ADVERTISEMENT

ಶಾರೀರಿಕ ನೆಮ್ಮದಿಗಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 9:20 IST
Last Updated 20 ಜನವರಿ 2011, 9:20 IST

ಚಿಂತಾಮಣಿ: ಸರ್ಕಾರಿ ನೌಕರರು ಉತ್ತಮವಾಗಿ ಕೆಲಸ ನಿರ್ವಹಿಸಲು ಮತ್ತು ಮಾನಸಿಕ ಹಾಗೂ ಶಾರೀರಿಕ ನೆಮ್ಮದಿಗಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅಗತ್ಯ ಎಂದು ತಹಶೀಲ್ದಾರ್ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.ತಾಲ್ಲೂಕು ಸರ್ಕಾರಿ ನೌಕರರ ಸಂಘವು ನಗರದ ಝಾನ್ಸಿ ಕ್ರೀಡಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಈಚೆಗಂತೂ ಸರ್ಕಾರಿ ನೌಕರರು ಹಲವು ರೀತಿಯ ಒತ್ತಡಗಳಲ್ಲಿ ಕೆಲಸ ನಿರ್ವಹಿಸಬೇಕಾಗಿದೆ. ಒತ್ತಡಗಳಿಂದ ಮಾನಸಿಕ ನೆಮ್ಮದಿ ಕೆಡಿಸುವ ಜತೆ ದೈಹಿಕವಾಗಿಯೂ ತೊಂದರೆಗೆ ಒಳಗಾಗಬೇಕಾಗುತ್ತದೆ. ಒತ್ತಡ ತಡೆದುಕೊಂಡು ದೈಹಿಕ ಮತ್ತು ಮಾನಸಿಕವಾಗಿ ಬೆಳವಣಿಗೆಯಾಗಲು ಕ್ರೀಡಾಚಟುವಟಿಕೆಗಳು ಎಲ್ಲ ವಯಸ್ಸಿನವರಿಗೂ ಅತ್ಯಗತ್ಯವಾಗಿವೆ ಎಂದರು.

ಕ್ರೀಡೆಗಳು ವಿದ್ಯಾಭ್ಯಾಸದ ಒಂದು ಅಂಗವಾಗಿವೆ, ನೌಕರರ ವಯಸ್ಸಿಗೆ ಅನುಗುಣವಾದ ಕ್ರೀಡೆಗಳಲ್ಲಿ ಭಾಗವಹಿಸಲು ಅನುಕೂಲವಾಗುವಂತಹ ಅವಕಾಶಗಳನ್ನು ನೌಕರರ ಸಂಘವು ಕಲ್ಪಿಸಿಕೊಡಬೇಕು. ನೌಕರರು ಉತ್ತಮವಾಗಿ ಕೆಲಸ ನಿರ್ವಹಿಸಬೇಕಾದರೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಪ್ರಪುಲ್ಲಿತರಾಗಿರಬೇಕು. ನೌಕರರ ಕ್ರೀಡಾ ಚಟುವಟಿಕೆಗಳಿಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡುವುದಾಗಿ ಭರವಸೆ ನೀಡಿದರು.

ಡಿವೈಎಸ್ಪಿ ಆನಂದ್ ಮಾತನಾಡಿ, ಕ್ರೀಕೂಟಗಳಲ್ಲಿ ಭಾಗವಹಿಸುವುದರಿಂದ  ವಿಚಾರ ವಿನಿಮಯ, ಜ್ಞಾನ, ವಿಷಯ ಸಂಗ್ರಹಣೆಗೂ ಅನುಕೂಲವಾಗುತ್ತದೆ.ಇಂತಹ ಅವಕಾಶ ಕಳೆದುಕೊಳ್ಳದೆ ಪ್ರತಿಯೊಬ್ಬ ನೌಕರರು ಭಾಗವಹಿಸಬೇಕು ಎಂದರು.ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆಂಪಣ್ಣ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಲ್.ಶ್ರೀನಿವಾಸ್ ಮಾತನಾಡಿದರು.

ಸರ್ಕಾರಿ ನೌಕರರ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ನಾರಾಯಣರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.ತಾಲ್ಲೂಕು ಪಂಚಾಯಿತಿ ಇಒ ರಂಗನಾಥಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟರಾಮರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಸಂತರೆಡ್ಡಿ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ನಾಗೇಂದ್ರಬಾಬು, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಕಾಳಪ್ಪ, ಡಾ.ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.