ADVERTISEMENT

ದಲಿತ ಕೇರಿಗಳಿಗೆ ಸೌಲಭ್ಯ ಇಲ್ಲ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2012, 7:45 IST
Last Updated 20 ಏಪ್ರಿಲ್ 2012, 7:45 IST

ಬಾಗೇಪಲ್ಲಿ: ಅಂಬೇಡ್ಕರ್ ಆಶಯದಂತೆ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಸಮಾನತೆ ಸಿಗಬೇಕು ಎಂದು ಬಿಎಸ್‌ಆರ್ ಪಕ್ಷದ ತಾಲ್ಲೂಕು ಮುಖಂಡ ಎಸ್‌ಎಂಟಿಸಿ ಲಕ್ಷ್ಮೀನಾರಾಯಣ ತಿಳಿಸಿದರು.

ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ರಸ್ತೆಯಲ್ಲಿ ಕನ್ನಡ ಸೇನೆ-ಕರ್ನಾಟಕ ತಾಲ್ಲೂಕು ಘಟಕ ಗುರುವಾರ ಆಯೋಜಿಸಿದ್ದ ಅಂಬೇಡ್ಕರ್ ಜನ್ಮದಿನಾಚರಣೆಯಲ್ಲಿ ಮಾತನಾಡಿ, `ಸ್ವಾತಂತ್ರ್ಯ ಪಡೆದು 64 ವರ್ಷಗಳು ಕಳೆದರೂ ದಲಿತ ಹಾಗೂ ಹಿಂದುಳಿದ ಕೇರಿಗಳು ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಬಡ ಕೃಷಿ-ಕೂಲಿ-ಕಾರ್ಮಿಕರಿಗೆ ಉದ್ಯೋಗ ಇಲ್ಲದಂತಾಗಿದೆ.

ಗ್ರಾಮಾಂತರ ಪ್ರದೇಶಗಳಲ್ಲಿ ಬರದ ಛಾಯೆ ಆವರಿಸಿದೆ. ಸ್ವಾತಂತ್ರ್ಯ, ಸಮಾನತೆ ಹಾಗೂ ಹಕ್ಕುಗಳಿಗೆ ಜನತೆ ಹೋರಾಟ ನಡೆಸಬೇಕಾಗಿದೆ~ ಎಂದರು.ಕನ್ನಡ ಸೇನೆ-ಕರ್ನಾಟಕ ತಾಲ್ಲೂಕು ಅಧ್ಯಕ್ಷ ಬಾಬಾಜಾನ್, ದೇಶದಲ್ಲಿ ಅಸ್ಪೃಶ್ಯತೆ, ಬಡತನ ಹಾಗೂ ನಿರುದ್ಯೋಗ ತಾಂಡವವಾಡುತ್ತಿದೆ. ಊಟಕ್ಕಿಲ್ಲದೆ ನರಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆಲವರ ಐಷಾರಾಮಿ ಜೀವನದಿಂದ ದೇಶದ ಏಕತೆ, ಸಮಗ್ರತೆಗೆ ಧಕ್ಕೆಯುಂಟಾಗಿದೆ. ಸ್ವಾತಂತ್ರ್ಯಕ್ಕೆ ಹೋರಾಡಿದ ನಾಯಕರ ಕನಸು ನನಸಾಗಲು ಯುವಶಕ್ತಿ ಮುಂದಾಗಬೇಕು ಎಂದರು.  

ಬಿಎಸ್‌ಆರ್ ಪಕ್ಷದ ತಾಲ್ಲೂಕು ಮುಖಂಡ ಎಸ್‌ಎಂಟಿಸಿ ಲಕ್ಷ್ಮೀನಾರಾಯಣ ಅನ್ನದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಿಎಸ್‌ಆರ್ ಪಕ್ಷ ಯುವ ಮುಖಂಡ ವೆಂಕಟರವಣಪ್ಪ(ಸಮರ), ಮುಖಂಡ ಮಧುರಾಜ, ಮಾದಿಗ ದಂಡೋರ ತಾಲ್ಲೂಕು ಅಧ್ಯಕ್ಷ ಶಿವಪ್ಪ, ಕನ್ನಡ ಸೇನೆ-ಕರ್ನಾಟಕ ಮುಖಂಡರಾದ ಗೌತಮ್, ಬಾಲಾಜಿ, ವೆಂಕಟರವಣಪ್ಪ, ರಾಮಾಂಜಿ, ವೇಣು ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.