ADVERTISEMENT

ನಿಲ್ಲದ ರೈತರ ಶೋಷಣೆ: ಆರೋಪ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 10:50 IST
Last Updated 13 ಫೆಬ್ರುವರಿ 2011, 10:50 IST

 ಚಿಂತಾಮಣಿ: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು, ಕಮಿಷನ್ ಏಜೆಂಟರು, ದಲ್ಲಾಳಿಗಳು ಶಾಮೀಲಾಗಿ ಅನೇಕ ರೀತಿಯಲ್ಲಿ ರೈತರ ಮೇಲೆ ನಡೆಸುತ್ತಿರುವ ಶೋಷಣೆ ನಿಲ್ಲಿಸಬೇಕೆಂದು ಒತ್ತಾಯಿಸಿ ಶುಕ್ರವಾರ ರೈತ ಸಂಘ ಮತ್ತು ಹಸಿರುಸೇನೆ ಮುಖಂಡರು ಇಲಾಖೆ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಸಾಲಸೋಲ ಮಾಡಿ, ನೂರಾರು ಅಡಿಗಳ ಅಂತರದಿಂದ ನೀರು ತೆಗೆದು, ವಿದ್ಯುತ್ ತೊಂದರೆ ಮುಂತಾದ ಹಲವಾರು ಸಂಕಷ್ಟಗಳ ನಡುವೆ ಬೆಳೆ ಬೆಳೆದು ಮಾರಾಟ ಮಾಡಲು ಬಂದರೆ ಟೊಮೆಟೊ ಬಾಕ್ಸ್ 100 ರೂ.ಗೆ ಹರಾಜು ಕೂಗಿದರೂ ರೈತರಿಗೆ ಬಿಲ್ ಹಾಕಿ ಕೊಡುವುದು 85 ರೂಪಾಯಿಗೆ ಮಾತ್ರ ಎಂದು ಮುಖಂಡರು ಆರೋಪಿಸಿದರು.

ಟೊಮೆಟೊ 100 ಬಾಕ್ಸ್‌ಗಳನ್ನು ಮಾರಾಟ ಮಾಡಿದರೆ 10 ಬಾಕ್ಸ್‌ಗಳನ್ನು ಜಾಕ್‌ಪಾಟ್ ತೆಗೆದುಕೊಳ್ಳುತ್ತಾರೆ. ತೂಕ ಹಾಕುವಾಗಲೂ ಮೋಸ ಮಾಡುತ್ತಾರೆ. ಅಮಾಯಕ ರೈತರು ಪ್ರಶ್ನಿಸಿದರೆ, ವ್ಯಾಪಾರಿಗಳು, ದಲ್ಲಾಳಿಗಳು, ಕಮಿಷನ್ ಏಜೆಂಟರು ಒಂದಾಗಿ ರೈತರ ಮೇಲೆ ದೌರ್ಜನ್ಯ ನಡೆಸುತ್ತಾರೆ ಎಂದು ದೂರಿದರು.

ಸಂಬಂಧಪಟ್ಟ ಅಧಿಕಾರಿಗಳು ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಮೋಸ ತಡೆಗಟ್ಟಬೇಕು, ಇಲ್ಲದಿದ್ದರೆ ರೈತರು ಕಾನೂನು ಕೈಗೆತ್ತಿಕೊಂಡು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.  ರೈತ ಸಂಘ ಮತ್ತು ಹಸಿರು ಸೇನೆಯ ಇನ್ನಿತರ ಮುಖಂಡರು ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.