ADVERTISEMENT

ಕಲುಷಿತ ನೀರು:ರೋಗ ಭೀತಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 11:17 IST
Last Updated 1 ಜನವರಿ 2014, 11:17 IST

ಗುಡಿಬಂಡೆ: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಶೌಚಾ­ಲಯದ ಗುಂಡಿಯಿಂದ ಹೊರ­ಬರುತ್ತಿರುವ ಕಲುಷಿತ ನೀರಿನಿಂದ ಸುತ್ತಮುತ್ತಲ ಜನತೆ ದುರ್ವಾಸನೆಯ ಜೊತೆಗೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಿಸುವಂತಾಗಿದೆ ಎಂದು ಪ.ಪಂ. ಸದಸ್ಯ ರಾಜಣ್ಣ ದೂರಿದ್ದಾರೆ.

ಮೆಟ್ರಿಕ್ ಪೂರ್ವ ಬಾಲಕೀಯರ ಹಾಸ್ಟೆಲ್ ಕಟ್ಟಡದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ನಡೆಯುತ್ತಿದೆ. ಇಲ್ಲಿರುವ 150ಕ್ಕೂ ಹೆಚ್ಚು ಮಕ್ಕಳು ಹಾಸ್ಟೆಲ್‌ನಲ್ಲಿರುವ ಸ್ನಾನದ ಕೋಣೆ­ಗಳು ಹಾಗೂ ಶೌಚಾಲಯಗಳನ್ನು ಬಳಸುತ್ತಿದ್ದಾರೆ. ಇವುಗಳಿಂದ ಬರುವ ಕಲುಷಿತ ನೀರು ಹಾಗೂ ದುರ್ವಾಸನೆ ಅಕ್ಕಪಕ್ಕದ ನಿವಾಸಿಗಳಲ್ಲಿ ಸಾಂಕ್ರಾಮಿಕ ರೋಗದ ಭೀತಿ ಉಂಟು ಮಾಡಿದೆ.

ಶೌಚಾಲಯ ಹಾಗೂ ಸ್ನಾನದ ಕೋಣೆಗಳಿಂದ ಬರುವ ಕಲುಷಿತ ನೀರು ವಸತಿ ನಿಲಯದಲ್ಲಿ ಪಕ್ಕದಲ್ಲಿ ನಿರ್ಮಿ­ಸಿರುವ ಗುಂಡಿಯೊಂದಕ್ಕೆ ಸೇರುತ್ತದೆ. ಈ ಗುಂಡಿಯನ್ನು ಬಂಡೆಯೊಂದರ ಮೇಲೆ ನಿರ್ಮಿಸಲಾಗಿದೆ. ಭೂಮಿ­ಯೊಳಗೆ ನೀರು ಇಂಗಲು ಆಸ್ಪದ­ವಿಲ್ಲದಂತಾಗಿ ಸಮಸ್ಯೆ ಉದ್ಭವಿಸಿದೆ.

ವಸತಿ ಶಾಲೆಯ ಮುಂಭಾಗದಲ್ಲಿ ಸಾಕಷ್ಟು ಸ್ಥಳವಿದೆ. ಅಲ್ಲಿ ಇಂಗು ಗುಂಡಿ ನಿರ್ಮಿಸಿದ್ದರೆ ಈ ಸಮಸ್ಯೆ ಉದ್ಭವಿ­ಸುತ್ತಿರಲಿಲ್ಲ. ಈ ಬಗ್ಗೆ ವಸತಿ ನಿಲಯದ ಮೇಲ್ವಿಚಾರಕರಿಗೆ ಮತ್ತು ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮೌಖಿಕವಾಗಿ ದೂರು ನೀಡಿ­ದರೂ ಸಹ ಯಾವುದೇ ಪ್ರಯೋ­ಜನವಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.