ADVERTISEMENT

ಎತ್ತಿನಹೊಳೆ ಯೋಜನೆಯಿಂದ ಬರುವ ಕುಡಿವ ನೀರು ಸಂಗ್ರಹಾಗಾರಕ್ಕೆ ಸ್ಥಳ ಪರಿಶೀಲನೆ

ತಾಲ್ಲೂಕಿನ ಸಾಂಬಾರು ಗಿಡದ ಕಾವಲು ಪ್ರದೇಶಕ್ಕೆ ಶಾಸಕ ಡಾ.ಕೆ.ಸುಧಾಕರ್ ಭೇಟಿ, ಗೋಪಾಲಕೃಷ್ಣ ಕೆರೆಯಲ್ಲಿ ಯೋಜನೆ ಅನುಷ್ಟಾನಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2018, 11:00 IST
Last Updated 29 ಸೆಪ್ಟೆಂಬರ್ 2018, 11:00 IST
ತಾಲ್ಲೂಕಿನ ಸಾಂಬಾರು ಗಿಡದ ಕಾವಲು ಪ್ರದೇಶಕ್ಕೆ ಭೇಟಿ ನೀಡಿದ ಶಾಸಕ ಡಾ.ಕೆ.ಸುಧಾಕರ್ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ತಾಲ್ಲೂಕಿನ ಸಾಂಬಾರು ಗಿಡದ ಕಾವಲು ಪ್ರದೇಶಕ್ಕೆ ಭೇಟಿ ನೀಡಿದ ಶಾಸಕ ಡಾ.ಕೆ.ಸುಧಾಕರ್ ಅಧಿಕಾರಿಗಳೊಂದಿಗೆ ಚರ್ಚಿಸಿದರು.   

ಚಿಕ್ಕಬಳ್ಳಾಪುರ: ಎತ್ತಿನಹೊಳೆ ಯೋಜನೆಯಲ್ಲಿ ಬರುವ ನೀರನ್ನು ನಗರಕ್ಕೆ ಕುಡಿಯಲು ಪೂರೈಸುವ ಉದ್ದೇಶಕ್ಕೆ ನಿರ್ಮಿಸಲು ಉದ್ದೇಶಿಸಿರುವ ಸಂಗ್ರಹಾಗಾರ ನಿರ್ಮಾಣಕ್ಕಾಗಿ ಶಾಸಕ ಡಾ.ಕೆ.ಸುಧಾಕರ್ ಅವರು ಶನಿವಾರ ಸ್ಥಳ ಪರಿಶೀಲನೆ ನಡೆಸಿದರು.

ತಾಲ್ಲೂಕಿನ ಸಾಂಬಾರು ಗಿಡದ ಕಾವಲು ಪ್ರದೇಶಕ್ಕೆ ಭೇಟಿ ನೀಡಿದ ಶಾಸಕರು ಜಾಗ ಪರಿಶೀಲಿಸಿದರು. ಈ ವೇಳೆ ಅಧಿಕಾರಿಗಳು, ‘ಈ ಯೋಜನೆಯಲ್ಲಿ ಸುಮಾರು 150 ಕೋಟಿ ವೆಚ್ಚದಲ್ಲಿ 250 ಎಕರೆ ಜಾಗದಲ್ಲಿ 20 ಅಡಿ ಆಳದ ಸಂಗ್ರಹಾಗಾರ ನಿರ್ಮಿಸಬೇಕಾಗಿದೆ’ ಎಂದು ಹೇಳಿದರು.

ಸ್ಥಳದಲ್ಲಿದ್ದ ವಲಯ ಅರಣ್ಯಾಧಿಕಾರಿ ವಿಕ್ರಮ್ ರೆಡ್ಡಿ ಅವರು, ‘ಸಾಂಬಾರು ಗಿಡದ ಕಾವಲು ಪ್ರದೇಶ ರಾಜ್ಯ ಪ್ರದೇಶವು ಅರಣ್ಯ ಇಲಾಖೆಗೆ ಒಳಪಡುತ್ತದೆ. ಹೀಗಾಗಿ ಇಲ್ಲಿ ಯಾವುದೇ ಕಾಮಗಾರಿ ನಡೆಸಲು ಅನುಮತಿ ಸಿಗುವುದು ಕಷ್ಟ’ ಎಂದು ತಿಳಿಸಿದರು.

ADVERTISEMENT

ಬಳಿಕ ಶಾಸಕರ ಅಧ್ಯಕ್ಷತೆಯ ಈ ಯೋಜನೆಯ ಅನುಷ್ಠಾನದ ತಾಲ್ಲೂಕು ಮಟ್ಟದಲ್ಲಿ ಸಮಿತಿ ಸದಸ್ಯರೆಲ್ಲರೂ ಸಂಗ್ರಹಾಗಾರಕ್ಕೆ ನಗರ ಸಮೀಪದ ಅಮಾನಿ ಗೋಪಾಲಕೃಷ್ಣ ಕೆರೆ ಮತ್ತು ಅದಕ್ಕೆ ಹೊಂದಿಕೊಂಡಿರುವ ಬನ್ನಿಕುಪ್ಪೆ ಕೆರೆ ಪ್ರದೇಶವೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಬಳಿಕ ಶಾಸಕರು ಅಧಿಕಾರಿಗಳಿಗೆ ಯೋಜನೆಯ ನೀಲನಕ್ಷೆ ಸಿದ್ಧಪಡಿಸುವಂತೆ ಸೂಚನೆ ನೀಡಿದರು.

ಎತ್ತಿನಹೊಳೆ ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಮೇಶ್ ಬಾಬು, ತಹಶೀಲ್ದಾರ್ ನರಸಿಂಹಮೂರ್ತಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಂಜೀವಪ್ಪ, ಡಿಡಿಎಲ್‌ಆರ್ ಪ್ರಕಾಶ್ ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.