ADVERTISEMENT

ಭ್ರಾತೃತ್ವ ಭಾವನೆ ಮೂಡಿಸಿದ ‘ಮಾತೃ ಭೋಜನ’

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 6:48 IST
Last Updated 15 ನವೆಂಬರ್ 2017, 6:48 IST
ನಗರದ ಹೊರವಲಯದ ಬಿಜಿಎಸ್‌ ಆಂಗ್ಲ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಅಂಗವಾಗಿ ಪೋಷಕರು ತಂದಿದ್ದ ಬಗೆ ಬಗೆ ತಿಂಡಿಯನ್ನು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾಮಠದ ಮಂಗಳನಂದನಾಥ ಸ್ವಾಮೀಜಿ ಮಕ್ಕಳಿಗೆ ಬಡಿಸುತ್ತಿರುವುದು
ನಗರದ ಹೊರವಲಯದ ಬಿಜಿಎಸ್‌ ಆಂಗ್ಲ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಅಂಗವಾಗಿ ಪೋಷಕರು ತಂದಿದ್ದ ಬಗೆ ಬಗೆ ತಿಂಡಿಯನ್ನು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾಮಠದ ಮಂಗಳನಂದನಾಥ ಸ್ವಾಮೀಜಿ ಮಕ್ಕಳಿಗೆ ಬಡಿಸುತ್ತಿರುವುದು   

ಚಿಕ್ಕಬಳ್ಳಾಪುರ: ‘ಮಕ್ಕಳಿಗೆ ತಾಯಂದಿರು ಕೈ ತುತ್ತು ತಿನಿಸುವ ಮೂಲಕ ಮಾತೃತ್ವದ ಸಂಕೇತವನ್ನು ಎತ್ತಿ ಹಿಡಿಯಬೇಕು’ ಎಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾಮಠದ ಮಂಗಳನಂದನಾಥ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಹೊರವಲಯದ ಬಿಜಿಎಸ್‌ ಆಂಗ್ಲ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಭೋಜನ ಬಡಿಸುವ ಮೂಲಕ ಮಾತೃಭೋಜನ ಕಾರ್ಯಕ್ರಮವನ್ನು ಉದ್ಘಾಟಿಸಿದರು. ‘ಮಕ್ಕಳನ್ನು ದೇವರಂತೆ ಕಾಣುವ ಪೋಷಕರು ಪ್ರೀತಿಯಿಂದ ಉತ್ತಮ ಸಂಸ್ಕಾರವನ್ನು ಹೇಳಿಕೊಡಬೇಕು’ ಎಂದರು.

‘ಪೋಷಕರು ಮಕ್ಕಳ ಅಗತ್ಯತೆಗಳನ್ನು ಅರಿತು ಜಾಗೃತಿ ವಹಿಸಿ ಉತ್ತಮ ಊಟ, ಬಟ್ಟೆ ಕೊಡಿಸಬೇಕು. ಮಕ್ಕಳ ಜೀವನಕ್ಕೆ ಬೇಕಾದ ಸಂಸ್ಕಾರಯುತ ಮೌಲ್ಯಗಳನ್ನು ಹೇಳಿಕೊಡಬೇಕು’ ಎಂದರು.

ADVERTISEMENT

‘ಇದರಿಂದ ಮಕ್ಕಳ ಮುಂದಿನ ಭವಿಷ್ಯವೂ ಉಜ್ವಲವಾಗುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಪ್ರೀತಿ, ವಾತ್ಸಲ್ಯ ತುಂಬಿದರೆ ಜೀವನ ಪೂರ್ತಿ ಪೋಷಕರನ್ನು ಮಮತೆಯಿಂದ ಕಾಣುತ್ತಾರೆ. ಜತೆಗೆ ಭಾರತೀಯ ಸಂಸ್ಕೃತಿ ಉಳಿಸುವಂತಹ ಕೆಲಸ ಮಾಡಬೇಕು’ ಎಂದು ತಿಳಿಸಿದರು.

‘ಇತ್ತೀಚಿನ ದಿನಗಳಲ್ಲಿ ಮಕ್ಕಳು ಪೋಷಕರಿಂದ ದೂರ ಉಳಿಯುತ್ತಿರುವುದು ಆತಂಕದ ಸಂಗತಿ. ಮಕ್ಕಳು ಮತ್ತು ಪೋಷಕರ ಇದರಿಂದ ಅನೇಕ ಸಮಸ್ಯೆಗಳನ್ನು ಜೀವನದಲ್ಲಿ ಎದುರಿಸಬೇಕಾಗುತ್ತದೆ. ಜತೆಗೆ ಮುಂದಿನ ಭವಿಷ್ಯವೂ ಹಾಳಾಗುತ್ತದೆ. ಆದ್ದರಿಂದ ಪೋಷಕರು ಆರಂಭದಲ್ಲೆ ಎಚ್ಚರ ವಹಿಸಿ ಮಕ್ಕಳ ಆಸೆಗಳನ್ನು ಈಡೇರಿಸಲು ಮುಂದಾಗಿ’ ಎಂದು ತಿಳಿಸಿದರು.

ಬಿಜಿಎಸ್‌ ಆಂಗ್ಲ ಶಾಲೆಯ ಪ್ರಾಂಶುಪಾಲ ಡಿ.ಸಿ.ಮೋಹನ್‌ ಕುಮಾರ್‌ ಮಾತನಾಡಿ, ‘ಪ್ರತಿ ವರ್ಷದಂತೆ ಪೋಷಕರು ಮಕ್ಕಳ ದಿನಾಚರಣೆ ಅಂಗವಾಗಿ ತಮ್ಮ ಮನೆ
ಯಲ್ಲಿ ಪ್ರೀತಿಯಿಂದ ಬಗೆ ಬಗೆಯ ತಿಂಡಿ ತಯಾರಿಸಿಕೊಂಡು ಬಂದು ಶಾಲೆಯ ಎಲ್ಲಾ ಮಕ್ಕಳಿಗೆ, ಸಿಬ್ಬಂದಿ, ಶಿಕ್ಷಕರಿಗೆ ಭೋಜನ ಬಡಿಸುವುದು ಭಾರತೀಯ ಸಂಸ್ಕೃತಿಯ ಪಾಠ ಹೇಳಿಕೊಡುತ್ತದೆ’ ಎಂದು ತಿಳಿಸಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪಿ.ಯು ಕಾಲೇಜಿನ ಪ್ರಾಂಶುಪಾಲ ಎಚ್‌.ಬಿ.ರಮೇಶ್‌, ಪಿ.ಯು ಕಾಲೇಜಿನ ಡೀನ್‌ ಮಧುಸೂಧನ್‌, ದೊಡ್ಡೇಗೌಡ ಇದ್ದರು.

ಚಿಕ್ಕಬಳ್ಳಾಪುರ: ‘ಜಾಗತೀಕರಣ ಬೆಳೆವಣಿಗೆಯಿಂದ ಇತ್ತೀಚಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿದ್ದು, ಸಂಬಂಧಗಳು ದೂರ ಉಳಿಯುತ್ತಿರುವುದು ಬೇಸರದ ಸಂಗತಿಯಾಗಿದೆ’ ಎಂದು ಕೆವಿ ಪಂಚಗಿರಿ ಶಿಕ್ಷಣ ಸಂಸ್ಥೆಯ ಸದಸ್ಯೆ ಸುಜಾತ ನವೀನ್‌ಕಿರಣ್‌ ಆತಂಕ ವ್ಯಕ್ತಪಡಿಸಿದರು. ನಗರದ ಹೊರವಲಯದ ಕೆ.ವಿ ಕ್ಯಾಂಪಸ್‌ನಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಮಾತೃಭೋಜನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಕ್ಕಳಿಗೆ ಪೋಷಕರಿಂದ ಸರಿಯಾದ ಪ್ರೀತಿ ಸಿಗದೇ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ಇದರಿಂದ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ವಯಸ್ಸಾದ
ತಂದೆ ತಾಯಿಗಳು ವೃದ್ಧಾಶ್ರಮ ಸೇರುತ್ತಿದ್ದಾರೆ. ಹಿರಿಯರಿಂದ ಕಲಿಯಬೇಕಾದ ಸಂಸ್ಕಾರಗಳನ್ನು ಮಕ್ಕಳು ಕಲಿಯಲಾರದೆ ವಂಚಿತರಾಗುತ್ತಿದ್ದಾರೆ. ಅವಿಭಕ್ತ ಕುಟುಂಬಗಳು ಮಾಯವಾಗುತ್ತಿರುವುದು ಬೇಸರದ ಸಂಗತಿಯಾಗಿದೆ’ ಎಂದು ತಿಳಿಸಿದರು.

‘ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಉನ್ನತ ಗುಣಮಟ್ಟದ ಶಿಕ್ಷಣ ಅಗತ್ಯ. ಗುಣಮಟ್ಟದ ಶಿಕ್ಷಣದ ಹೆಸರಿನಲ್ಲಿ ಮಕ್ಕಳು ಸಂಸ್ಕೃತಿಯಿಂದ
ದೂರ ಉಳಿಯುತ್ತಿರುವುದು ಅಪಾಯಕಾರಿ ಬೆಳವಣಿಗೆ. ಇದರಿಂದ ನಮ್ಮ ದೇಶದ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವಲ್ಲಿ ಮಕ್ಕಳಿಗೆ ಮಾತೃಭೋಜನದಂತಹ ಸಮಾಜ ಮುಖಿ ಕಾರ್ಯಕ್ರಮಗಳು ಅವಶ್ಯವಾಗಿದೆ’ ಎಂದು ತಿಳಿಸಿದರು.

‘ನಿತ್ಯ ಮನೆಯಲ್ಲಿ ಮಕ್ಕಳಿಗೆ ತುತ್ತು ತಿನ್ನಿಸುವ ತಾಯಂದಿರು. ಈ ದಿನ ಇತರೆ ವಿಶೇಷವಾಗಿದೆ. ಎಲ್ಲಾ ಮಕ್ಕಳನ್ನು ತಮ್ಮ ಮಕ್ಕಳೆಂದೇ ಭಾವಿಸಿ, ಯಾವುದೇ ಬೇಧ, ಭಾವವಿಲ್ಲದೆ ಬಗೆ ಬಗೆ ತಿಂಡಿಗಳನ್ನು ತಿನ್ನಿಸುತ್ತಿರುವುದು ಮಕ್ಕಳಲ್ಲಿ ಸಮಾನತೆಯ ಮನೋಭಾವ ಮೂಡಲಿದೆ’ ಎಂದರು. ಮುಖ್ಯ ಶಿಕ್ಷಕ ಗಿರೀಶ್, ವೆಂಕಟರಾಮ್‌, ಶಶಿಧರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.