ಬಾಗೇಪಲ್ಲಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜೀತವಿಮುಕ್ತರ ಸ್ವಾವಲಂಬನೆ ಬದುಕಿಗಾಗಿ ₹ 45 ಸಾವಿರ ಆರ್ಥಿ ನೆರವು ನೀಡಲಾಗುತ್ತದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಲು ಆದ್ಯತೆ ನೀಡಬೇಕು ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ತಿಳಿಸಿದರು.
ತಾಲ್ಲೂಕು ಪಂಚಾಯತ್, ಜೀವಿಕ-ಜೀತ ವಿಮುಕ್ತಿ ಕರ್ನಾಟಕ ವತಿಯಿಂದ ಏರ್ಪಡಿಸಿದ್ದ ತಾಲ್ಲೂಕಿನ 234 ಜೀತ ವಿಮುಕ್ತರಿಗೆ ಪುರ್ನವಸತಿ, ಮಸಾಶನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಗೇಪಲ್ಲಿ ತಾಲ್ಲೂಕಿನ 234 ಮಂದಿ ಜೀತದಾಳುಗಳಿಗೆ ಕೇಂದ್ರೀಯ ಯೋಜನೆ ಪ್ರಕಾರ ₹ 20 ಸಾವಿರ, ಕರ್ನಾಟಕ ಸರ್ಕಾರದ ವಿಶಿಷ್ಟ ಪಿಂಚಣಿಯಡಿ ₹ 7200 ನೀಡಲಾಗುತ್ತಿದೆ. ಜೀತವಿಮುಕ್ತರ ಆರ್ಥಿಕ ಭದ್ರತೆಗಾಗಿ ವಿವಿಧ ಬ್ಯಾಂಕುಗಳಿಂದ ₹ 23 ಸಾವಿರವನ್ನು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಇದರ ಜೊತೆಗೆ ವೈಯಕ್ತಿಕವಾಗಿ ತಲಾ ₹ 15 ಸಾವಿರ ನೀಡಲಾಗುವುದು. ಹಸು ಅಥವಾ ಕುರಿ/ಮೇಕೆ ಖರೀದಿಸಿ, ಸ್ವಾವಲಂಬಿ ಜೀವನ ನಡೆಸಲು ಇದು ನೆರವಾಗಲಿದೆ ಎಂದು ನುಡಿದರು.
ಸರ್ಕಾರದ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳಿಗೆ ಶಿಕ್ಷಣ ನೀಡಬೇಕು. ಮಕ್ಕಳ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.
ಜೀವಿಕ ಸಂಸ್ಥಾಪಕ ಕಿರಣ್ ಕಮಲ್ ಪ್ರಸಾದ್ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಇಒ ಕೆ.ವಿ. ರೆಡ್ಡಪ್ಪ, ಅಧ್ಯಕ್ಷ ಕೆ.ಆರ್. ನರೇಂದ್ರಬಾಬು, ಉಪಾಧ್ಯಕ್ಷೆ ಸರಸ್ವತಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಿ. ಮಂಜುನಾಥ್, ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಎಚ್.ಸಿ.ಜಡಯ್ಯ, ವಿ.ಗೋಪಾಲ್, ಬೀಚಗಾನಹಳ್ಳಿ ನಾರಾಯಣಸ್ವಾಮಿ, ನಾರಾಯಣಸ್ವಾಮಿ, ಪುರಸಭಾ ಸದಸ್ಯ ಎ.ನರಸಿಂಹಮೂರ್ತಿ, ಮುಖಂಡ ಪಾಜೇನಹಳ್ಳಿ ನಾಗರಾಜರೆಡ್ಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.