ಚಿಕ್ಕಬಳ್ಳಾಪುರ: ನಗರ ಹೊರವಲಯದ ವಾಪಸಂದ್ರ ಮೇಲ್ಸೇತುವೆ ಬಳಿ ಮಂಗಳವಾರ ಬೆಳಿಗ್ಗೆ ಬೆಂಗಳೂರಿಗೆ ಹಾಲು ಸಾಗಿಸುತ್ತಿದ್ದ ಮದರ್ ಡೇರಿಗೆ ಸೇರಿದ ಟ್ಯಾಂಕರ್ ಉರುಳಿ ಬಿದ್ದು, ಚಾಲಕ ಮತ್ತು ಕ್ಲಿನರ್ ಗಾಯಗೊಂಡರು. ಟ್ಯಾಂಕರ್ನಲ್ಲಿದ್ದ ಶೇ 75 ರಷ್ಟು ಹಾಲು ರಸ್ತೆಗೆ ಸುರಿದು ನೆಲದ ಪಾಲಾಯಿತು.
ಟ್ಯಾಂಕರ್ನಿಂದ ಸುರಿಯುತ್ತಿದ್ದ ಹಾಲನ್ನು ಸ್ಥಳೀಯರು ಪಾತ್ರೆ, ಡ್ರಮ್, ಬಾಟಲಿಗಳಲ್ಲಿ ಮುಗಿಬಿದ್ದು ತುಂಬಿಕೊಂಡರು. ಚಾಲಕನ ಅಜಾಗರೂಕತೆಯಿಂದ ಈ ಅಪಘಾತ ಸಂಭವಿಸಿದೆ ಎಂದು ಸಂಚಾರ ಪೊಲೀಸರು ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಸಾದಲಿಯಲ್ಲಿ ಹಾಲು ತುಂಬಿಸಿಕೊಂಡ ಟ್ಯಾಂಕರ್ ಪೇರೇಸಂದ್ರ ಮಾರ್ಗವಾಗಿ ಬಂದು ಹೈದರಾಬಾದ್–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ –7ರಲ್ಲಿ ಬೆಂಗಳೂರಿನ ಯಲಹಂಕದಲ್ಲಿರುವ ಡೇರಿಯತ್ತ ಸಾಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಚಾಲಕ ನಗರ ಹೊರವಲಯದ ಚಿತ್ರಾವತಿ ಬಳಿ ಸರ್ವಿಸ್ಗೆ ಇಳಿದು ಚಿಕ್ಕಬಳ್ಳಾಪುರ ನಗರದತ್ತ ಟ್ಯಾಂಕರ್ ಚಲಾಯಿಸಿದ್ದಾನೆ. ಈ ವೇಳೆ ವಾಪಸಂದ್ರ ಮೇಲ್ಸೇತುವೆ ಕೆಳಗೆ ವೇಗವಾಗಿ ಬಂದು ನಗರದ ಕಡೆ ತಿರುವು ಪಡೆದುಕೊಂಡಾಗ ಟ್ಯಾಂಕರ್ ಎಡಭಾಗಕ್ಕೆ ವಾಲಿ ಬಿದ್ದಿದೆ.
ಉರುಳಿ ಬಿದ್ದ ಟ್ಯಾಂಕರ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.