ADVERTISEMENT

ದಲಿತ ಸಮುದಾಯದ ಸಮಸ್ಯೆಗೆ ಸ್ಪಂದಿಸಲು ಸೂಚನೆ

ತಹಶೀಲ್ದಾರ್ ನಟೇಶ್‌ ವಿರುದ್ಧ ಸಚಿವ ಶ್ರೀನಿವಾಸ ಪ್ರಸಾದ್‌ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 9 ಜನವರಿ 2014, 6:43 IST
Last Updated 9 ಜನವರಿ 2014, 6:43 IST

ಚಿಕ್ಕಬಳ್ಳಾಪುರ: ‘ಅಧಿಕಾರಿಯಾಗಿ ಜನ­ಸಾಮಾನ್ಯರೊಂದಿಗೆ ಹೇಗಿರಬೇಕು ಎಂಬುದು ನಿಮಗೆ ಗೊತ್ತಿಲ್ಲವೇ, ದಲಿತ ಸಮುದಾಯದವರು, ಹಿಂದುಳಿದ ವರ್ಗ­ದವರು ಮುಂತಾದವರು ಕಚೇ­ರಿಗೆ ಬಂದರೆ ಅವರೊಂದಿಗೆ ಸರಿಯಾಗಿ ಸ್ಪಂದಿಸಲು ಆಗುವುದಿಲ್ಲವೇ, ಬೇಡಿಕೆ­ಗಳು ಏನೆಂಬುದನ್ನು ಆಲಿಸಿ, ಅವು­ಗಳನ್ನು ಒಂದೊಂದಾಗಿ ಪರಿಹರಿಸಲು ನಿಮ್ಮಿಂದ ಆಗುವುದಿಲ್ಲವೇ, ಎಲ್ಲ­ರೊಂದಿಗೂ ಸರಿಯಾಗಿ ವರ್ತಿಸಬೇಕು. ಇನ್ನೊಮ್ಮೆ ನಿಮ್ಮ ವಿರುದ್ಧ ಇಂತಹ ದೂರು ಕೇಳಿ ಬರಬಾರದು’ –ಹೀಗೆ ತಹಶೀಲ್ದಾರ್‌ ಡಿ.ಬಿ.ನಟೇ­ಶ್‌ ಅವರಿಗೆ ಎಚ್ಚರಿಕೆ ನೀಡಿದವರು ಕಂದಾ­ಯ ಸಚಿವ ಶ್ರೀನಿವಾಸ ಪ್ರಸಾದ್‌.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ಅಧಿಕಾರಿಗಳ ವಿರುದ್ಧ ದಲಿತ ಸಂಘರ್ಷ ಸಮಿತಿ ಸಂಚಾಲಕ ಕೆ.ಸಿ.ರಾಜಾಕಾಂತ್ ಅವರು ಸಲ್ಲಿಸಿದ ಮನವಿಪತ್ರ ಸ್ವೀಕರಿಸಿ, ಅಹವಾಲು ಆಲಿಸಿದ ಬಳಿಕ ಅವರು ಸ್ಥಳಕ್ಕೆ ನಟೇಶ್‌ ಅವರನ್ನು ಕರೆಸಿಕೊಂಡು ತರಾಟೆಗೆ ತೆಗೆದುಕೊಂಡರು. ಜನರತ್ತ ನಿರ್ಲಕ್ಷ್ಯ ತೋರದಂತೆ ಕರ್ತವ್ಯ ನಿರ್ವಹಿಸಲು ಸೂಚಿಸಿದರು.

ಇದಕ್ಕೂ ಮುನ್ನ ಜಿಲ್ಲೆಯಲ್ಲಿ ದಲಿತ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಸಮುದಾಯದವರು ಸೇರಿದಂತೆ ಜನ­ಸಾಮಾನ್ಯರ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದರು. ಅವರು ಯಾವುದೆಲ್ಲ ಸಮಸ್ಯೆ­ಗಳನ್ನು ಎದುರಿಸುತ್ತಿದ್ದಾರೆ ಮತ್ತು ಆಗಬೇಕಿರುವ ಕಾರ್ಯಗಳು ಯಾವ್ಯಾವು ಎಂಬುದರ ಬಗ್ಗೆ ತಿಳಿದು­ಕೊಂಡರು.

ದಲಿತ ಸಂಘರ್ಷ ಸಮಿತಿ ಸಂಚಾಲಕ ಕೆ.ಸಿ.ರಾಜಾಕಾಂತ್‌ ಮಾತನಾಡಿ, ಜಿಲ್ಲೆ­ಯಲ್ಲಿ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ಅಧಿಕಾರಿಗಳು ಜನ­ಸಾಮಾ­ನ್ಯರ ಸಮಸ್ಯೆ ಮತ್ತು ಬೇಡಿಕೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ವಾರಗಟ್ಟಲೆ ಪ್ರತಿಭಟನೆ ನಡೆಸಿದರೂ ನಮ್ಮ ಬೇಡಿಕೆ­ಗಳನ್ನು ಈಡೇರಿಸಿಲ್ಲ. ನಮ್ಮ ಸಮಸ್ಯೆಗಳು ಏನೆಂಬುದನ್ನು ತಿಳಿಯಲು ಸಭೆಯನ್ನು ಸಹ ಕರೆಯಲಿಲ್ಲ. ಪರಿಸ್ಥಿತಿ ಇದೇ ರೀತಿಯಲ್ಲಿ ಮುಂದುವರಿದರೆ, ನಾವು ಜಿಲ್ಲೆಯಲ್ಲಿ ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

‘ಯಾಕೆ ಇಂತಹ ಬೆಳವಣಿಗೆ ನಡೆ­ದಿದೆ ಎಂಬುದರ ಬಗ್ಗೆ ತಹಶೀಲ್ದಾರ್‌ ಡಿ.ಬಿ.ನಟೇಶ್‌ ಮತ್ತು ಜಿಲ್ಲಾಧಿಕಾರಿ ಡಾ.ಆರ್‌.ವಿಶಾಲ್‌ ಅವರಿಂದ ಮಾಹಿತಿ ಪಡೆದುಕೊಳ್ಳುತ್ತೇನೆ. ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುವಂತೆ ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸು­ವಂತೆ ಹೇಳುತ್ತೇನೆ’ ಎಂದು ಭರವಸೆ ನೀಡಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆಂಜನಪ್ಪ, ಮಾಜಿ ಶಾಸಕ ಎಂ.ಶಿವಾನಂದ, ದಲಿತ ಸಂಘರ್ಷ ಸಮಿತಿ ಸಂಚಾಲಕ ಆನಂದ್‌ ಮತ್ತಿ­ತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.