ADVERTISEMENT

ಕೊಳವೆಬಾವಿ ವಿಚಾರ; ಗ್ರಾಮದಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 10:36 IST
Last Updated 18 ಜುಲೈ 2013, 10:36 IST

ಚಿಂತಾಮಣಿ: ಕುಡಿಯುವ ನೀರಿಗಾಗಿ ಕೊಳವೆಬಾವಿ ಕೊರೆಯುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಬುಧವಾರ ಭಿನ್ನಾಭಿಪ್ರಾಯ ವ್ಯಕ್ತವಾಗಿದ್ದು, ತಾಲ್ಲೂಕಿನ ಚಿನ್ನಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾರಾಯಣಹಳ್ಳಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಗ್ರಾಮದ ಸರ್ವೇ ಸಂಖ್ಯೆ-4ರಲ್ಲಿ ಕುಡಿಯುವ ನೀರಿಗಾಗಿ ಕೊಳವೆಬಾವಿ ಕೊರೆಯಲು ಅಧಿಕಾರಿಗಳು ರಿಗ್ ಯಂತ್ರವನ್ನು ಕಳುಹಿಸಿದರೆ, ಗ್ರಾಮದ ವೆಂಕಟೇಶಪ್ಪ, ಚಿಕ್ಕವೆಂಕಟೇಶಪ್ಪ, ವೆಂಕಟರಾಯಪ್ಪ, ಶ್ರೀನಿವಾಸಪ್ಪ ನೇತೃತ್ವದ ಗುಂಪು ಅಡ್ಡಿಪಡಿಸಿದ್ದಾರೆ. ಸರ್ವೇ ಸಂಖ್ಯೆ-4 ತಮ್ಮ ಸ್ವಂತ ಜಾಗವೆಂದು ಹೇಳಿಕೊಂಡಿದ್ದಾರೆ.

ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ ಚಂದ್ರಪ್ಪ, ರಾಮಿರೆಡ್ಡಿ, ಶಿವಪ್ಪ ನೇತೃತ್ವದ ಸರ್ವೆ ಸಂಖ್ಯೆ-4 ಸರ್ಕಾರಿ ಖರಾಬಿ ಜಮೀನಾಗಿದ್ದು, ಕೊಳವೆಬಾವಿ ಕೊರೆಯಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ. ಕೊಳವೆ ಬಾವಿಯ ಪಾಯಿಂಟ್ ಅದೇ ಜಾಗದಲ್ಲಿದ್ದು, ತಾಲ್ಲೂಕು ಭೂಮಾಪಕರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ದೃಢೀಕರಿಸಿದ್ದಾರೆ. ಅಲ್ಲೇ ಕೊಳವೆಬಾವಿ ಕೊರೆಯಬೇಕೆಂದು ಅವರು ಒತ್ತಾಯಿಸಿದ್ದಾರೆ.

ಪುನರಾರಂಭಗೊಳ್ಳದ ಹಾಸ್ಟೆಲ್"
ಚಿಂತಾಮಣಿ: ನಗರ ಮತ್ತು ತಾಲ್ಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ನಡೆಯುತ್ತಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳು ಪುನರಾರಂಭ ಆಗದಿರುವುದು  ವಿದ್ಯಾರ್ಥಿಗಳನ್ನು ತೊಂದರೆಗೀಡು ಮಾಡಿದೆ. ಪದವಿ, ಪದವಿ ಪೂರ್ವ ಕಾಲೇಜು ಮತ್ತು ಪಾಲಿಟೆಕ್ನಿಕ್ ಕಾಲೇಜಿನಲ್ಲಿ ತರಗತಿಗಳು ಜೂನ್ ತಿಂಗಳಿನಲ್ಲೇ ಪುನರಾರಂಭವಾಗಿದ್ದು, ವಿದ್ಯಾರ್ಥಿನಿಲಯಗಳು ಪುನರಾರಂಭವಾಗಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಸೆಮಿಸ್ಟರ್ ಪದ್ಧತಿಯಿಂದಾಗಿ ಕಾಲೇಜುಗಳು ಸಹ  ಜೂನ್ ತಿಂಗಳಿನಲ್ಲೇ  ಆರಂಭಗೊಳ್ಳುತ್ತವೆ. ವಿದ್ಯಾರ್ಥಿನಿಲಯಗಳು ತೆರೆಯದಿರುವ ಕಾರಣ  ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿಗೆ ತೊಂದರೆಯಾಗಿದೆ. ವ್ಯಾಸಂಗ ಮಾಡುತ್ತಿರುವವರಿಗೆ ಕಾಲೇಜು ಆರಂಭಗೊಂಡ ದಿನದಿಂದಲೇ ನಿಲಯಗಳನ್ನು ತೆರೆದು ಊಟದ ವ್ಯವಸ್ಥೆಯನ್ನು ಮಾಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಗುಲ್ಬರ್ಗಾ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಮತ್ತು ದೂರದ ಗ್ರಾಮೀಣ ಭಾಗಗಳಿಂದ ಬಂದು ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೊಮಾ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದ್ದಾರೆ. ಹಿರಿಯ ಅಧಿಕಾರಿಗಳು, ಶಾಸಕರು, ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಕೂಡಲೇ ವಿದ್ಯಾರ್ಥಿನಿಲಯಗಳನ್ನು ಪುನರಾರಂಭಿಸಿ ಅಗತ್ಯ ವ್ಯವಸ್ಥೆ ಮಾಡಬೇಕೆಂದು ಅವರು ಕೋರಿದ್ದಾರೆ.

ಕಾನೂನು ಅರಿವು-ನೆರವು ಇಂದು
ಶಿಡ್ಲಘಟ್ಟ: ಪಟ್ಟಣದ ಸಂತೋಷ್‌ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಬೆಳಿಗ್ಗೆ 9.30ಕ್ಕೆ ಕಾನೂನು ಅರಿವು-ನೆರವು ಕಾರ್ಯಕ್ರಮ ನಡೆಯಲಿದೆ. ಶಾಲೆಯಿಂದ ದೂರವುಳಿದ ಮಕ್ಕಳ ಸೇರ್ಪಡೆ ಕಾರ್ಯಕ್ರಮವೂ ನಡೆಯಲಿದೆ. ಪ್ರಧಾನ ಸಿವಿಲ್ ನ್ಯಾಯಾಧೀಶ ಎಸ್.ಮಹೇಶ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ವಿಜಯ ದೇವರಾಜ ಅರಸ್, ಸರ್ಕಾರಿ ಸಹಾಯಕ ವಕೀಲ ಶ್ರೀನಿವಾಸ್, ವಕೀಲ ನಾರಾಯಣಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಭಾಗವಹಿಸಲಿದ್ದಾರೆ.

ಆರೋಗ್ಯ ತಪಾಸಣೆ ನಾಳೆ
ಶಿಡ್ಲಘಟ್ಟ: ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆ, ದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಅರಿಕೆರೆಯ ಸ್ವರ್ಣಜಲ ಗ್ರಾಮೀಣಾಭಿವೃದ್ಧಿ ಸೊಸೈಟಿ ಸಹಯೋಗದಲ್ಲಿ ತಾಲ್ಲೂಕಿನ ಚೀಮಂಗಲದ ಕುವೆಂಪು ಶತಮಾನೋತ್ಸವ ಶಾಲಾ ಆವರಣದಲ್ಲಿ ಶುಕ್ರವಾರ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.