಪಕರಾದ ಟಿ.ವಿ.ಬಾಲರಾಜು, ಭಾಗ್ಯಲಕ್ಷ್ಮೀ ಮತ್ತು ಡಿ.ಎಸ್.ಮನೋಹರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.