ADVERTISEMENT

ಕೈವಾರ: ಸಂಕಷ್ಟದಲ್ಲಿ ಅನ್ನದಾತ: ಸ್ವಾಮೀಜಿ ಕಳವಳ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2012, 9:10 IST
Last Updated 9 ಏಪ್ರಿಲ್ 2012, 9:10 IST

ಚಿಂತಾಮಣಿ: ಅನ್ನ ನೀಡುವ ಅನ್ನದಾತ ಸಂಕಷ್ಟ ಪರಿಸ್ಥಿತಿಯ ಸುಳಿಗೆ ಸಿಲುಕಿ ತೊಳಲಾಡುತ್ತಿದ್ದಾನೆ. ನೀರು, ವಿದ್ಯುತ್, ಶಿಕ್ಷಣ... ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಹೊರ ಬರಲಾರದೆ ಪರಿತಪ್ಪಿಸುತ್ತಿದ್ದಾನೆ ಎಂದು ಆದಿಚುಂಚನಗಿರಿಯ ಮಂಗಳಾನಂದನಾಥ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ತಾಲ್ಲೂಕಿನ ಕೈವಾರ ಕ್ರಾಸ್‌ನಲ್ಲಿ ಭಾನುವಾರ ನಡೆದ ಕೈವಾರ ಹೋಬಳಿ ಮಟ್ಟದ ಒಕ್ಕಲಿಗರ ಸಂಘಟನಾ ಸಮಾವೇಶ ಉದ್ಘಾಟಿಸಿ ಆರ್ಶೀವಚನ ನೀಡಿದ ಸ್ವಾಮೀಜಿ, ಇದೀಗ ಎಲ್ಲೆಡೆ ಅನ್ನದಾತನ ಕೂಗಿಗೆ ಸ್ಪಂದನೆ ಇಲ್ಲವಾಗಿದೆ. ಜನಾಂಗದ ಜಾಗೃತಿ, ಸೃಜನಶೀಲರಾಗಲು, ರಕ್ಷಣೆ ಮತ್ತು ಸ್ವಾವಲಂಬಿ ಬದುಕಿಗಾಗಿ ಸಂಘಟನೆ ಅಗತ್ಯವಾಗಿದೆ ಎಂದರು.

ಆದಿಚುಂಚನಗಿರಿಯಲ್ಲಿ 5ನೇ ತರಗತಿಯಿಂದ ಪಿಯುಸಿವರೆಗೆ 5 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ, ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳನ್ನು ಸನ್ಮಾರ್ಗದತ್ತ ಕೊಂಡೊಯ್ಯಲು 15 ದಿನ ಜನಜಾಗೃತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ 3 ಸಾವಿರ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿನಿಲಯ ಕಟ್ಟಲಾಗುತ್ತಿದೆ ಎಂದು ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಸಿ.ಬಿ.ಹನುಮಂತಪ್ಪ ಮಾತನಾಡಿ, ಕೆಲವು ಸ್ವಾರ್ಥ ಸಂಘಟನೆಗಳ ನಡುವೆ ಒಕ್ಕಲಿಗ ಸಮಾಜ ಬಿರುಗಾಳಿಯಂತೆ ತತ್ತರಿಸುತ್ತಿದೆ. ಜನಾಂಗದ ಉಳಿವಿಗಾಗಿ, ಶೋಷಣೆಯಿಂದ ಮುಕ್ತರಾಗಲು, ಸ್ವಾಭಿಮಾನದ ಬದುಕಿಗಾಗಿ ಹಾಗೂ ಅನ್ಯಾಯದ ವಿರುದ್ಧ ಹೋರಾಡಲು ಸಂಘಟನೆ ಅಗತ್ಯವಾಗಿದೆ ಎಂದರು.

ಇತಿಹಾಸ ಸಂಶೋಧಕ, ಪ್ರೊ.ಟಿ.ಎನ್.ನಾಗರಾಜ್ ಮಾತನಾಡಿ ಒಕ್ಕಲಿಗರ ಇತಿಹಾಸ ಮತ್ತು ಸಂಸ್ಕೃತಿ ಬಗ್ಗೆ ಬೆಳಕು ಚೆಲ್ಲಿ ಸಂಘವನ್ನು ರಚನಾತ್ಮಕವಾಗಿ ಸಂಘಟಿಸಬೇಕು. ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡುವಂತೆ ಒತ್ತಾಯಿಸಿದರು.

ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಬೇಕು. ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ವಕೀಲರಾದ ಪಾಪಿರೆಡ್ಡಿ, ಬೈರಾರೆಡ್ಡಿ, ಸಾಹಿತಿ ಗೋಪಾಲಗೌಡ, ಸಂಪನ್ಮೂಲ ಸೇವಾ ಕೇಂದ್ರದ ಆಂಜನೇಯರೆಡ್ಡಿ ಮಾತನಾಡಿದರು. ರಾಜಕೀಯ ಪ್ರಮುಖರು, ಅಪಾರ ಜನಸ್ತೋಮ ಸಮಾವೇಶದಲ್ಲಿ ಪಾಲ್ಗೊಂಡಿತ್ತು. ಪ್ರತಾಪ್, ನಾರಾಯಣಸ್ವಾಮಿ ನಿರೂಪಿಸಿದರು. ಸೊಣ್ಣಪ್ಪ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.