ಚಿಂತಾಮಣಿ: ‘ಡಾ.ಸರೋಜಿನಿ ಮಹಿಷಿ ವರದಿ ನೀಡಿ 30 ವರ್ಷಗಳಾದರೂ ಸರ್ಕಾರಗಳು ಇದುವರೆಗೂ ಅನುಷ್ಠಾನಗೊಳಿಸಲಿಲ್ಲ’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಅಂಬರೀಷ್ ಅಸಮಾಧಾನ ವ್ಯಕ್ತಪಡಿಸಿದರು.
ತಾಲ್ಲೂಕಿನ ಕೋನಪ್ಪಲ್ಲಿ ಗ್ರಾಮದಲ್ಲಿ ವೇದಿಕೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ 62 ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ರಾಜ್ಯದಲ್ಲಿರುವ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ, ಕಂಪೆನಿಗಳಲ್ಲಿ, ಕೇಂದ್ರೀಯ ವಿದ್ಯಾಲಯಗಳು ಕನ್ನಡ ಕಡ್ಡಾಯಗೊಳಿಸಬೇಕು. ಕನ್ನಡ ಬದುಕಿಗೆ ನೆರವಾಗುತ್ತದೆ ಎಂದು ಮನವರಿಕೆಯಾದಾಗ ಪ್ರತಿಯೊಬ್ಬರೂ ಕನ್ನಡ ಕಲಿಯುತ್ತಾರೆ. ಯಾರಿಗೂ ಒತ್ತಾಯ ಮತ್ತು ಬಲವಂತವಾಗಿ ಭಾಷೆ ಕಲಿಸಲು ಸಾಧ್ಯವಿಲ್ಲ’ ಎಂದರು.
‘ನಾಡು–ನುಡಿ, ಜಲ–ನೆಲ, ಭಾಷೆಗೆ ಧಕ್ಕೆಯಾದರೆ ಪದಾಧಿಕಾರಿಗಳು ಹೋರಾಟಕ್ಕೆ ಅಣಿಯಾಗಬೇಕು. ಅಕ್ಕ–ಪಕ್ಕದ ರಾಜ್ಯಗಳ ಜನರ ಭಾಷಾಭಿಮಾನವನ್ನು ಗ್ರಹಿಸಿ, ತಮ್ಮ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.
ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ್ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ಮತ್ತು ಗೌರವಾಧ್ಯಕ್ಷ ಜಿತೇಂದ್ರ ವಿದ್ಯಾರ್ಥಿಗಳಿಗೆ ಉಚಿತ ನೋಟ್ಪುಸ್ತಕಗಳನ್ನು ವಿತರಿಸಿದರು.
ಮುಖಂಡರಾದ ವೆಂಕಟಶಿವಾರೆಡ್ಡಿ, ಗೆರಿಗಿರೆಡ್ಡಿ, ಬಾಬುರೆಡ್ಡಿ, ಕೆ.ವಿ.ಮಂಜುನಾಥ್, ಶ್ರೀನಿವಾಸರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಾರೆಡ್ಡಿ,ಶಿವಣ್ಣ, ನಾಗರಾಜರೆಡ್ಡಿ, ನಾರಾಯಣಸ್ವಾಮಿ, ಮುನಿಕೃಷ್ಣಪ್ಪ, ಆರ್.ನಾಗರಾಜ್, ಮುರಳಿಮೋಹನ್, ನಾರಾಯಣಸ್ವಾಮಿ, ಸತ್ಯನಾರಾಯಣಶೆಟ್ಟಿ, ಲಕ್ಷ್ಮಿಪತಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.