ADVERTISEMENT

ಮತ್ತೆ ಸಮ್ಮಿಶ್ರ ಸರ್ಕಾರದ ದುಸ್ಸಾಹಸ

ಬಿಜೆಪಿ– ಜೆಡಿಎಸ್ ವಿರುದ್ಧ ಶಾಸಕ ಶಿವಶಂಕರರೆಡ್ಡಿ ಆರೋಪ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 9:49 IST
Last Updated 13 ಏಪ್ರಿಲ್ 2018, 9:49 IST

ಗೌರಿಬಿದನೂರು: ‘ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿರುವ ನಮಗೆ ಕೆಲಸಗಳೇ ಶ್ರೀರಕ್ಷೆಯಾಗಲಿವೆ’ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದರು.

ತಾಲ್ಲೂಕಿನ ತೊಂಡೇಬಾವಿ ಹೊಬಳಿ ಅಲೀಪುರ ಗ್ರಾಮದಲ್ಲಿ ನಡೆದ ಪ್ರಚಾರದಲ್ಲಿ ಅವರು ಮಾತನಾಡಿದರು.‘ಮೋದಿ ಅವರ ನೇತೃತ್ವದಲ್ಲಿ ಕೈಗೊಂಡ ಕೇಂದ್ರ ಸರ್ಕಾರದ ಯೋಜನೆಗಳು ಜನಪರವಾಗಿಲ್ಲ. ತಂದ ಯೋಜನೆಗಳು ಕೂಡ ಕೇವಲ ಉದ್ಯಮಿಗಳ ಹಾಗೂ ಶ್ರೀಮಂತರನ್ನು ಆರ್ಥಿಕವಾಗಿ ಸದೃಢ ಮಾಡುವಂತಿವೆ. ರಾಜ್ಯದಲ್ಲಿ ಈಗಾಗಲೇ ಜೆಡಿಎಸ್ ಮತ್ತು ಬಿಜೆಪಿ ಸರ್ಕಾರಗಳ 20:20 ಪಂದ್ಯಾವಳಿಯನ್ನು ಜನರು ನೋಡಿದ್ದಾರೆ. ಇದೀಗ ಮತ್ತೆ ಸಮ್ಮಿಶ್ರ ಸರ್ಕಾರ ರಚಿಸುವ ಸಾಹಸಕ್ಕೆ ಮುಂದಾಗುತ್ತಿದ್ದಾರೆ’ ಎಂದು ಆರೋಪಿಸಿದರು.

ಕೆಪಿಸಿಸಿ ಸದಸ್ಯ ಇಬ್ನಿ ಹಸನ್ ಮಾತನಾಡಿ, ‘ಶಾಸಕರು ಈ ಬಾರಿ ಕ್ಷೇತ್ರದಲ್ಲಿ ಕೋಟ್ಯಂತರ ಅನುದಾನದಲ್ಲಿ ಅನೇಕ ಜನಪ್ರಿಯ ಯೋಜನೆಗಳನ್ನು ತಂದಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮೂಲ ಸೌಕರ್ಯಗಳನ್ನು ತರಲಿದ್ದಾರೆ. ಹೀಗಾಗಿ ಮತವನ್ನು ಪ್ರಾಮಾಣಿಕವಾಗಿ ಜನರ ಸೇವೆ ಮಾಡುವವರಿಗೆ ನೀಡಬೇಕು’ ಎಂದರು.

ADVERTISEMENT

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್, ಅಶ್ವತ್ಥನಾರಾಯಣಗೌಡ, ಜೆ.ಕಾಂತ ರಾಜು, ಅಕ್ರಂ ರಜಾ, ಏಜಾಜ್ ಅಲೀ, ಲೋಕೇಶ್, ರಾಮಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.