ADVERTISEMENT

ಹನುಮ ಜಯಂತಿ: ಕಡಲೇ ಕಾಯಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2017, 8:45 IST
Last Updated 2 ಡಿಸೆಂಬರ್ 2017, 8:45 IST

ಚಿಂತಾಮಣಿ: ನಗರ ಹಾಗೂ ತಾಲ್ಲೂಕಿನ ವಿವಿಧೆಡೆಗಳಲ್ಲಿ ಶುಕ್ರವಾರ ಹನುಮಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ನಗರದ ಹೊರವಲಯದ ಬೂರಗಮಾಕಲಹಳ್ಳಿಯ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಹೋಮ, ಹವನ ಸಂಭ್ರಮದಿಂದ ನೆರವೇರಿದವು. ಸ್ವಾಮಿಗೆ ಮಾಡಿದ್ದ ಸುವರ್ಣ ಅಲಂಕಾರ ಭಕ್ತರ ಗಮನಸೆಳೆಯಿತು. ವರದಾದ್ರಿ ಬೆಟ್ಟದ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಅಲಂಕಾರ ಹಾಗೂ ಕಡಲೆಕಾಯಿ ಜಾತ್ರೆ ನಡೆಯಿತು. ದೇವಾಲಯ ಹಾಗೂ ಬೆಟ್ಟ ವಿದ್ಯುತ್‌ ದೀಪಾಲಂಕಾರದಿಂದ ಜಗಮಗಿಸುತ್ತಿತ್ತು.

ಸಾವಿರಾರು ಭಕ್ತರು ಬೆಳಿಗ್ಗೆಯಿಂದಲೇ ಬೆಟ್ಟಕ್ಕೆ ಸಾಲು ಸಾಲಾಗಿ ಬರುತ್ತಿದ್ದರು. ವೀರಾಂಜನೇಯಸ್ವಾಮಿಗೆ ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸುತ್ತಿದ್ದರು. ಉಪ್ಪರಪೇಟೆ ಪಂಚಾಯಿತಿಯ ಅಂಬಾಜಿದುರ್ಗ ಬೆಟ್ಟದಲ್ಲಿ ನೆಲೆಸಿರುವ ಅಭಯವೀರಾಂಜನೇಯಸ್ವಾಮಿ ದೇವಾಲಯದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಸೋಮವಾರ ಬೆಳಿಗ್ಗೆ 6ರಿಂದ ರಾತ್ರಿ 8ರವರೆಗೆ ವಿಶೇಷ ಪೂಜೆ, ಅಲಂಕಾರ,  ಅಭಿಷೇಕ ನೆರವೇರಿದವು. ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ಬಂದ ಭಕ್ತರೆಲ್ಲರಿಗೂ
ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಉಪ್ಪರಪೇಟೆಯಿಂದ ದೇವಾಲಯಕ್ಕೆ ಹೋಗಿಬರಲು ಉಚಿತ ವಾಹನ ವ್ಯವಸ್ಥೆ ಮಾಡಲಾಗಿತ್ತು. ನಗರದ ನಾರಸಿಂಹಪೇಟೆಯಲ್ಲಿರುವ ವೀರಾಂಜನೇಯ ದೇವಾಲಯ, ಸುಭಾಷ್‌ರಸ್ತೆಯ ವೀರಾಂಜನೇಯಸ್ವಾಮಿ, ತಾಲ್ಲೂಕಿನ ಬೂರಗಮಾಕಲಹಳ್ಳಿ, ಕುರುಟಹಳ್ಳಿ, ಕನಂಪಲ್ಲಿ ದೇವಾಲಯಗಳಲ್ಲೂ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.