ADVERTISEMENT

ಶಿಡ್ಲಘಟ್ಟದಲ್ಲಿ ಶೀಘ್ರವೇ ಜವಳಿ ಪಾರ್ಕ್

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 10:39 IST
Last Updated 22 ಡಿಸೆಂಬರ್ 2012, 10:39 IST

ಶಿಡ್ಲಘಟ್ಟ: ಕೆಲ ವರ್ಷಗಳ ಹಿಂದೆ ಉದ್ಯೋಗ ಹುಡುಕಿ ಶಿಡ್ಲಘಟ್ಟಕ್ಕೆ ಜನ ಬರುವ ಪರಿಸ್ಥಿತಿ ಇತ್ತು. ಆದರೆ ಈಗ ಕೆಲಸ ಹುಡುಕಿಕೊಂಡು ಬೆಂಗಳೂರು ಇನ್ನಿತರ ನಗರಗಳಿಗೆ ವಲಸೆ ಹೋಗುವ ಸ್ಥಿತಿ ಎದುರಾಗಿದೆ ಎಂದು ಶಾಸಕ ವಿ.ಮುನಿಯಪ್ಪ ಆತಂಕ ವ್ಯಕ್ತಪಡಿಸಿದರು.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಉದ್ದಿಮೆ (ಎಂಎಸ್‌ಎಂಇ), ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಬಹು ಉದ್ದಿಮೆಗಳ ತರಬೇತಿ ಕೇಂದ್ರದ(ಖಾದಿ) ಆಶ್ರಯದಲ್ಲಿ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಈಚೆಗೆ ಆಯೋಜಿಸಿದ್ದ `ಉದ್ದಿಮೆದಾರರ ತರಬೇತಿ ಕಾರ್ಯಕ್ರಮ' ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲೆ ಉತ್ತಮ ಗುಣಮಟ್ಟದ ರೇಷ್ಮೆ ನೂಲು ಉತ್ಪಾದನೆಯಾಗುವ, ಹೆಚ್ಚು ವಹಿವಾಟು ನಡೆಯುವ ಶಿಡ್ಲಘಟ್ಟದ ಬಹುತೇಕ ನೇಕಾರರಿಗೆ ಜವಳಿ ಇಲಾಖೆ ಕ್ರೆಡಿಟ್ ಕಾರ್ಡ್ ಸೌಲಭ್ಯವಿಲ್ಲ ಎಂದರು.

ಪಟ್ಟಣ ಹೊರವಲಯದ ಕೇಶವಪುರ ಸಮೀಪ 83 ಎಕರೆ ಸರ್ಕಾರಿ ಜಮೀನು ಜವಳಿ ಇಲಾಖೆಗೆ ವರ್ಗಾಯಿಸುವ ಕಡತಕ್ಕೆ ಉಪ ಮುಖ್ಯಮಂತ್ರಿಗಳ ಸಹಿಯಾಗಿದ್ದು, ಶೀಘ್ರವೇ ಮುಂದಿನ ಪ್ರಕ್ರಿಯೆ ನೆರವೇರಲಿದೆ. ಸಮೀಪದಲ್ಲೇ ರೇಷ್ಮೆ ಇಲಾಖೆಗೆ ಸೇರಿದ ಸಾಕಷ್ಟು ಜಮೀನು ಖಾಲಿಯಿದ್ದು, ಇಲಾಖೆ ಮುಂದಾದರೆ ಸಂಬಂಧಿಸಿದವರೊಂದಿಗೆ ಮಾತುಕತೆ ನಡೆಸಿ ಆ ಜಮೀನನ್ನು ಕೂಡ ಒಪ್ಪಿಸಲಾಗುವುದು ಎಂದರು.

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಬಹು ಉದ್ದಿಮೆಗಳ ತರಬೇತಿ ಕೇಂದ್ರದ ಕೆಂಪರಾಜು ಮಾತನಾಡಿ, ಉದ್ಯೋಗ ಸೃಷ್ಟಿಸುವ ಹಾಗೂ ಲಾಭದಾಯಕ ಎಲ್ಲಾ ಉದ್ದಿಮೆಗಳ ಆರಂಭಕ್ಕೆ ಅಗತ್ಯವಾದ 25 ರಿಂದ 50 ಲಕ್ಷ ರೂಪಾಯಿ 7 ವರ್ಷಗಳ ಕಾಲಾವಧಿ ಸಾಲ ನೀಡಲಾಗುವುದು' ಎಂದರು.

ಸೋಪ್ ಹಾಗೂ ಸೋಪು ಪೌಡರ್, ಮೇಣದ ಬತ್ತಿ, ಊದು ಬತ್ತಿ, ಚಾಕ್‌ಪೀಸ್ ತಯಾರಿಕೆ ತರಬೇತಿ ಪಡೆಯಲು ಇಚ್ಛಿಸಿದರೆ ಇಲಾಖೆ ತರಬೇತಿದಾರರೇ ಆ ಗ್ರಾಮಕ್ಕೆ ಬಂದು ತರಬೇತಿ ನೀಡುತ್ತಾರೆ. ಉದ್ದಿಮೆ ಆರಂಭಿಸಲು ಸಾಲ ಬಯಸುವವರು ಡಿ. 31ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಅವರು ತಿಳಿಸಿದರು.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಉಪನಿರ್ದೇಶಕ ಸುಧಾಕರ್, ಜಿ.ಪಂ. ಸದಸ್ಯ ಸತೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ.ಮುನಿಯಪ್ಪ ರೇಷ್ಮೆ ಮಂಡಳಿ ವಿಜ್ಞಾನಿ ಡಾ.ಮಹೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.