ಗೌರಿಬಿದನೂರು: ಇಳಿ ವಯಸ್ಸಿನಲ್ಲಿಯೂ ಸಮಾಜ ಹಾಗೂ ಯುವಜನರ ಒಳಿತಿಗಾಗಿ ಶ್ರಮಿಸುತ್ತಿರುವ ಕೆ. ನರಸಿಂಹಸ್ವಾಮಿ ಅವರ ಸಾರ್ಥಕ ಜೀವನ ಎಲ್ಲರಿಗೂ ಮಾದರಿಯಾಗಿದೆ ಎಂದು ಸಾಹಿತಿ ಕೋಟಗಾನಹಳ್ಳಿ ರಾಮಯ್ಯ ಹೇಳಿದರು.
ಪಟ್ಟಣದ ಡಾ.ಎನ್.ಎನ್ ಕಲಾಭವನದಲ್ಲಿ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ 'ಕೆ. ನಾರಾಯಣಸ್ವಾಮಿ ಗೌರವ ನಮನ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
'ಆಧುನಿಕ ಜಗತ್ತಿನಲ್ಲಿಯೂ ಸರಳ, ವೈಚಾರಿಕ ಹಾಗೂ ಸ್ವಾಭಿಮಾನದಿಂದ ಬದುಕುತ್ತಿರುವ ಪ್ರೊ. ಕೆ.ನಾರಾಯಣಸ್ವಾಮಿ, ದಲಿತರು ಹಾಗೂ ಅಸ್ಪೃಶ್ಯತೆ ವಿರುದ್ಧ ನಿರಂತರವಾಗಿ ಹೋರಾಟ ಮಾಡಿದ್ದಾರೆ. ಬಡ ಮತ್ತು ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸುವಲ್ಲಿ ಶ್ರಮ ಅತ್ಯಧಿಕವಾಗಿದೆ’ ಎಂದು ತಿಳಿಸಿದರು.
ಶಿಷ್ಯ ವೃಂದದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ.ಕೆ.ನಾರಾಯಣಸ್ವಾಮಿ, 'ನಾಲ್ಕೈದು ದಶಕಗಳಿಂದಲೂ ಸಮಾಜದ ತೊಡಕು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಬಡ ಮತ್ತು ದೀನ ದಲಿತರ ಕಷ್ಟ ಅರಿತು ನಿವಾರಣೆಗಾಗಿ ಶ್ರಮಿಸುತ್ತಾ ಸಾಗಿದ್ದೇವೆ. ಆದರೆ ಇಂದಿಗೂ ಅಸ್ಪೃಶ್ಯ ಮನೋಭಾವ ಕಳಚಿಲ್ಲ’ ಎಂದು ವಿಷಾದಿಸಿದರು.
‘ಎಲ್ಲರೂ ಸಮಾಜದ ಒಳಿತನ್ನು ಲೆಕ್ಕಿಸದೆ ಸ್ವಾರ್ಥಕ್ಕಾಗಿ ಜೀವನ ನಡೆಸುತ್ತಿದ್ದಾರೆ. ನೈಸರ್ಗಿಕವಾಗಿ ದೊರೆಯುವ ಸಂಪನ್ಮೂಲಗಳನ್ನು ಮಿತಿಮೀರಿ ಪೋಲು ಮಾಡುತ್ತಿದ್ದಾರೆ. ಮುಂದಿನ ಪೀಳಿಗೆಯ ಜೀವನಮಟ್ಟವನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತಾವು ಮಾಡುವ ಕಾಯಕದಲ್ಲಿ ಆತ್ಮಾಭಿಮಾನ ಮತ್ತು ಪ್ರಾಮಾಣಿಕತೆ ಮೆರೆಯಬೇಕು’ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಕೆ.ನಾರಾಯಣಸ್ವಾಮಿ ಅವರು ಸಂಗ್ರಹಿಸಿದ್ದ 1200ಕ್ಕೂ ಹೆಚ್ಚು ಪುಸ್ತಕಗಳನ್ನು ನ್ಯಾಷನಲ್ ಕಾಲೇಜಿನ ಗ್ರಂಥಾಲಯಕ್ಕೆ ಉಚಿತ ನೀಡಿದರು.
ಕಾರ್ಯಕ್ರಮದಲ್ಲಿ ಎನ್.ವೆಂಕಟೇಶ್, ಮುನಿಯಪ್ಪ, ಗೊಲ್ಲಹಳ್ಳಿ ಶಿವಪ್ರಸಾದ್, ಡಾ.ಎಚ್. ವಾಸು, ಕೆ.ಪಿ. ನಾರಾಯಣಪ್ಪ, ಗೀತಾ ಜಯಂದರ್, ರಾಜಾಕಾಂತ್, ಆನಂದ್, ಮುನಿವೆಂಕಟಪ್ಪ, ದಾಸಪ್ಪ, ಆದಿನಾರಾಯಣಪ್ಪ, ರಾಮಕೃಷ್ಣಪ್ಪ, ಸಿ.ಜಿ.ಗಂಗಪ್ಪ, ಬಾಲಪ್ಪ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.