ADVERTISEMENT

ಅಭಿವೃದ್ಧಿ ನಿರ್ಲಕ್ಷ್ಯ: ಕೈಗೆ ಸೋಲು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 6:30 IST
Last Updated 1 ಫೆಬ್ರುವರಿ 2011, 6:30 IST

ಬಾಗೇಪಲ್ಲಿ: ಕಾಂಗ್ರೆಸ್‌ನ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಯ ಮಾಜಿ ಸದಸ್ಯರ  ಆಡಳಿತಾವಧಿಯಲ್ಲಿ ಯಾವುದೇ ಅಭಿವೃದ್ಧಿ  ಕಾರ್ಯ ನಡೆಯದೇ ಇರುವುದರಿಂದ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಯಿತು ಎಂದು ಶಾಸಕ ಎನ್.ಸಂಪಂಗಿ ವಿಷಾದ ವ್ಯಕ್ತಪಡಿಸಿದರು.

ತಾಲ್ಲೂಕಿನ ಆಚೇಪಲ್ಲಿ ಕ್ರಾಸ್‌ನಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿವಿಧ ರಸ್ತೆಗಳ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.ತಾಲ್ಲೂಕಿನ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಅಭಿವೃದ್ಧಿ ಕೈಗೊಳ್ಳುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹಣ ನೀಡುವಂತೆ ಮನವಿ ಮಾಡಲಾಗಿದೆ.ತಾಲ್ಲೂಕಿನ ಗ್ರಾಮೀಣ ಪ್ರದೇಶದ ರಸ್ತೆಗಳಿಗೆ ಸುಮಾರು 5 ಕೋಟಿ ರೂಪಾಯಿಗಳ ವ್ಯಯದಲ್ಲಿ ರಸ್ತೆಯ ಅಭಿವೃದ್ಧಿ  ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.

ಅತ್ಯಂತ ಕಳಪೆ ಮಟ್ಟದಿಂದ ಕಾರ್ಯನಿರ್ವಹಿಸದರ ಪ್ರತಿಫಲದಿಂದಾಗಿ ರಸ್ತೆ ಹಾಳಾಗಿದೆ. ತಮ್ಮ ಆಡಳಿತಾವಧಿಯಲ್ಲಿ ಗ್ರಾಮೀಣ ರಸ್ತೆ ಅಭಿವೃದ್ಧಿ ಪಡೆಸುವುದರಲ್ಲಿ ಸಂಪೂರ್ಣ  ನಿರ್ಲಕ್ಷ್ಯ ತೋರಿಸಿ ಈಗ ಕಾರ್ಯಕರ್ತರಿಂದ ಬಾವುಟ ಹಿಡಿಸಿ ಪ್ರತಿಭಟನೆ  ಮಾಡುತ್ತಿರುವುದು ರಾಜಕೀಯ ದುರುದ್ದೇಶ ಎಂದು ತಿಳಿಸಿದರು.

ಬಾಗೇಪಲ್ಲಿ ಮುಖ್ಯ ರಸ್ತೆ ಇದೀಗ ರಾಜ್ಯ ಹೆದ್ದಾರಿ-4 ಒಳಪಡುವದರಿಂದ  ಕೇಂದ್ರ ಸಚಿವ ವೀರಪ್ಪ ಮೊಯಿಲಿಯವರ ಬಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪರಗೋಡು ಚಿತ್ರಾವತಿ ಬ್ಯಾರೇಜಿನಿಂದ ಸುಮಾರು 124 ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಲು ಕಾರ್ಯ ಯೋಜನೆ ಪ್ರಗತಿಯಲ್ಲಿದೆ. ಮುಂದಿನ ಎಪ್ರಿಲ್-ಮೇ ತಿಂಗಳ ಒಳಗೆ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರನ್ನು ಒದಗಿಸಲಾಗುವುದು.

ಕೇಂದ್ರ ಸರ್ಕಾರ ಮಹಾತ್ವಾಕಾಂಕ್ಷಿ ಯೋಜನೆಯಾದ ಉದ್ಯೋಗ ಖಾತರಿ ಯೋಜನೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಯ ಅಭಿವೃದ್ಧಿಯಾಗಿವೆ. ರಾಜ್ಯ ಸರ್ಕಾರ ಪ್ರತಿಯೊಬ್ಬರಿಗೆ 100 ರೂಪಾಯಿ ಕೊಡುತ್ತಿದ್ದ ಕೂಲಿಯನ್ನು 125 ರೂಪಾಯಿಗೆ ಏರಿಸಲಾಗಿದೆ. 150 ರೂಪಾಯಿಗಳಿಗೆ ಏರಿಸಬೇಕೆಂದು ಸಿಪಿಐಎಂನ ಕಾರ್ಯಕರ್ತರು ಕೇಂದ್ರ ಸಚಿವ ವೀರಪ್ಪ ಮೊಯಿಲಿ ಮನೆ ಮುಂಭಾಗದಲ್ಲಿ ಪ್ರತಿಭಟಿಸಲಾಗುತ್ತಿರುವುದು ರಾಜಕೀಯ ದುರುದ್ದೇಶವಾಗಿದೆ ಎಂದು ತಿಳಿಸಿದರು. 

 ಜಿ.ಪಂ ಸೋಮೇನಹಳ್ಳಿ ಕ್ಷೇತ್ರದ ಸದಸ್ಯ ಎಂ.ವಿ.ಕೃಷ್ಣಪ್ಪ, ಮಿಟ್ಟೇಮರಿ ಕ್ಷೇತ್ರದ ಸದಸ್ಯ ಅಮರಾವತಿ. ತಾ.ಪಂ ಮಾಜಿ ಅಧ್ಯಕ್ಷ ಅಶ್ವಥ್ಥಪ್ಪ, ಲೋಕೊಪಯೋಗಿ ಇಲಾಖೆಯ ಅಭಿಯಂತರರಾದ ಮಲ್ಲೇಶಪ್ಪ, ಕಿರಿಯ ಅಭಿಯಂತರ ನಾರಾಯಣರೆಡ್ಡಿ, ದೇವರಗುಡಿಪಲ್ಲಿ  ಗ್ರಾಮ ಪಂಚಾಯಿತಿ ಅಧ್ಯಕ್ಷ  ಎಂ.ಜಿ.ಕಿರಣ್‌ಕುಮಾರ್, ಬ್ಯಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸರೆಡ್ಡಿ, ಗುಡಿಬಂಡೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥರೆಡ್ಡಿ, ಯರ್ರಕಿಟ್ಟಪ್ಪ, ವರಲಕ್ಷ್ಮಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.