ADVERTISEMENT

ಖಾಸಗಿ ಕಾಲೇಜುಗಳಲ್ಲಿ ಸೀಟ್‌ ಇರಲಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 6:51 IST
Last Updated 20 ಡಿಸೆಂಬರ್ 2013, 6:51 IST

ಗೌರಿಬಿದನೂರು: ಬಡ ವಿದ್ಯಾರ್ಥಿ­ಗಳನ್ನು ವೃತ್ತಿ ಶಿಕ್ಷಣದಿಂದ ವಂಚಿತರ­ನ್ನಾಗಿಸುವ ಉದ್ದೇಶದಿಂದ ಸರ್ಕಾರ ಹೊಸ ಸಿಇಟಿ ಕಾಯ್ದೆ ಜಾರಿ ಮಾಡು­ತ್ತಿದೆ ಎಂದು ಆರೋಪಿಸಿ ಎಬಿವಿಪಿ ನೇತೃತ್ವದಲ್ಲಿ ಪಿಯುಸಿ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪಟ್ಟಣದ ಎಲ್ಲ ಪಿಯುಸಿ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ತಮ್ಮ ಕಾಲೇಜುಗಳಿಂದ ಮೆರವಣಿಗೆ ಆರಂಭಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮುಖ್ಯ ರಸ್ತೆಗಳಲ್ಲಿ ಸಾಗಿ ಬಂದರು. ತಾಲ್ಲೂಕು ಕಚೇರಿ ಎದುರು ಸಭೆ ಸೇರಿದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತ­ನಾಡಿದ ಎಬಿವಿಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ನವೀನ್ ಕುಮಾರ್,  ರಾಜ್ಯದಲ್ಲಿ ನಡೆಯುತ್ತಿರುವ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದ ಸೀಟು ಪಡೆಯಲು ಅವಕಾಶವಿಲ್ಲದಿದ್ದರೆ ಪ್ರತಿಭಾವಂತ ವಿದ್ಯಾರ್ಥಿ­ಗಳು ವೈದ್ಯ­ಕೀಯ ಹಾಗೂ ಎಂಜಿನಿಯರ್ ಪದವಿ­ಗಳಿಂದ ವಂಚಿತ­ರಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಹೊಸ ಕಾಯ್ದೆ ಜಾರಿಯಾದರೆ ಖಾಸಗಿ ಶಿಕ್ಷಣ ಕಾಲೇಜುಗಳು ತಮ್ಮ ಮನಸ್ಸಿಗೆ ಬಂದ ರೀತಿಯಲ್ಲಿ ಶುಲ್ಕ ವಸೂಲಿ ಮಾಡಲು ಅವಕಾಶ ಮಾಡಿ­ಕೊಟ್ಟಂತೆ ಆಗುತ್ತದೆ. ಹಣ ಇರುವ­ವರಿಗೆ ಮಾತ್ರ ವೃತ್ತಿ ಶಿಕ್ಷಣ ಪಡೆಯಲು ಸಾಧ್ಯವಾಗುವ ಪರಿಸ್ಥಿತಿ ನಿರ್ಮಾಣ­ವಾಗಲಿದೆ. ಇಂಥ ಕಾಯ್ದೆ ಯಾವುದೇ ಕಾರಣಕ್ಕೆ ಜಾರಿಯಾಗಬಾರದು ಎಂದು ಒತ್ತಾಯಿಸಿದರು.

ಎಬಿವಿಪಿ ತಾಲ್ಲೂಕು ಘಟಕದ ಕಾರ್ಯದರ್ಶಿ ಹರೀಶ್‌ಕುಮಾರ್ ಮಾತ­ನಾಡಿ, ಸರ್ಕಾರ ಕಡ್ಡಾಯ ಶಿಕ್ಷಣ ನೀತಿ ಜಾರಿಗೊಳಿಸಿದೆ. ಆದರೆ ಉನ್ನತ ಶಿಕ್ಷಣವನ್ನು ಮಾರಾಟದ ವಸ್ತುವನ್ನಾಗಿ ಮಾಡಲು ಸಂಚು ರೂಪಿಸುತ್ತಿದೆ. ವಿರೋಧಾ­ಭಾಸದ ತೀರ್ಮಾನಗಳನ್ನು ಕೈ ಬಿಟ್ಟು ಮೊದಲಿನಂತೆ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಸೀಟ್‌ಗಳನ್ನು ಮುಂದುವರೆಸಬೇಕು ಎಂದು ಆಗ್ರಹಿಸಿದರು.

ವಿದ್ಯಾರ್ಥಿಗಳಾದ ಮಂಜುನಾಥ್, ಸುಬ್ರಹ್ಮಣಿ, ಜಗದೀಶ್, ಪವನ್, ಅಕ್ಷಯ್ ಕುಮಾರ್, ರಾಧಿಕಾ, ಮಂಜುಳಾ, ಪವಿರ್ತಾ, ಗೀತಾ, ಭಾವನಾ, ನಾಗಮಣಿ  ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.