ADVERTISEMENT

ಉತ್ತಮ ಆರೋಗ್ಯಕ್ಕೆ ವೃಕ್ಷಗಳೇ ಜೀವಾಳ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2017, 10:51 IST
Last Updated 11 ಏಪ್ರಿಲ್ 2017, 10:51 IST

ಚಿಂತಾಮಣಿ: ಸಮಾಜ ಹಾಗೂ ಮನುಷ್ಯನ ಉತ್ತಮ ಆರೋಗ್ಯಕ್ಕೆ ವೃಕ್ಷಗಳೇ ಜೀವಾಳ ಎಂದು ನಗರಸಭೆಯ ಆಯುಕ್ತ ಮುನಿಸ್ವಾಮಿ ಅಭಿಪ್ರಾಯಪಟ್ಟರು.ನಗರದ ಸರ್ಕಾರಿ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಗರೀಕರಣದಿಂದಾಗಿ ಹಾಗೂ ಮನುಷ್ಯರ ಸ್ವಾರ್ಥದಿಂದ ವೃಕ್ಷಗಳನ್ನು ಕಡಿಯುತ್ತಿರುವುದು ಬಹುತೇಕ ಸಮಸ್ಯೆಗಳಿಗೆ ಕಾರಣವಾಗಿದೆ. ಅಭಿವೃದ್ಧಿಯ ಹೆಸರಿನಲ್ಲೂ ಮರ ಗಿಡಗಳನ್ನು ನಾಶ ಮಾಡಲಾಗುತ್ತಿದೆ. ಆದರೆ ನಾಶಪಡಿಸಿದಂತಹ ಮರಗಳಿಗೆ ಪರ್ಯಾಯವಾಗಿ ಮರಗಿಡಗಳನ್ನು ಬೆಳೆಸುವ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ವಾತಾ ವರಣದಲ್ಲಿ ಏರುಪೇರಾಗುತ್ತಿದೆ’ ಎಂದು ತಿಳಿಸಿದರು.

‘ಮನುಷ್ಯರ ಉಸಿರಾಟಕ್ಕೆ ಅಗತ್ಯವಾದ ಆಮ್ಲಜನಕ ಕಲುಷಿತಗೊಂಡು ಮಾರಕ ಕಾಯಿಲೆಗಳಿಗೆ ತುತ್ತಾಗಬೇಕಾಗಿದೆ. ಮರಗಿಡಗಳನ್ನು ನೆಟ್ಟು ಸಂರಕ್ಷಿಸುವುದು ಎಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಮಹಿಳಾ ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಡಾ.ಎಂ.ಎನ್.ರಘು ಕೈಗೊಂಡಿರುವ ಕಾರ್ಯಕ್ರಮ ಶ್ಲಾಘನೀಯ’ ಎಂದರು.

ADVERTISEMENT

ಪ್ರಾಂಶುಪಾಲ ಪ್ರೊ.ವಿ.ರಾಮಕೃಷ್ಣಪ್ಪ ಮಾತನಾಡಿ, ‘ವೃಕ್ಷಗಳನ್ನು ಮಕ್ಕಳಂತೆ ರಕ್ಷಿಸಬೇಕು. ಮನುಷ್ಯರ ವಿಲಾಸಿ ಜೀವನಕ್ಕೆ ಮರಗಳು ನಾಶವಾಗುತ್ತಿವೆ’ ಎಂದು ಹೇಳಿದರು.
ಎನ್‌ಎಸ್‌ಎಸ್ ಅಧಿಕಾರಿ ಎಂ.ಎನ್.ರಘು ಮಾತನಾಡಿ, ‘ದೇಶದ ಪ್ರತಿಯೊಬ್ಬ ಪ್ರಜೆಯೂ ಒಂದೊಂದು ಗಿಡವನ್ನು ನೆಟ್ಟು ರಕ್ಷಣೆ ಮಾಡಿದರೆ ವರ್ಷಕ್ಕೆ ಸುಮಾರು 120 ಕೋಟಿ ಮರಗಳನ್ನು ಬೆಳೆಸಬಹುದು. ಎಲ್ಲ ಸರ್ಕಾರಿ ಕಾರ್ಯಕ್ರಮಗಳನ್ನು ಗಿಡ ನೆಡುವುದರ ಮೂಲಕ ಆಚರಣೆ ಮಾಡಿದರೆ ಉತ್ತಮ ಮಾದರಿಯಾಗುತ್ತದೆ’ ಎಂದರು.

ಪ್ರೊ.ಸಣ್ಣೀರಯ್ಯ, ಪ್ರೊ.ಕೆ.ಟಿ.ಕೃಷ್ಣಪ್ಪ, ಸಿ.ಎಂ.ದಿನೇಶ್, ಸಣ್ಣಚಿಕ್ಕಯ್ಯ, ನಗರಸಭೆ ಆರೋಗ್ಯಾಧಿಕಾರಿ ಸಿ.ಕೆ.ಬಾಬು, ಜಿ.ತಿಮ್ಮಾರೆಡ್ಡಿ, ಪ್ರೊ.ಕೆ.ಚಂದ್ರಶೇಖರ್, ಪ್ರೊ.ಕೆಂಪರಾಜು, ಎಸ್.ಶಂಕರ್, ಕೆ.ಆರ್.ಶಿವಶಂಕರಪ್ರಸಾದ್ ಉಪ ಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.