ADVERTISEMENT

ಸಡಗರದ ತಂಬಿಟ್ಟಿನ ದೀಪೋತ್ಸವ

ಮಳೆ, ಬೆಳೆ ಸಮೃದ್ಧಿಗಾಗಿ ಗ್ರಾಮ ದೇವತೆಗಳಿಗೆ ಪೂಜೆ; ಮಾರೆಮ್ಮ ದೇವಿ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 10:35 IST
Last Updated 6 ಜೂನ್ 2018, 10:35 IST
ಮುತ್ಯಾಲಮ್ಮ ದೇವಾಲಯದ ಮುಖ್ಯ ರಸ್ತೆಯಲ್ಲಿ ತಂಬಿಟ್ಟಿನ ಆರತಿ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಸಾಗಿದರು
ಮುತ್ಯಾಲಮ್ಮ ದೇವಾಲಯದ ಮುಖ್ಯ ರಸ್ತೆಯಲ್ಲಿ ತಂಬಿಟ್ಟಿನ ಆರತಿ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಸಾಗಿದರು   

ಗುಡಿಬಂಡೆ: ಪಟ್ಟಣದ ಅಂಬೇಡ್ಕರ ನಗರದ ಮಾರೆಮ್ಮ ದೇವತೆ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಅಲಂಕೃತ ತಂಬಿಟ್ಟಿನ ದೀಪೋತ್ಸವ ಆಚರಣೆ ಅದ್ದೂರಿಯಾಗಿ ನಡೆಯಿತು.

ಮುಂಗಾರು ಮಳೆ ಆರಂಭಕ್ಕೂ ಮುನ್ನ ಮಳೆ ಬೆಳೆ ಸಮೃದ್ಧಿಯಾಗಲಿ ಎಂದು ಗ್ರಾಮ ದೇವತೆಗಳಿಗೆ ಪೂಜೆ ಸಲ್ಲಿಸುವ ಆಚರಣೆ ಅನಾದಿಕಾಲದಿಂದ ನಡೆದುಕೊಂಡು ಬಂದಿದೆ.

ಜಾತ್ರೆ ಸಂದರ್ಭದಲ್ಲಿ ಪಟ್ಟಣದಲ್ಲಿರುವ ಏಳು ಗ್ರಾಮದೇವತೆಗಳಾದ ಸಪ್ಲಮ್ಮ, ಮಾರೆಮ್ಮ, ಮುತ್ಯಾಲಮ್ಮ, ಕೊಲ್ಲಾಪುರ ಮಹಾಲಕ್ಷ್ಮೀ, ಸತ್ಯಮ್ಮ, ಗಂಗಮ್ಮ, ಹಿರಿಯ ದೇವತೆಯಾದ ಏಡುಗರ ಅಕ್ಕಮ್ಮ ದೇವತೆಯ ಹೆಸರಿನಲ್ಲಿ ಪ್ರತಿ ವರ್ಷ ವೈಶಾಖ ಮಾಸದಲ್ಲಿ ಎಲ್ಲಾ ಜನಾಂಗದವರು ಸೇರಿ ಜಾತ್ರೆ ಹಾಗೂ ಉಟ್ಲು ಪರಷೆ ನಡೆಸುವುದು ಪದ್ದತಿ.

ADVERTISEMENT

ಆದರೆ ಒಂದು ದಶಕದ ಹಿಂದೆ ಉಟ್ಲು ಪರಿಷೆ ಸಂದರ್ಭದಲ್ಲಿ ಪರಿಶಿಷ್ಟ ವರ್ಗ ಹಾಗೂ ಪರಿಶಿಷ್ಟ ಜಾತಿ ಮುಖಂಡರ ಗಲಾಟೆ ನಡೆದು ಜಾತ್ರೆಗಳ ವಿಚಾರದಲ್ಲಿ ಸಹ ನಂತರದಲ್ಲಿ ಅದು ಕಾಣಿಸಿಕೊಂಡಿತ್ತು.

ಪರಿಶಿಷ್ಟ ವರ್ಗದವರು ವೈಶಾಖ ಮಾಸದಲ್ಲಿ ಏಡುಗರ ಅಕ್ಕಮ್ಮ ದೇವಿಗೆ ಜಾತ್ರೆ ಮಾಡಿದರೆ, ಪರಿಶಿಷ್ಟ ಜಾತಿಯವರು ಒಂದು ತಿಂಗಳ ಅಂತರದಲ್ಲಿ ಮಾರೇಮ್ಮದೇವಿಗೆ ದೀಪೋತ್ಸವನ್ನು ಆಚರಣೆ ಮಾಡುವ ಪದ್ದತಿ ರೂಢಿಸಿಕೊಂಡು ಬಂದರು.

ಮಂಗಳವಾರ ಸಂಜೆ ಸುಮಾರು ನೂರಾರು ಸಂಖ್ಯೆ ಮಹಿಳೆಯರು ಮುಂಜಾನೆಯಿಂದಲೇ ಮನೆ ಶುಭ್ರಗೊಳಿಸಿ, ಉಪವಾಸವಿದ್ದು ಹಿಂದಿನ ದಿನ ಅಕ್ಕಿ ನೆನೆಸಿ ತಂಬಿಟ್ಟು ಮಾಡಿ ಬೆಲ್ಲದ ಪಾಕದಲ್ಲಿ ಹಸಿಟ್ಟು ಸೇರಿಸಿ ಅದರಲ್ಲಿ ದೀಪಗಳನ್ನು ಮಾಡಿ ವಿವಿಧ ಬಗೆಯ ಹೂವುಗಳಿಂದ ಅಲಂಕಾರ ಮಾಡಿ ತಲೆಯ ಮೇಲೆ ಹೊತ್ತು ವಿವಿಧ ದೇವತೆಗಳಿಗೆ ಬೆಳಗುವ ಮೂಲಕ ದೀಪೋತ್ಸವ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.