ADVERTISEMENT

ಆಕರ್ಷಕ ಕರಕುಶಲ ವಸ್ತು ನಿರ್ಮಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 10:37 IST
Last Updated 22 ಡಿಸೆಂಬರ್ 2012, 10:37 IST

ಚಿಂತಾಮಣಿ: `ಅಂಗವಿಕಲ ಸಂಘಟನೆಗಳು, ಸ್ತ್ರೀಶಕ್ತಿ ಸಂಘಗಳು ಜನರ ಅಭಿರುಚಿ ಮತ್ತು ಆದ್ಯತೆಗೆ ತಕ್ಕಂತೆ ಕರಕುಶಲ ವಸ್ತುಗಳನ್ನು ತಯಾರಿಸಬೇಕು. ಆಗ ಮಾತ್ರ ಆಯಾ ವಸ್ತುಗಳಿಗೆ ಉತ್ತಮ ಮಾರುಕಟ್ಟೆ ಮತ್ತು ವಹಿವಾಟು ಸೌಲಭ್ಯ ದೊರೆಯುತ್ತದೆ' ಎಂದು ಪೌರಾಯುಕ್ತ ಡಾ.ರಾಮೇಗೌಡ ಅಭಿಪ್ರಾಯಪಟ್ಟರು.

ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ರೇಷ್ಮೆಗೂಡಿನ ಕರಕುಶಲ ವಸ್ತುಗಳ ಪ್ರದರ್ಶನದಲ್ಲಿ ಮಾತನಾಡಿದ ಅವರು, ಸಂಘ ಸಂಸ್ಥೆಗಳು ಹಲವು ರೀತಿ ಕರಕುಶಲ ವಸ್ತುಗಳನ್ನು ತಯಾರಿಸುತ್ತಿದ್ದರೂ ಸೂಕ್ತ ಮಾರುಕಟ್ಟೆ ಸೌಲಭ್ಯ ಸಿಗುತ್ತಿಲ್ಲ. ಅನುಪಯುಕ್ತ ವಸ್ತುಗಳಿಂದ ಉಪಯುಕ್ತ ವಸ್ತುಗಳನ್ನು ತಯಾರಿಸಿ ಆರ್ಥಿಕವಾಗಿ ಅಭಿವೃದ್ಧಿಯಾಗಬೇಕು ಎಂದರು.

ರೇಷ್ಮೆಗೂಡಿನಿಂದ ಆಭರಣಗಳನ್ನು ತಯಾರಿಸುವುದು, ಗಂಧದ ಹಾರ ತಯಾರಿಸುವುದು ಸೇರಿದಂತೆ ಆಕರ್ಷಕ, ಅಲಂಕಾರಿಕ ಕರಕುಶಲ ವಸ್ತುಗಳನ್ನು ತಯಾರಿಸಿ ಸೂಕ್ತ ಮಾರುಕಟ್ಟೆ ಸೌಲಭ್ಯ ಪಡೆದುಕೊಂಡರೆ ನಿರುದ್ಯೋಗಿಗಳಿಗೆ ಮತ್ತು ಅಂಗವಿಕಲರಿಗೆ ಜೀವನಕ್ಕೆ ಆಧಾರವಾಗುತ್ತದೆ ಎಂದು ತಿಳಿಸಿದರು.

ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ನಾರಾಯಣರೆಡ್ಡಿ ಮಾತನಾಡಿ, ಕೌಶಲ ಮತ್ತು ಸೃಜನಾತ್ಮಕ ಕಲೆಯಿಂದ ಪ್ರಕೃತಿಯಲ್ಲಿ ದೊರೆಯುವ ಅನುಪಯುಕ್ತ ವಸ್ತುಗಳನ್ನು ಉಪಯುಕ್ತ ವಸ್ತುಗಳನ್ನಾಗಿ ಮಾಡುವುದನ್ನು ಕಲಿಯಬೇಕು. ಪ್ರತಿಯೊಂದು ವಸ್ತುವನ್ನೂ ಮರುಬಳಕೆ ಮಾಡುವ ವಿಧಾನವನ್ನು ಕಲಿಯಬೇಕು. ಕಾಲೇಜುಗಳಲ್ಲಿ ಕಲಿತದ್ದು ಕೊಠಡಿಗಳಿಗೆ ಮಾತ್ರ ಸೀಮಿತವಾಗಬಾರದು, ಸಮಾಜಕ್ಕೆ ದೊರೆಯಬೇಕು ಎಂದರು.

ಎಎಸ್ಪಿ ರಮೇಶ ಬಾನೂತ್ ಕಾರ್ಯಕ್ರಮ ಉದ್ಘಾಟಿಸಿದರು. ರೇಷ್ಮೆ ಕಾಲೇಜಿನ ಪ್ರಾಧ್ಯಾಪಕ ಪ್ರೊ.ವಿಜಯೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ.ರಂಗಯ್ಯ, ಅಬಕಾರಿ ಎಎಸ್ಪಿ ರಮೇಶಕುಮಾರ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ನಾರಾಯಣರೆಡ್ಡಿ ಮಾತನಾಡಿದರು. ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಕಾಳಪ್ಪ, ಅಬಕಾರಿ ಇಲಾಖೆ ಸರ್ಕಲ್ ಇನ್ಸ್‌ಪೆಕ್ಟರ್ ಚಂದ್ರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಸಂತರೆಡ್ಡಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.