ಚೇಳೂರು: ಪಟ್ಟಣದಲ್ಲಿ ಬಾಗೇಪಲ್ಲಿ ಮುಖ್ಯ ರಸ್ತೆಯ ಬದಿಯಲ್ಲಿ ಕೋಳಿ ಮಾಂಸ ಅಂಗಡಿಗಳ ತ್ಯಾಜ್ಯ ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ತಂದು ಸುರಿಯುವ ಪ್ರವೃತ್ತಿ ಹೆಚ್ಚುತ್ತಿದ್ದು, ಇದರಿಂದ ದುರ್ವಾಸನೆ ಉಂಟಾಗುವ ಜತೆಗೆ ಸಾಂಕ್ರಾಮಿಕ ರೋಗ ಭೀತಿ ಕಾಣಿಸಿಕೊಳ್ಳುತ್ತಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಈ ತ್ಯಾಜ್ಯ ಸುರಿಯುವ ಸ್ಥಳದ ಸಮೀಪದಲ್ಲಿಯೇ ಬಸ್ ನಿಲ್ದಾಣವಿದೆ. ಅಲ್ಲಿಗೆ ಬರುವ ಜನರೆಲ್ಲ ಗಬ್ಬೆದ್ದು ಹೋದ ಈ ಪರಿಸರದಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದಾಗಿ ಈ ರಸ್ತೆಯ ಮೂಲಕ ನಿತ್ಯ ಸಂಚರಿಸುವ ಶಾಲಾ, ಕಾಲೇಜು ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಹೆಜ್ಜೆ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ಅನೇಕ ಬಾರಿ ಗ್ರಾಮ ಪಂಚಾಯಿತಿಗೆ ದೂರು ನೀಡಿದರೂ ತ್ಯಾಜ್ಯ ವಿಲೇವಾರಿಗೆ ಈವರೆಗೆ ಕ್ರಮಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.
‘ಜೋರಾಗಿ ಗಾಳಿ ಬಿಸಿದಾಗಲೆಲ್ಲ ಇಲ್ಲಿ ಸುರಿದ ತ್ಯಾಜ್ಯದ ರಾಶಿಯಲ್ಲಿನ ಪ್ಲಾಸ್ಟಿಕ್ ಬ್್ಯಾಗ್ಗಳು, ಕೋಳಿ ಪುಕ್ಕಗಳು ಸಮೀಪದ ಮನೆಗಳ ಮುಂದೆಲ್ಲ ಹರಡಿ ಅಸಹ್ಯಕರ ವಾತಾವರಣ ಸೃಷ್ಟಿಸುತ್ತವೆ.
ಇಲ್ಲಿನ ಗಲೀಜಿನಿಂದಾಗಿ ಸೊಳ್ಳೆಗಳ ಕಾಟವಂತೂ ವಿಪರೀತವಾಗಿದೆ. ಸ್ಥಳೀಯ ಪಂಚಾಯಿತಿ ಸದಸ್ಯರನ್ನು ಕರೆದು ಇದನ್ನೆಲ್ಲ ತೋರಿಸಿದರೂ ಕಸ ತೆಗೆಸಲು ಯಾವುದೇ ಕ್ರಮಕೈಗೊಳ್ಳಲಿಲ್ಲ’ ಎಂದು ಸ್ಥಳೀಯ ನಿವಾಸಿ ಅಭಿಷೇಕ್ ಬೇಸರ ವ್ಯಕ್ತಪಡಿಸಿದರು.
‘ದೇಶದ ತುಂಬಾ ಸ್ವಚ್ಛ ಭಾರತದ ಕೂಗು ಕೇಳಿ ಬರುತ್ತಿರುವ ಹೊತ್ತಿನಲ್ಲಿ ನಮ್ಮೂರು ದಿನೇ ದಿನೇ ಗಲೀಜಾಗುತ್ತಿದೆ. ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ತಲೆ ಕೆಡಿಸಿಕೊಳ್ಳುತ್ತಿಲ್ಲ. ಎಲ್ಲಿ ನೋಡಿದರೂ ಕಾಣುವ ಕಸ ಜನರಲ್ಲಿ ಕಸಿವಿಸಿ ಹುಟ್ಟಿಸುತ್ತಿದೆ. ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಇಲ್ಲಿ ಕಸ ಸುರಿಯುವುದಕ್ಕೆ ಕಡಿವಾಣ ಹಾಕಬೇಕು’ ಎಂದು ಸ್ಥಳೀಯ ನಿವಾಸಿ ನರಸಿಂಹಪ್ಪ ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.