ADVERTISEMENT

ಭಾಷಣದಲ್ಲೇ ಪುನಶ್ಚೇತನ, ವಾಸ್ತವದಲ್ಲಿ ಅಧ್ವಾನ!

ನಗರದಾದ್ಯಂತ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಜಲಮೂಲಗಳ ಜೀವಾಳವಾದ ಕಾಲುವೆಗಳು

ಈರಪ್ಪ ಹಳಕಟ್ಟಿ
Published 5 ಜೂನ್ 2017, 6:36 IST
Last Updated 5 ಜೂನ್ 2017, 6:36 IST
ಚಿಕ್ಕಬಳ್ಳಾಪುರದ ಬಿ.ಬಿ.ರಸ್ತೆಯಲ್ಲಿ ರಾಜಕಾಲುವೆ ಮಾರ್ಗದಲ್ಲಿ ತ್ಯಾಜ್ಯ ಸುರಿದಿರುವುದು
ಚಿಕ್ಕಬಳ್ಳಾಪುರದ ಬಿ.ಬಿ.ರಸ್ತೆಯಲ್ಲಿ ರಾಜಕಾಲುವೆ ಮಾರ್ಗದಲ್ಲಿ ತ್ಯಾಜ್ಯ ಸುರಿದಿರುವುದು   

ಚಿಕ್ಕಬಳ್ಳಾಪುರ: ಜಿಲ್ಲಾಡಳಿತ ಕೇಂದ್ರವಾದ ನಗರದಲ್ಲಿ ಪದೇ ಪದೇ ಸಭೆ, ಸಂವಾದ, ಚರ್ಚೆ, ಕಾರ್ಯಾಗಾರ, ಹೋರಾಟಗಳಲ್ಲಿ ಜಲಮೂಲಗಳ ಪುನಶ್ಚೇತನದ ಬಗ್ಗೆ ಕೇಳಿ ಬರುವ ಭಾಷಣಗಳೆಲ್ಲ ಬರೀ ಕೇಳುವುದಕ್ಕೆ ಮಾತ್ರ ಸೀಮಿತವಾಗುತ್ತಿವೆ. ಜಲಮೂಲಗಳ ಜೀವಾಳವೇ ಆದ ಕಾಲುವೆಗಳು ಮಾತ್ರ ದಿನೇ ದಿನೇ ಅಸ್ತಿತ್ವ ಕಳೆದುಕೊಳ್ಳುತ್ತಿವೆ.

ಊರ ತುಂಬಾ ಸುರಿದ ಮಳೆಯ ನೀರನ್ನು ವ್ಯವಸ್ಥಿತವಾಗಿ ಕೆರೆ, ಕುಂಟೆಗಳಿಗೆ ಸಾಗಿಸಬೇಕಾದ ಕಾಲುವೆಗಳಿಗೆ ಲೋಡುಗಟ್ಟಲೇ ತ್ಯಾಜ್ಯ ಸುರಿದು ಸಮಾಧಿ ಮಾಡಲಾಗುತ್ತಿದೆ. ಜಲಮೂಲಗಳ ಪುನಶ್ಚೇತನದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ಭಾಷಣ ಮಾಡಿಸುವ ನಗರಸಭೆ, ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತದ ಕಾರ್ಯವೈಖರಿ ಮಾತ್ರ, ನಮ್ಮದು ಬರೀ ಭಾಷಣಕ್ಕೆ ಸೀಮಿತ ಕಾರ್ಯ ಎನ್ನುವಂತಿದೆ. ಅಧಿಕಾರಿಗಳ ಜಾಣ ಕುರುಡು ಪ್ರದರ್ಶನ ಎಂದಿನಂತೆ ಮುಂದುವರಿದಿದೆ.
ಪ್ರತಿ ಮಳೆಗಾಲಕ್ಕೂ ಮುನ್ನ ನಗರ ಪ್ರದೇಶಗಳಲ್ಲಿ ಚರಂಡಿ, ಕಾಲುವೆಗಳ ಹೂಳು ತೆಗೆದು ಮಳೆ ಅವಘಡ ಎದುರಿಸಲು ಸನ್ನದ್ಧಗೊಳ್ಳಬೇಕಾದದ್ದು ನಗರ ಯೋಜನೆಯ ಒಂದು ಭಾಗ. ಆದರೆ ಮುಂಗಾರು ಆರಂಭಗೊಂಡರೂ ನಗರದಲ್ಲಿ ಮಾತ್ರ ಈ ಕೆಲಸ ನಡೆದಿಲ್ಲ. ನಗರದ ಪ್ರಮುಖ ರಾಜಕಾಲುವೆಗಳನ್ನು ಮುಚ್ಚಿ ಹಾಕುವ ಕೆಲಸ ಮಾತ್ರ ಸದ್ದಿಲ್ಲದೆ ಜೋರಾಗಿ ನಡೆದಿದೆ.

ಕಂದವಾರ ಕೆರೆಯ ಎಡದಂಡೆ ತೂಬಿನ ನೀರು ಸೇರಿದಂತೆ ಕೆರೆ ದಂಡೆಯ ಕೆಳಗಿನ ಪ್ರದೇಶದಲ್ಲಿ ಸಂಗ್ರಹವಾಗುವ ನೀರನ್ನು ಅಮಾನಿ ಗೋಪಾಲ ಕೃಷ್ಣ ಕೆರೆಗೆ ಹರಿಸುವ ಮುಖ್ಯ ಕಾಲುವೆಯ ಪಾಡು ಇದೀಗ ಬಣ್ಣಿಸಲಾರದಷ್ಟು ಅಧ್ವಾನಗೊಂಡಿದೆ. ಅದರಲ್ಲೂ ನಗರದ ಪ್ರಮುಖ ರಸ್ತೆಯಾದ ಬಿ.ಬಿ.ರಸ್ತೆಯ ಅಕ್ಕಪಕ್ಕ ಈ ಕಾಲುವೆಯ ಅಸ್ತಿತ್ವ ಕಳೆಯುವ ಕೆಲಸ ಅನೇಕ ವರ್ಷಗಳಿಂದ ನಡೆಯುತ್ತಲೇ ಬಂದಿದೆ.

ADVERTISEMENT

ನ್ಯೂ ಹರಿಜನ್ ಶಾಲೆಯ ಸಮೀಪದಲ್ಲಿರುವ ಕಾಲುವೆಗೆ ನಿತ್ಯವೂ ರಾಶಿ ರಾಶಿ ತ್ಯಾಜ್ಯ, ಒಡೆದ ಮನೆಗಳ ಭಗ್ನಾವಶೇಷಗಳು ಬಂದು ಬೀಳುತ್ತಿವೆ. ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದ ನಗರಸಭೆ ಅಧಿಕಾರಿಗಳು ಇದೆಲ್ಲ ಕಂಡರೂ ಕಾಣದಂತೆ ವರ್ತಿಸುತ್ತಿರುವುದು ನೀರಾವರಿ ಹೋರಾಟಗಾರರಲ್ಲಿ ಬೇಸರ ಮೂಡಿಸಿದೆ.

‘ಕೆರೆ, ಕುಂಟೆಗಳಿಗೆ ನೀರು ಹರಿಸುವ ಮೂಲಗಳನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವುದೇ ಒಂದು ದೊಡ್ಡ ಲಾಬಿ. ಇಂದು ಕಾಲುವೆ ಮುಚ್ಚಿ ಹಾಕಿದರೆ ಮುಂದೊಂದು ದಿನ ಸುಲಭವಾಗಿ ಕೆರೆ ಜಾಗವನ್ನು ಖಾಸಗಿ ಆಸ್ತಿಯನ್ನಾಗಿ ಪರಿವರ್ತಿಸಿ, ಕಬಳಿಸಲು ಅನುಕೂಲವಾಗುತ್ತದೆ ಎಂದು ಲೆಕ್ಕಾಚಾರ ಹಾಕಿಯೇ ಕೆಲ ಲಾಬಿಗಳು ಇಂತಹ ಕೆಲಸ ಮಾಡುತ್ತವೆ. ಅಂತಹ ಲಾಬಿಗಳು ನಗರದಲ್ಲಿ ಕೂಡ ಇವೆ’ ಎನ್ನುತ್ತಾರೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ.

‘ಹಸಿರು ನ್ಯಾಯ ಪೀಠ, ಸುಪ್ರೀಂ ಕೋರ್ಟ್ ಕೆರೆಯ ಜಾಲಗಳನ್ನು ರಕ್ಷಿಸುವಂತೆ ನಿರ್ದೇಶನ ನೀಡುತ್ತಲೇ ಬಂದಿವೆ. ಕಾಲುವೆ ಮಾತ್ರವಲ್ಲದೆ ಅದರ ಸುತ್ತಲಿನ ಸಂರಕ್ಷಿತ ಪ್ರದೇಶವನ್ನು ಕೂಡ ಒತ್ತುವರಿಯಾಗದಂತೆ ಕಾಪಾಡಿಕೊಳ್ಳಬೇಕು ಎಂದು ಈ ನ್ಯಾಯಾಲಯಗಳು ಹೇಳಿವೆ. ಆದರೂ ಕಾಲುವೆಗಳನ್ನು ಮುಚ್ಚಿ ಒತ್ತುವರಿ ಮಾಡಿಕೊಳ್ಳುವ ಕೆಲಸಗಳು ನಡೆಯುತ್ತಲೇ ಇವೆ. ಇದಕ್ಕೆ ಸ್ಥಳೀಯ ಸಂಸ್ಥೆಗಳೇ ನೇರ ಹೊಣೆ. ಈ ಬಗ್ಗೆ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ’ ಎಂದು ಹೇಳಿದರು.

‘ಕೆರೆ, ಕುಂಟೆಗಳಿಗೆ ಮಳೆ ನೀರು ಸಾಗಿಸುವ ಕಾಲುವೆಗಳು ರಕ್ತನಾಳಗಳಿದ್ದಂತೆ. ಅವು ಸ್ವಚ್ಛವಾಗಿದ್ದಷ್ಟು ಜಲಮೂಲಗಳ ಆರೋಗ್ಯ ಚೆನ್ನಾಗಿ ಇರುತ್ತದೆ. ಜಲಮೂಲಗಳೆಲ್ಲ ನಮ್ಮ ಅಮೂಲ್ಯ ಆಸ್ತಿಗಳು.ಅವುಗಳನ್ನು ರಕ್ಷಿಸಿಕೊಳ್ಳಬೇಕು ಎಂಬ ಪ್ರಜ್ಞೆ ಸಾರ್ವಜನಿಕರಲ್ಲಿ ಬರಬೇಕಾಗಿದೆ. ನಗರದಲ್ಲಿ ಕಾಲುವೆಗಳ ಜಾಲ ರಕ್ಷಿಸಿ, ಪುನರುಜ್ಜೀವನಗೊಳಿಸುವ ಕೆಲಸ ತುರ್ತಾಗಿ ಆಗಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ಕಾಲುವೆಗಳನ್ನು ಮುಚ್ಚಿ ಹಾಕುತ್ತಿರುವುದರಿಂದ ಜೋರು ಮಳೆ ಸುರಿದಾಗಲೆಲ್ಲ ನಗರದ ಅನೇಕ ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗುತ್ತಲೇ ಇರುತ್ತದೆ. ಒಂದು ವರ್ಷದಲ್ಲಿ ನಗರದ ಇಡೀ ಚಿತ್ರಣವೇ ಬದಲಾಗುತ್ತದೆ ಎಂಬ ಭಾಷಣ ಕೇಳಿ, ಕೇಳಿ ಸಾಕಾಗಿದೆ. ಜನರು ಕೂಡ ಮೋಸ ಹೋಗುತ್ತಿದ್ದಾರೆ. ಮತದಾರರು ಪ್ರಜ್ಞಾವಂತರಾಗಿ ವಾಸ್ತವದಲ್ಲಿ ಏನು ನಡೆಯುತ್ತಿದೆ ಎಂದು ಪರಾಮರ್ಶಿಸುವ ಕೆಲಸ ಮಾಡಬೇಕು’ ಎಂದು ರೈತ ಮುಖಂಡ ಯಲುವಹಳ್ಳಿ ಸೊಣ್ಣೇಗೌಡ ತಿಳಿಸಿದರು.

**

ಕೋಟಿಗಟ್ಟಲೇ ಅನುದಾನದ ಭಾಷಣ ಪತ್ರಿಕೆಗಳಿಗೆ ಸೀಮಿತವಾಗುತ್ತಿವೆ.  ಅಂಗೈಯಲ್ಲಿ ಅರಮನೆ ತೋರಿಸುವುದು ಮುಂದುವರಿದಿದೆ.
-ಯಲುವಹಳ್ಳಿ ಸೊಣ್ಣೇಗೌಡ, ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.