ಬಾಗೇಪಲ್ಲಿ: ಗೌರಿಬಿದನೂರು ಕಡೆಯಿಂದ ಎಲ್ಲೋಡು ಮಾರ್ಗದಲ್ಲಿ ಸಾರಿಗೆ ಸಂಸ್ಥೆ ಬಸ್ಗಳು ನಿಯಮಿತವಾಗಿ ಸಂಚರಿಸುತ್ತಿಲ್ಲ ಎಂದು ಆರೋಪಿಸಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಶುಕ್ರವಾರ ಸಾರಿಗೆ ನಿಗಮ ಘಟಕದ ಮುಂದೆ ಪ್ರತಿಭಟನೆ ನಡೆಸಿದರು.
ಎಸ್ಎಫ್ಐ ತಾಲ್ಲೂಕು ಮುಖಂಡ ರಾಜಶೇಖರ್ ಮಾತನಾಡಿ, ಗೌರಿಬಿದನೂರು ಮಾರ್ಗದ ನಗೆರೆಗೆರೆ, ವಾಟದಹೊಸಹಳ್ಳಿ, ಎಲ್ಲೋಡು ಕಡೇಹಳ್ಳಿ ಗ್ರಾಮಗಳ ಕ್ರಾಸ್ನಲ್ಲಿ ಬಸ್ಗಳು ನಿಲುಗಡೆ ಮಾಡುತ್ತಿಲ್ಲ. ಗೌರಿಬಿದನೂರು ಸಾರಿಗೆ ಘಟಕದ ಬಸ್ ಮಾತ್ರ ಸಂಚರಿಸುತ್ತಿದೆ. ಬಾಗೇಪಲ್ಲಿ ಘಟಕದ ಬಸ್ಗಳು ಸಂಚರಿಸುತ್ತಿಲ್ಲ.
ಇದರಿಂದ ವಿದ್ಯಾರ್ಥಿಗಳು ತರಗತಿಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಸಂಜೆ ಸಮಯದಲ್ಲಿ ಗೌರಿಬಿದನೂರಿಗೆ 6 ಗಂಟೆಗೆ ಬಸ್ ಇದೆ. ಇದರಿಂದ ಕತ್ತಲಲ್ಲಿ ನಡೆದೇ ಹೋಗಬೇಕಾಗಿದೆ. ಈ ಸಂಬಂಧ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಈ ಕೂಡಲೇ ಸಾರಿಗೆ ನಿಗಮದ ಜಿಲ್ಲಾ ಅಧಿಕಾರಿಗಳು ಗಮನ ಹರಿಸಿ ಗೌರಿಬಿದನೂರು ಮಾರ್ಗಕ್ಕೆ ಬೆಳಿಗ್ಗೆ-ಸಂಜೆ ನಿಗದಿತ ಸಮಯದಲ್ಲಿ ಬಸ್ಗಳು ಸಂಚರಿಸುವಂತೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.
ಎಸ್ಎಫ್ಐ ತಾಲ್ಲೂಕು ಮುಖಂಡರಾದ ಅಂಬರೀಶ್, ಶ್ರೀನಾಥ್, ಅಜಯ್, ನರಸಿಂಹ, ಕೃಷ್ಣೇಗೌಡ, ಮೂರ್ತಿ, ರಾಘವೇಂದ್ರರೆಡ್ಡಿ, ನಂದೀಶ, ಮಂಜುನಾಥ, ವಿಜಯ್ಕುಮಾರ್ರೆಡ್ಡಿ, ಕಾರ್ತಿಕ್, ಹರೀಶ್, ನಂದಿನಿ, ಪಲ್ಲವಿ, ಸೌಭಾಗ್ಯಲಕ್ಷ್ಮಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.