ADVERTISEMENT

ಯಗವಕೋಟೆ ಕೆರೆ ಅಭಿವೃದ್ಧಿಗೆ ₹ 10 ಲಕ್ಷ

‘ನಮ್ಮೂರು ನಮ್ಮ ಕೆರೆ’ ಅಭಿವೃದ್ಧಿ ಸಮಿತಿಯಿಂದ ಕೆರೆ ಪುನಶ್ಚೇತನ ಕಾಮಗಾರಿಗೆ ಚಾಲನೆ, ಜನರ ಸಹಕಾರಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2018, 13:02 IST
Last Updated 10 ಜೂನ್ 2018, 13:02 IST

ಚಿಂತಾಮಣಿ: ಅಂತರ್ಜಲವೃದ್ಧಿಗಾಗಿ ಪೂರ್ವಿಕರು ನಿರ್ಮಿಸಿರುವ ಕೆರೆ, ಕುಂಟೆಗಳನ್ನು ಪುನಶ್ಚೇತನಗೊಳಿಸುವುದು ಮುಖ್ಯ. ಅದಕ್ಕಾಗಿ ಯಗವಕೋಟೆ ಕೆರೆ ಅಭಿವೃದ್ಧಿ ಪಡಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ₹ 10 ಲಕ್ಷ ಅನುದಾನ ನೀಡಲಾಗಿದೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಬಿ. ವಸಂತ್‌ ಹೇಳಿದರು.

ತಾಲ್ಲೂಕಿನ ಯಗವಕೋಟೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗ್ರಾಮ ಪಂಚಾಯಿತಿ ಹಾಗೂ ನಮ್ಮೂರು ನಮ್ಮ ಕೆರೆ ಅಭಿವೃದ್ಧಿ ಸಮಿತಿ ವತಿಯಿಂದ ಏರ್ಪಡಿಸಿದ್ದ ಕೆರೆ ಪುನಶ್ಚೇತನ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಶಾಶ್ವತ ನೀರಾವರಿಗಾಗಿ ದೊಡ್ಡ ಯೋಜನೆಗಳನ್ನು ನಂಬಿ ಕೂಡದೆ ಸುತ್ತಮುತ್ತಲಿನ ಕೆರೆಕುಂಟೆಗಳನ್ನು ಅಭಿವೃದ್ಧಿಪಡಿಸಿದರೆ ನೀರಿನ ಸಂಗ್ರಹ ಆಗುವುದು. ಇದರಿಂದ ಕೃಷಿಗೆ ಮತ್ತು ಕುಡಿಯಲು ನೀರಿನ ಸಮಸ್ಯೆಗೆ ಪರಿಹಾರ ಸಿಗುವುದು ಎಂದರು.

ADVERTISEMENT

ಕೆರೆ, ಕುಂಟೆಗಳಲ್ಲಿ ಅಧಿಕ ಪ್ರಮಾಣದಲ್ಲಿ ನೀರು ಸಂಗ್ರಹವಾಗಿ ದೀರ್ಘ ಕಾಲ ಉಳಿದರೆ ಕೊಳವೆ ಬಾವಿಗಳ ಮರುಪೂರಣಕ್ಕೆ ಸಹಕಾರಿಯಾಗುತ್ತದೆ. ಅಂತರ್ಜಲ ಮಟ್ಟ ಹೆಚ್ಚುವುದು. ಕೆರೆಗಳ ಹೂಳನ್ನು ರೈತರು ಹೊಲಗಳಿಗೆ ಹಾಕಿಕೊಂಡರೆ ಭೂಮಿಯ ಫಲವತ್ತತೆ ಹೆಚ್ಚುತ್ತದೆ ಎಂದರು.

ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಘುನಾಥರೆಡ್ಡಿ ಮಾತನಾಡಿ, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಗ್ರಾಮಗಳ ಅಭಿವೃದ್ಧಿ‌‌ಗಾಗಿ ಹಲವಾರು ಮಾದರಿ ಯೋಜನೆಗಳನ್ನು ರೂಪಿಸಿದ್ದಾರೆ. ಗ್ರಾಮದ ಜನರ ಅನುಕೂಲಕ್ಕಾಗಿ ಕೆರೆಯ ಹೂಳೆತ್ತುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸದ ವಿಷಯ. ಕೆರೆಯ ಫಲವತ್ತಾದ ಮಣ್ಣನ್ನು ರೈತರು ತಮ್ಮ ಜಮೀನುಗಳಿಗೆ ಹಾಕಬೇಕು ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮಣರೆಡ್ಡಿ ಮಾತನಾಡಿ, ತಾಲ್ಲೂಕಿಗೆ ಮಂಜೂರಾಗಿರುವ ಒಂದು ಕೆರೆ ನಮ್ಮೂರಿಗೆ ದೊರೆತಿರುವುದು ಗ್ರಾಮಸ್ಥರ ಭಾಗ್ಯವಾಗಿದೆ . ಹೂಳೆತ್ತುವ ಯೋಜನೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ತಾಲ್ಲುಕು ಪಂಚಾಯಿತಿ ಸದಸ್ಯ ರಾಜಣ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೌಡಮ್ಮ, ಕೆರೆ ಅಭಿವೃದ್ಧಿ ಸಮಿತಿ ಅಧ್ತಕ್ಷ ಸುಮಂತ್‌, ಉಪಾಧ್ಯಕ್ಷ ರವೀಂದ್ರ, ಮುಖಂಡ ಬೈರಾರೆಡ್ಡಿ, ಗ್ರಾಮಾಭಿವೃದ್ಧಿ ಸಮಿತಿಯ ತಾಲ್ಲೂಕು ಯೋಜನಾಧಿಕಾರಿ ಚಂದ್ರಶೇಖರ್‌, ಮೇಲ್ವಿಚಾರಕ ಶ್ರೀನಾಥ್‌, ಕೃಷಿ ಅಧಿಕಾರಿ ಜಿ.ಪಿ.ಮಾರುತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.