ADVERTISEMENT

ರಸ್ತೆ ಅಭಿವೃದ್ಧಿಗೆ ನಿಲ್ಲದ ಮರ ಬಲಿ

​ಪ್ರಜಾವಾಣಿ ವಾರ್ತೆ
Published 22 ಜುಲೈ 2012, 7:45 IST
Last Updated 22 ಜುಲೈ 2012, 7:45 IST

ಚಿಂತಾಮಣಿ: ರಸ್ತೆ ಅಭಿವೃದ್ಧಿಗಾಗಿ ನಗರದ ಬಹುತೇಕ ಮರಗಳು ಹಾಗೂ ಚಿಂತಾಮಣಿ-ಬೆಂಗಳೂರು ರಸ್ತೆಯಲ್ಲಿದ್ದ ನೂರಾರು ವರ್ಷಗಳ ಬೃಹತ್ ಮರಗಳು ಶುಕ್ರವಾರ ಕೊಡಲಿ ಹಾಗೂ ಜೆಸಿಬಿ ಯಂತ್ರಗಳಿಗೆ ಬಲಿಯಾದವು.

ಮರದ ಬುಡಗಳಿಗೆ ಕೊಡಲಿ ಇಡಲು ಹಲವರದು ಎತ್ತಿದ ಕೈ. ಇದರಲ್ಲಿ ನಗರಸಭೆ, ಅರಣ್ಯ ಇಲಾಖೆಯೇ ಯಾವಾಗಲೂ ಮುಂದು. ಗಿಡ ಬೆಳೆಸುವಲ್ಲಿ ನಿರ್ಲಕ್ಷ್ಯತೆ ತೋರುವ ಅರಣ್ಯ ಇಲಾಖೆ ಇರುವ ಮರಗಳನ್ನು ಉಳಿಸಿಕೊಳ್ಳುದರಲ್ಲೂ ಜಡತ್ವವನ್ನೇ ಸಾದರ ಪಡಿಸುತ್ತಿದೆ ಎಂದು ವೃಕ್ಷಪ್ರೇಮಿಗಳು ಅಳಲು ತೋಡಿಕೊಂಡರು.

ಚಿಂತಾಮಣಿ-ಬೆಂಗಳೂರು ರಸ್ತೆಯುದ್ದಕ್ಕೂ ನೂರಾರು ವರ್ಷಗಳಿಂದ ಬೆಳೆದು ನಿಂತಿದ್ದ ಹೆಮ್ಮರಗಳೆಲ್ಲವನ್ನೂ ರಸ್ತೆ ವಿಸ್ತರಣೆಗೆ ಬಲಿ ಕೊಡಲಾಯಿತು. ನಂತರ ನಗರದ ಪ್ರಭಾಕರ್ ಬಡಾವಣೆಯಲ್ಲಿ ಖಾಸಗಿ ವ್ಯಕ್ತಿಗಳು ಆಸಕ್ತಿಯಿಂದ ಬೆಳೆಸಿದ್ದ ಮರಗಳು ನೀರಿನ ಪೈಪ್‌ಗಳಿಗೆ ಅಡ್ಡಿಯಾದ ನೆಪದಲ್ಲಿ ನಿರ್ನಾಮ     ವಾದವು. ಅಷ್ಟೊಂದು ಮರ ಧರೆಗುರುಳಿದರೂ ನಗರ ವಾಸಿಗಳು ರಕ್ಷಣೆಗೆ ಮುಂದಾಗಲಿಲ್ಲ ಎಂದು ಪರಿಸರಾಸಕ್ತರು ಬೇಸರ ವ್ಯಕ್ತಪಡಿಸುತ್ತಾರೆ.

ಒಂದು ಮರ ಕಡಿದರೆ ಮೂರು ಮರ ಬೆಳೆಸಬೇಕು ಎಂದು ಸರ್ಕಾರದ ಆದೇಶವಿದೆ. 2-3 ವರ್ಷಗಳಿಂದ  ಬೆಂಗಳೂರು-ಚಿಂತಾಮಣಿ ರಸ್ತೆಯಲ್ಲಿ ನೂರಾರು ಮರಗಳನ್ನು ಕಡಿದರೂ ಒಂದು ಗಿಡ ಬೆಳೆಸಲಿಲ್ಲ. ಅರಣ್ಯ ಇಲಾಖೆ ಇದಕ್ಕೆ ಉತ್ತರಿಸಬೇಕಿದೆ ಎಂಬುದು ಪರಿಸರವಾದಿಗಳ ಒತ್ತಾಯ.

ಅಭಿವೃದ್ಧಿಗಾಗಿ ರಸ್ತೆ ವಿಸ್ತರಣೆ ಅಗತ್ಯ. ಆದರೆ ಸಾಧ್ಯವಾದಷ್ಟು ಮರಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ಪಟ್ಟಣದ ರಾಜೀವ್ ನಗರ ಮುಖ್ಯ ರಸ್ತೆಯಲ್ಲಿ ರಸ್ತೆ ನಂತರವೂ ಸಾಕಷ್ಟು ಮರಗಳನ್ನು ಉಳಿಸಿಕೊಳ್ಳಬಹುದಾಗಿತ್ತು. ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಸೂಕ್ತ ತಿಳಿವಳಿಕೆ ಕೊರತೆಯಿಂದ ಒಂದು ಕಡೆಯಿಂದ ಎಲ್ಲ ಮರಗಳನ್ನು ಕಡಿದು ಹಾಕಿದ್ದು ಮರೆಯಲಾರದ ಕಹಿ ನೆನಪಾಗಿದೆ ಎಂದು ವೃಕ್ಷಪ್ರೇಮಿ ವರ      ಲಕ್ಷ್ಮಮ್ಮ ಪ್ರತಿಕ್ರಿಯಿಸುತ್ತಾರೆ.

ಪವಮಾನ ಹೋಮ ಇಂದು
ಚಿಂತಾಮಣಿ: ತಾಲ್ಲೂಕು ಬ್ರಾಹ್ಮಣ ಮಹಾಸಭಾ, ವೇದಪಾಠ ವಿದ್ಯಾರ್ಥಿಗಳಿಂದ ಜುಲೈ 22ರ ಭಾನುವಾರ ನಗರದ ಬ್ರಾಹ್ಮಣರ ಬೀದಿಯಲ್ಲಿರುವ ಶಂಕರಮಠದಲ್ಲಿ ಪವಮಾನ ಹೋಮ ಆಯೋಜಿಸಲಾಗಿದೆ ಎಂದು ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.