ADVERTISEMENT

ಮೇಳಕ್ಕೆ ಬಾರದ ಅತಿಥಿಗಳು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 10:00 IST
Last Updated 11 ಫೆಬ್ರುವರಿ 2012, 10:00 IST

ಚಿಕ್ಕಬಳ್ಳಾಪುರ: ಜಿಲ್ಲಾಮಟ್ಟದ ಫಲಪುಷ್ಪ ಪ್ರದರ್ಶನ ಮತ್ತು ತೋಟಗಾರಿಕೆ ಮೇಳಕ್ಕೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಆದರೆ ಮೇಳದ ಉದ್ಘಾಟನಾ ಸಮಾರಂಭಕ್ಕೆ ನಿರೀಕ್ಷಿಸಲಾಗಿದ್ದ ಪ್ರಮುಖ ಅತಿಥಿಗಳು ಮಾತ್ರ ಕಾಣಸಿಗಲಿಲ್ಲ.

ಮೇಳದ ಆಯೋಜಕರು ನಿರೀಕ್ಷಿಸಿದಂತೆ ಕಾರ್ಯಕ್ರಮಗಳು ನಡೆದಿದ್ದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಚಿವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು. ಚಿಕ್ಕಬಳ್ಳಾಪುರ ತಾಲ್ಲೂಕು ಅಲ್ಲದೇ ವಿವಿಧ ತಾಲ್ಲೂಕುಗಳ ಶಾಸಕರು ಭಾಗವಹಿಸಬೇಕಿತ್ತು. ಆದರೆ ಶಾಸಕರೊಬ್ಬರನ್ನು ಹೊರತುಪಡಿಸಿದರೆ ಇತರ ಶಾಸಕರ ಉಪಸ್ಥಿತಿ ಕಂಡು ಬರಲಿಲ್ಲ.

ಕೇಂದ್ರ ಸಚಿವರಾದ ವೀರಪ್ಪ ಮೊಯಿಲಿ, ಕೆ.ಎಚ್.ಮುನಿಯಪ್ಪ ಅವರ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಎ.ನಾರಾಯಣಸ್ವಾಮಿಯವರು ಮೇಳಕ್ಕೆ ಚಾಲನೆ ನೀಡಬೇಕಿತ್ತು. ಆದರೆ ಅವರ‌್ಯಾರೂ ಬಾರದ ಕಾರಣ ಚಿಕ್ಕಬಳ್ಳಾಪುರ ಶಾಸಕ ಕೆ.ಪಿ.ಬಚ್ಚೇಗೌಡರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ವಿ.ಕೃಷ್ಣಪ್ಪ ಉದ್ಘಾಟನೆ ನೆರವೇರಿಸಿದರು.

ಮೇಳದ ಆಹ್ವಾನ ಪತ್ರಿಕೆಯಲ್ಲಿ ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಕೆ.ಎಚ್.ಶಿವಯೋಗಿಸ್ವಾಮಿ, ಶಾಸಕರಾದ ವಿ.ಮುನಿಯಪ್ಪ, ಎನ್.ಎಚ್.ಶಿವಶಂಕರ ರೆಡ್ಡಿ, ಎನ್.ಸಂಪಂಗಿ, ಡಾ. ಎಂ.ಸಿ.ಸುಧಾಕರ, ವಿಧಾನ ಪರಿಷತ್ತಿನ ಸದಸ್ಯರಾದ ನಜೀರ್ ಅಹಮದ್, ವೈ.ಎ.ನಾರಾಯಣಸ್ವಾಮಿ ಹೆಸರನ್ನು ಪ್ರಕಟಿಸಲಾಗಿತ್ತು. ಆದರೆ ಅವರ‌್ಯಾರೂ ಕಾರ್ಯಕ್ರಮದಲ್ಲಿ ಕಾಣಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.