ADVERTISEMENT

ಇಲ್ಲವಾದ ಡಾ.ಎಚ್‌ಎನ್ ಪ್ರತಿಮೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 8:15 IST
Last Updated 3 ಜನವರಿ 2012, 8:15 IST

ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಶೈಕ್ಷಣಿಕ, ರಾಜಕೀಯ, ಸಾಮಾಜಿಕ ಅಥವಾ ಸರ್ಕಾರಿ ಕಾರ್ಯಕ್ರಮಗಳೇ ನಡೆಯಲಿ, ಶಿಕ್ಷಣ ತಜ್ಞ ಡಾ. ಎಚ್.ನರಸಿಂಹಯ್ಯ ಅವರನ್ನು ಸ್ಮರಿಸಲಾಗುತ್ತದೆ. ಆದರೆ ಅಚ್ಚರಿಯ ಸಂಗತಿಯೆಂದರೆ, ತಾಲ್ಲೂಕಿನ ಯಾವುದೇ ಪ್ರಮುಖ ಸ್ಥಳಗಳಲ್ಲಿ ಅಥವಾ ಗ್ರಾಮಗಳಲ್ಲಿ ಈವರೆಗೆ ಎಚ್.ನರಸಿಂಹಯ್ಯ ಅವರ ಪ್ರತಿಮೆ ಅಥವಾ ಪುತ್ಥಳಿ ಇಲ್ಲ.

ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಗಡಿಭಾಗದಲ್ಲಿರುವ ತಾಲ್ಲೂಕಿನಲ್ಲಿ ತೆಲುಗು ಭಾಷೆಯ ದಟ್ಟ ಪ್ರಭಾವವಿದ್ದರೂ ಕನ್ನಡ ವಾತಾವರಣ ನಿರ್ಮಿಸಲು ಮತ್ತು ಕನ್ನಡ ಶಿಕ್ಷಣವನ್ನು ಗಟ್ಟಿಗೊಳಿಸಲು ಶ್ರಮಿಸಿದವರಲ್ಲಿ ಎಚ್.ನರಸಿಂಹಯ್ಯ ಪ್ರಮುಖರು.

ಬಾಗೇಪಲ್ಲಿಯಲ್ಲಿ ನ್ಯಾಷನಲ್ ಕಾಲೇಜು ಸ್ಥಾಪಿಸಿ, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಮಾಡಿದರು. 40 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರೊಂದಿಗೆ ಆರಂಭಗೊಂಡ ನ್ಯಾಷನಲ್ ಪದವಿ ಕಾಲೇಜಿನಿಂದ ಈಗ ಹಲವು ಮಂದಿ ಶಿಕ್ಷಣ ಪಡೆದು ಬದುಕು ರೂಪಿಸಿಕೊಂಡಿದ್ದಾರೆ.

`ನ್ಯಾಷನಲ್ ಪದವಿ ಕಾಲೇಜು ಸ್ಥಾಪನೆಗೊಳ್ಳುವ ಮುನ್ನ ಪದವಿಪೂರ್ವ ಶಿಕ್ಷಣ ಪೂರೈಸಿದ ಬಹುತೇಕ ವಿದ್ಯಾರ್ಥಿಗಳು ಪದವಿ ಶಿಕ್ಷಣಕ್ಕೆ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಚಿಂತಾಮಣಿ ಕಾಲೇಜುಗಳಿಗೆ ಹೋಗಬೇಕಿತ್ತು. ನ್ಯಾಷನಲ್ ಕಾಲೇಜು ಸ್ಥಾಪನೆಗೊಂಡ ನಂತರ ಬಹುತೇಕ ವಿದ್ಯಾರ್ಥಿಗಳಿಗೆ ಬಾಗೇಪಲ್ಲಿಯಲ್ಲೇ ಪದವಿ ಶಿಕ್ಷಣ ಪಡೆಯಲು ಸಾಧ್ಯವಾಯಿತು~ ಎಂದು ಕನ್ನಡಪರ ಸಂಘಟನೆ ಮುಖಂಡ ಬಾಬಾಜಾನ್ `ಪ್ರಜಾವಾಣಿ~ಗೆ ತಿಳಿಸಿದರು.

`ಪಟ್ಟಣದ ಗುಳೂರು ರಸ್ತೆ ವೃತ್ತವನ್ನು ಡಾ.ಎಚ್.ಎನ್.ವೃತ್ತವೆಂದು ನಾಮಕರಣ ಮಾಡಲಾಗಿದೆ. ಆದರೆ, ಆ ವೃತ್ತದಲ್ಲಿ ಡಾ.ಎಚ್.ಎನ್.ಅವರ ಪ್ರತಿಮೆ ಅಥವಾ ಪುತ್ಥಳಿ ಇಲ್ಲ. ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಅಥವಾ ವೃತ್ತಗಳಲ್ಲಿ ಪುತ್ಥಳಿ ಸ್ಥಾಪನೆಗಾಗಿ ಒಂದಷ್ಟು ಸಂಘ ಸಂಸ್ಥೆಗಳು ಕೆಲ ತಿಂಗಳ ಹಿಂದೆ ನಿಧಿ ಸಂಗ್ರಹಿಸಿದ್ದವು.

ಆದರೆ, ನಿಧಿ ಸಂಗ್ರಹಣೆಯ ನಂತರ ಪುತ್ಥಳಿ ವಿಷಯ ಮತ್ತೆ ಪ್ರಸ್ತಾಪವಾಗಲಿಲ್ಲ. ಜಿಲ್ಲಾಡಳಿತ ಅಥವಾ ತಾಲ್ಲೂಕು ಆಡಳಿತ ಪುತ್ಥಳಿ ಸ್ಥಾಪನೆ ಬಗ್ಗೆ ಗಮನಹರಿಸುವುದು ಉತ್ತಮ~ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT