ಚಿಂತಾಮಣಿ: ತಾಲ್ಲೂಕಿನ ಟಿಎಪಿಸಿಎಂಎಸ್ ಅಧ್ಯಕ್ಷ ಸ್ಥಾನದ ಎರಡನೇ ಅವಧಿ ಚುನಾವಣೆಯು ಸೋಮವಾರ ಶಾಂತಿಯುತವಾಗಿ ನಡೆಯಿತು. ಹೈಕೋರ್ಟ್ ಆದೇಶದಂತೆ ಮತ ಎಣಿಕೆ ಸ್ಥಗಿತಗೊಳಿಸಿ ಮತಪೆಟ್ಟಿಗೆಯನ್ನು ನಗರದ ಉಪ ಖಜಾನೆಯಲ್ಲಿ ಇಡಲಾಗಿದೆ.
ಸಂಘದ ಎರಡನೇ ಅವಧಿಯ ಅಧ್ಯಕ್ಷ ಸ್ಥಾನದ ಚುನಾವಣೆಗೆ ಶಾಸಕರ ಬಣದಿಂದ ಚಂದ್ರಪ್ಪ, ವಿರುದ್ಧವಾಗಿ ಬಿಜೆಪಿ ಬೆಂಬಲಿತ ಬಿ.ಎನ್.ಶ್ರಿನಿವಾಸಪ್ಪ ನಾಮಪತ್ರ ಸಲ್ಲಿಸಿದ್ದರು. ಇಬ್ಬರ ನಾಮಪತ್ರಗಳನ್ನು ಪರಿಶೀಲಿಸಿ ಸ್ವೀಕೃತಗೊಂಡಿದ್ದರಿಂದ ಚುನಾವಣೆ ನಡೆಯಿತು.
ಚುನಾಯಿತ ನಿರ್ದೆಶಕರು, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರು, ಸಹಾಯಕ ನೊಂದಣಾಧಿಕಾರಿಗಳು ಸೇರಿ ಒಟ್ಟು 14 ಮತದಾರರು ಮತದಾನ ಮಾಡಿದರು. ಹಿರಿಯ ನಿರ್ದೇಶಕ ಬಿ.ಎಲ್.ನಂಜುಂಡಗೌಡ ಸಭಾಧ್ಯಕ್ಷರಾಗಿ ಚುನಾವಣೆ ನಡೆಸಿಕೊಟ್ಟರು. ಕಾರ್ಯದರ್ಶಿ ವೆಂಕಟೇಶ್ ಸಹಕರಿಸಿದರು.
ಪ್ರಸ್ತುತ ಅಧ್ಯಕ್ಷರಾಗಿರುವ ಚಂದ್ರಪ್ಪ, ನಾನು ಅಧಿಕಾರ ವಹಿಸಿಕೊಂಡು ಕೇವಲ 9 ತಿಂಗಳಾಗಿದೆ. ನನಗೆ ಎರಡೂವರೆ ವರ್ಷ ಅವಕಾಶವಿರುವುದರಿಂದ ಚುನಾವಣೆಗೆ ತಡೆಯಾಜ್ಞೆ ನೀಡಬೇಕೆಂದು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ನ್ಯಾಯಾಲಯವು ಚುನಾವಣೆಗೆ ತಡೆಯಾಜ್ಞೆ ನೀಡದೆ ಈಗಾಗಲೇ ನಿಗದಿಯಾಗಿರುವಂತೆ ಚುನಾವಣೆಯನ್ನು ನಡೆಸಿ, ಮುಂದಿನ ಆದೇಶದವರೆಗೂ ಮತ ಎಣಿಕೆ ಮಾಡದೆ, ಮತಪೆಟ್ಟಿಗೆಯನ್ನು ಖಜಾನೆಯಲ್ಲಿ ಸಂರಕ್ಷಿಸಬೇಕೆಂದು ತೀರ್ಪು ನೀಡಿದ್ದರ ಹಿನ್ನೆಲೆಯಲ್ಲಿ ಚುನಾವಣೆ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.