ADVERTISEMENT

ಜನಪರ ಯೋಜನೆ ರಚನೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2011, 3:30 IST
Last Updated 4 ಮಾರ್ಚ್ 2011, 3:30 IST

ಶಿಡ್ಲಘಟ್ಟ: ಅಧಿಕಾರಿಗಳು ಜನರಿಗೆ ಅನುಕೂಲಕರವಾದ ಯೋಜನೆಗಳನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದು ಜಾರಿಗೊಳಿಸಿದರೆ ಅರ್ಹ ಫಲಾನುಭವಿಗಳಿಗೆ ತಲುಪುತ್ತದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚಿನ್ನಪ್ಪಯ್ಯ ಅಭಿಪ್ರಾಯಪಟ್ಟರು.ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ನೀರಿನ ತೊಂದರೆಯಿರುವ ಸಾರ್ವಜನಿಕ ಆಸ್ಪತ್ರೆಗೆ ಕೊಳವೆ ಬಾವಿ ಕೊರೆಸುವುದು. ನೀರಿನ ತೊಂದರೆ ಅನುಭವಿಸುತ್ತಿರುವ ಹಳ್ಳಿಗಳನ್ನು ಪಟ್ಟಿ ಮಾಡುವುದು ಮುಂತಾದ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು. ಭೂಸೇನಾ ನಿಗಮದವರು ಕೆಲಸವನ್ನು ತ್ವರಿತಗೊಳಿಸಿ ಏಪ್ರಿಲ್ 14ರೊಳಗೆ ಅಂಬೇಡ್ಕರ್ ಭವನದ ಕಾಮಗಾರಿಯನ್ನು ಪೂರ್ಣಗೊಳಿಸಿ, ಸಮಾಜಕಲ್ಯಾಣ ಇಲಾಖೆಯ ಸುಪರ್ದಿಗೆ ಒಪ್ಪಿಸಬೇಕು ಎಂದು ಅವರು ಸೂಚಿಸಿದರು.

 ಜಿಲ್ಲಾ ಪಂಚಾಯಿತಿ ಸದಸ್ಯ ಕಂಬದಹಳ್ಳಿ ಸತೀಶ್,  ‘ಪ್ರತಿಯೊಂದು ಶಾಲೆಯಲ್ಲೂ ಶೌಚಾಲಯ ಮತ್ತು ನೀರಿನ ಸೌಕರ್ಯ ವ್ಯವಸ್ಥೆ ಚೆನ್ನಾಗಿರಬೇಕು. ಬಿಸಿಯೂಟವನ್ನು ಶಿಕ್ಷಕರು ಮತ್ತು ಜನಪ್ರತಿನಿಧಿಗಳು ಆಗಾಗ ಮಕ್ಕಳೊಂದಿಗೆ ತಿನ್ನುವುದರಿಂದ ಗುಣಮಟ್ಟ ಅರಿಯಬಹುದು. ಪ್ರಾಥಮಿಕ ಶಾಲಾ ಶಿಕ್ಷಣವನ್ನು ಬಲಪಡಿಸಬೇಕು. ಶಾಲೆಗಳಲ್ಲಿ ಅಳವಡಿಸಿರುವ ಮಳೆಕೊಯ್ಲು ಬಳಕೆಯಾಗದಿರುವುದು ವಿಷಾದನೀಯ.

ಅಪಾಯಕಾರಿ ವಿದ್ಯುತ್ ತಂತಿಗಳು ಕೆಲ ಶಾಲೆಗಳ ಮೇಲೆ ಇವೆ. ಇದರಿಂದ ಆಗುವ ಅಪಾಯವನ್ನು ತಪ್ಪಿಸಲು ಅಧಿಕಾರಿಗಳು ಶೀಘ್ರವೇ ಕ್ರಮ ತೆಗೆದುಕೊಳ್ಳಬೇಕು’ ಎಂದರು.
ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಗಳ ಪ್ರಗತಿಯ ಮಾಹಿತಿ ನೀಡಿದರು. ಜಿ.ಪಂ. ಸದಸ್ಯರಾದ ಶಿವಲೀಲಾ ರಾಜಣ್ಣ, ಶೋಭಾ ಪ್ರಕಾಶ್, ಉಪಕಾರ್ಯದರ್ಶಿ ಜುಲ್ಫಿಕರ್, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಇಲಾಖೆ ಜಿಲ್ಲಾ ಅಧಿಕಾರಿ ಅಲ್ಲಾಬಕ್ಷ್, ತಾ.ಪಂ. ಅಧ್ಯಕ್ಷ ವೇಣುಗೋಪಾಲ್, ಉಪಾಧ್ಯಕ್ಷೆ ದೇವಮ್ಮದೇವರಾಜ್, ತಾ.ಪಂ.ಸಿಇಓ ಅಮರನಾಥ್ ಸಭೆಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.