ಚಿಂತಾಮಣಿ: ತಾಲ್ಲೂಕಿನ ಕೈವಾರದ ಯೋಗಿ ನಾರೇಯಣ ಮಠದ ಆವರಣದಲ್ಲಿ ಏ.22ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್.ಜಯರಾಮ್ ತಿಳಿಸಿದ್ದಾರೆ.
ಬೆಂಗಳೂರಿನ ಗೋಕುಲ ಶಿಕ್ಷಣ ಪ್ರತಿಷ್ಠಾನ, ಎಂ.ಎಸ್.ರಾಮಯ್ಯ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಹೆಲ್ತಿ ಹಾರ್ಟ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ಶಿಬಿರ ಆಯೋಜಿಸಲಾಗಿದೆ.ಕೈವಾರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.
ಉಚಿತ ಆರೋಗ್ಯ ತಪಾಸಣೆ ಶಿಬಿರದ ಉದ್ಘಾಟನೆಯನ್ನು ಕೇಂದ್ರ ಕಂಪನಿ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯ್ಲಿ ನೇರವೇರಿಸುವರು. ಹೃದಯ ಸಂಬಂಧಿ ತೊಂದರೆಗಳ ತಪಾಸಣೆ, ರಕ್ತದೊತ್ತಡ, ಮಧುಮೇಹ ತಪಾಸಣೆ, ಸ್ತ್ರೀಯರ ಗರ್ಭಕೋಶದ ಕ್ಯಾನ್ಸರ್ ತಪಾಸಣೆ, ಶ್ವಾಸಕೋಶ ಕಾರ್ಯನಿರ್ವಹಣೆ ಪರೀಕ್ಷೆ ಹಾಗೂ ನೇತ್ರ ತಪಾಸಣೆ ಮಾಡಲಾಗುವುದು.
ಆರೋಗ್ಯ ಶಿಬಿರದಲ್ಲಿ ಎಂ.ಎಸ್. ರಾಮಯ್ಯ ವೈದ್ಯಕೀಯ ಮಹಾವಿದ್ಯಾಲಯ, ಎಂ.ಎಸ್.ರಾಮಯ್ಯ ದಂತ ವೈದ್ಯಕೀಯ ಮಹಾ ವಿದ್ಯಾಲಯ ಆಸ್ಪತ್ರೆ, ಕಿದ್ವಾಯಿ ಸ್ಮಾರಕ ಆಸ್ಪತ್ರೆ ಮತ್ತು ಸೆವೆಂತ್ ಡೇ ಅಡ್ವೆಂಟಿಸ್ಟ್ ಮೆಡಿಕಲ್ ಸೆಂಟರ್ ಸಂಸ್ಥೆಯ ತಜ್ಞ ವೈದ್ಯರು ಭಾಗವಹಿಸುವರು ಎಂದು ತಿಳಿಸಿದ್ದಾರೆ.
ಫ್ಲೋರೈಡ್ ಶುದ್ಧೀಕರಣ ಘಟಕ ಉದ್ಘಾಟನೆ 22ರಂದು
ಚಿಂತಾಮಣಿ: ಬೆಂಗಳೂರಿನ ಗೋಕುಲ ಶಿಕ್ಷಣ ಪ್ರತಿಷ್ಠಾನ ಹಾಗೂ ಸಿ.ಎಸ್. ಐ.ಆರ್ ವತಿಯಿಂದ ತಾಲ್ಲೂಕಿನ ಕೈವಾರದಲ್ಲಿ ಸ್ಥಾಪಿಸಿರುವ ಸಮುದಾಯ ಫ್ಲೋರೈಡ್ ಶುದ್ಧೀಕರಣ ಘಟಕವನ್ನು ಏ.22 ರಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಜನತೆಗೆ ಅರ್ಪಿಸಲಿದ್ದಾರೆ.
ಸ್ಪಂದನ ಶಾಲೆ ಕಟ್ಟಡ ಶಂಕುಸ್ಥಾಪನೆ: ತಾಲ್ಲೂಕಿನ ಕೈವಾರದಲ್ಲಿ ಬುದ್ಧಿ ಮಾಂದ್ಯ ಮತ್ತು ವಾಕ್-ಶ್ರವಣದೋಷವುಳ್ಳ ಮಕ್ಕಳಿಗಾಗಿ ಇರುವ ಸ್ಪಂದನ-ವಿಶೇಷ ಶಾಲೆ ಮತ್ತು ಸಂಪನ್ಮೂಲ ಕೇಂದ್ರದ ನೂತನ ಕಟ್ಟಡ ಶಂಕುಸ್ಥಾಪನೆಯನ್ನು ಶಾಸಕ ಡಾ.ಎಂ.ಸಿ.ಸುಧಾಕರ್ ಏ.22ರಂದು ನೆರವೇರಿಸಲಿದ್ದಾರೆ.
ಈ ಕಾರ್ಯಕ್ರಮದ ಅತಿಥಿಗಳಾಗಿ ಮಾಜಿ ಗೃಹ ಸಚಿವ ಚೌಡರೆಡ್ಡಿ, ಗೋಕುಲ ಶಿಕ್ಷಣ ಸಂಸ್ಥೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಡಿ.ವಿ.ಗುರುಪ್ರಸಾದ್, ಜಿ.ಇ.ಎಫ್ ವೈದ್ಯಕೀಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಕುಮಾರ್, ಡಾ.ಸರಸ್ವತಿ ಜಿ.ರಾವ್, ಡಾ. ಎಸ್.ಪಿ.ಸೂರ್ಯನಾರಾಯಣ ಮತ್ತು ರಿಯಾನ್ಸ್ ಸಂಸ್ಥೆ ಅಧ್ಯಕ್ಷ ಜಿ.ವಿ.ರಾಮಮೂರ್ತಿ ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.