ADVERTISEMENT

ಗ್ರಾಮೀಣ ಭಾಗದಲ್ಲಿ ಜನಪದ ಗೀತೆ ಕಣ್ಮರೆ: ವಿಷಾದ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 10:27 IST
Last Updated 4 ಸೆಪ್ಟೆಂಬರ್ 2013, 10:27 IST

ಶಿಡ್ಲಘಟ್ಟ: ಜನಪದ ಗೀತೆಗಳು ಇಂದು ಗ್ರಾಮೀಣ ಭಾಗದಲ್ಲೇ ಕಣ್ಮರೆಯಾಗುತ್ತಿರುವುದು ದುರಂತ ಎಂದು ಜನಪದ ಗಾಯಕ ಬಂಡ್ಲಹಳ್ಳಿ ವಿಜಯಕುಮಾರ್ ವಿಷಾದಿಸಿದರು.

ಸವಿತಾ ವಿವಿಧೋದ್ದೇಶ ಸಹಕಾರ ಸಂಘ, ಸ್ವಾಮಿ ವಿವೇಕಾನಂದ ಯುವಜನ ಸಂಘ ಹಾಗೂ ರಂಗಸಂಸ್ಥಾನದ ಸಹಯೋಗದಲ್ಲಿ ಪಟ್ಟಣದ ಸರ್ಕಾರಿ ಬಾಲಕರ ಶಾಲೆ ಕೋಟೆ ಶಾಲೆಯಲ್ಲಿ ಈಚೆಗೆ ನಡೆದ ಜನಪದ ಗೀತೆ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು. 

ರಾಜ್ಯದಲ್ಲಿ ಜನಪದ ಗೀತೆಗಳ ತರಬೇತಿ ಶಾಲೆಗಳಿಲ್ಲ. ಶಾಸ್ತ್ರೀಯ, ಹಿಂದೂಸ್ತಾನಿ ಹಾಗೂ ಸುಗಮ ಸಂಗೀತದ ಕ್ಷೇತ್ರದಲ್ಲಿ ಗುರು- ಶಿಷ್ಯ ಪರಂಪರೆಯಿದೆ. ಜನಪದ ಗೀತೆಗಳು ಉಳಿಯಲು ಆ ಪದ್ಧತಿ ಅನುಸರಿಸುವ ಅಗತ್ಯವಿದೆ. ಸ್ಥಳೀಯ ಸಂಘಸಂಸ್ಥೆಗಳ ಸಹಕಾರದೊಂದಿಗೆ ಯಾವುದೇ ಫಲಾಪೇಕ್ಷೆಯಿಲ್ಲದೆ ರಂಗಸಂಸ್ಥಾನ ಸಂಸ್ಥೆ 12 ವರ್ಷಗಳಿಂದ ಗ್ರಾಮೀಣ, ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಜನಪದ ಸಂಗೀತ ಕಲಿಕಾ ಶಿಬಿರಗಳನ್ನು ನಡೆಸುತ್ತಿದೆ. ಜನಪದ ಸಂಗೀತ ಉಳಿದು ಬೆಳೆಯಬೇಕಾದರೆ ಜನರನ್ನು ಜನಪದ ಸಂಗೀತದತ್ತ ಸೆಳೆಯುವ ಕೆಲಸವು ಆಗಬೇಕಿದೆ ಎಂದು ಹೇಳಿದರು.

ಶಿಬಿರದ ಶಿಕ್ಷಕಿ ವಿಜಯಕುಮಾರಿ ಮಾತನಾಡಿ, ಜನಪದ ಸಾಹಿತ್ಯವನ್ನು ಮಕ್ಕಳಿಗೆ ತಲುಪಿಸುವ ದೃಷ್ಠಿಯಿಂದ ಶಿಬಿರ ನಡೆಸಲಾಗುತ್ತಿದೆ. ಮಕ್ಕಳು ಸಂಗೀತ ಕಲಿತರೆ ಮಾನಸಿಕವಾಗಿ ಉಲ್ಲಾಸಗೊಂಡು ಶಿಕ್ಷಣದ ಕಡೆಗೆ ಮತ್ತಷ್ಟು ಗಮನ ಹರಿಸುತ್ತಾರೆ ಎಂದರು.

  ಆಕಾಶವಾಣಿ ಹಾಡುಗಾರ್ತಿ ಚೇತನಾ, ಸವಿತಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಮುನಿರಾಜು, ಸ್ವಾಮಿ ವಿವೇಕಾನಂದ ಯುವಜನ ಸಂಘದ ಮಂಜುಕಿರಣ್, ನರೇಶ್, ಚಂದ್ರು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT