ADVERTISEMENT

‘ಕಿಷ್ಕಿಂಧೆ’ಯಲ್ಲಿ ಹೂವು ಮಾರಾಟ

​ಪ್ರಜಾವಾಣಿ ವಾರ್ತೆ
Published 24 ಮೇ 2014, 11:07 IST
Last Updated 24 ಮೇ 2014, 11:07 IST
ಗೌರಿಬಿದನೂರು ಪಟ್ಟಣದ ಬಸ್ ನಿಲ್ದಾಣದ ಸಮೀಪದ ಪುರಸಭೆ ಕಟ್ಟಡದ ಮೇಲೆ ಹೂವಿನ ವ್ಯಾಪಾರದಲ್ಲಿ ತೊಡಗಿರುವ ವ್ಯಾಪಾರಿಗಳು.
ಗೌರಿಬಿದನೂರು ಪಟ್ಟಣದ ಬಸ್ ನಿಲ್ದಾಣದ ಸಮೀಪದ ಪುರಸಭೆ ಕಟ್ಟಡದ ಮೇಲೆ ಹೂವಿನ ವ್ಯಾಪಾರದಲ್ಲಿ ತೊಡಗಿರುವ ವ್ಯಾಪಾರಿಗಳು.   

ಗೌರಿಬಿದನೂರು: ತಾಲ್ಲೂಕಿನ ಕೋಟಾ­ಲ­ದಿನ್ನೆ, ಮಂಚೇನಹಳ್ಳಿ, ತೊಂಡೇಭಾವಿ ಹೋಬಳಿಯಲ್ಲಿ ಬೆಳೆಯುವ ಹೂವುಗಳ ಮಾರಾಟಕ್ಕೆ ಪಟ್ಟಣದಲ್ಲಿ ಸೂಕ್ತ ಮಾರುಕಟ್ಟೆಯೇ ಇಲ್ಲ. ಇದರಿಂದ ಕಟ್ಟಡ ಮೇಲೆ ನಡೆಯುವ ಹೂವಿನ ಮಾರಾಟಕ್ಕೆ ಹೂವನ್ನು ಕೊಂಡೊಯ್ಯುವುದೇ ದೊಡ್ಡ ಸಮಸ್ಯೆ­ಯಾಗಿದೆ. ‘ಕಿಷ್ಕಿಂಧೆ’ಯಂತಹ ಸಂದಿ­ಯಲ್ಲಿ ಹೂವಿನ ಲಾಟುಗಳನ್ನು ತಂದಿಳಿ­ಸು­ವಷ್ಟರಲ್ಲಿ  ರೈತರು ಹೈರಾಣಾಗುತ್ತಿ­ದ್ದಾರೆ.
ಕನಕಾಂಬರ, ಚೆಂಡು ಹೂವು, ಸುಗಂಧರಾಜ, ಕಾಕಡ, ಸೇವಂತಿಗೆ ಉತ್ತಮ ಬೇಡಿಕೆ ಇದ್ದರೂ ಮಾರುಕಟ್ಟೆ ಇಲ್ಲದೇ ಸಮಸ್ಯೆ ಎದುರಿಸುವಂತಾಗಿದೆ.

ಕಳೆದ ಹನ್ನೊಂದು ವರ್ಷಗಳಿಂದ ಬಸ್‌ ನಿಲ್ದಾಣದ ಪಕ್ಕದಲ್ಲಿರುವ ಪುರಸಭೆ ಅಂಗಡಿ ಮಳಿಗೆ ಮೇಲೆ 26 ಹೂವಿನ ಅಂಗಡಿಗಳಿವೆ. ಪ್ರತಿ ಅಂಗಡಿಯಿಂದ ಇಂತಿಷ್ಟು ಎಂದು ಕರ ವಸೂಲಿ ಮಾಡುವ ಪುರಸಭೆ ವ್ಯಾಪಾರಸ್ಥರಿಗೆ ಮಾತ್ರ ಸೂಕ್ತ ಜಾಗ ನಿಗದಿ ಮಾಡಲು ಮುಂದಾಗುತ್ತಿಲ್ಲ ಎಂಬುದು ವ್ಯಾಪಾರಸ್ಥರ  ಆರೋಪ.

‘ಹಬ್ಬಗಳಲ್ಲಿ ಹೆಚ್ಚಿನ ಜನರು ವ್ಯಾಪಾರಕ್ಕೆ ಬರುತ್ತಾರೆ. ಹೂವು ಖರೀದಿಸಲು ಹತ್ತುವುದು ಇಳಿಯುವುದೇ ದೊಡ್ಡ ಸಾಹಸ ಎನ್ನುವಂತಹ ಸ್ಥಿತಿ ಇಲ್ಲಿದೆ. ಒಬ್ಬರು ಹತ್ತುವವರೆಗೆ ಇನ್ನೊಬ್ಬರು ಕೆಳಗೆ ಇಳಿಯುವಂತಿಲ್ಲ ಇವರಿಂದ ಗ್ರಾಹಕರು ಕಿರಿಕಿರಿ ಅನುಭವಿಸುತ್ತಿದ್ದಾರೆ ಎನ್ನುತ್ತಾರೆ ತಿಪ್ಪಯ್ಯ.

ಹೂವು ಮಾರಾಟಕ್ಕೆ ಪಟ್ಟಣ ಸುತ್ತಲಿನಿಂದ ಮಹಿಳೆಯರು ಹೆಚ್ಚಾಗಿ ಬರುತ್ತಾರೆ. ಖರೀದಿಗಾಗಿ ಬೆಂಗಳೂರು, ಹಿಂದೂಪುರ, ಕದಿರಿ, ಪೆನಗೊಂಡ, ಅನಂತಪುರ, ಮಧುಗಿರಿಯಿಂದಲೂ ವ್ಯಾಪಾರಸ್ಥರು ಬರುತ್ತಾರೆ. ಉತ್ತಮ ಹೂವಿನ ಮಾರುಕಟ್ಟೆ ಮಾಡುವ ಎಲ್ಲ ಅವಕಾಶವಿದ್ದರೂ ಪುರಸಭೆ ಕೈಚೆಲ್ಲಿ ಕುಳಿತಿದೆ.  ವ್ಯಾಪಾರ ಮಾಡಲು ಹೊಸದಾಗಿ ನಿರ್ಮಿಸಿರುವ ಕಟ್ಟಡವನ್ನೂ ನೀಡುತ್ತಿಲ್ಲ ಎನ್ನುವುದು ವ್ಯಾಪಾರಸ್ಥರ ದೂರು.

‘ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಗೊಂದಲದಿಂದಾಗಿ ಇಷ್ಟು ದಿನ ಹೂವಿನ ಅಂಗಡಿಗಳನ್ನು ವಿತರಿಸಲು ಸಾಧ್ಯವಾಗಿಲ್ಲ. ಕಟ್ಟಡದ ಸಣ್ಣಪುಟ್ಟ ಕೆಲಸಗಳನ್ನು ಪೂರ್ಣಗೊಳಿಸಬೇಕು. ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಂಡು ಮಳಿಗೆಗಳ ವಿತರಣೆ ಮಾಡು­ವುದಾಗಿ ಪುರಸಭೆ ಅಧ್ಯಕ್ಷ ಎಂ.ನರಸಿಂಹಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕಟ್ಟಡ ಮಳಿಗೆ ಉದ್ಘಾಟನೆಗೊಂಡ ವರ್ಷವಾದರೂ ಪ್ರಯೋಜನ­ವಾಗುತ್ತಿಲ್ಲ, ಈಗ ವ್ಯಾಪಾರ ಮಾಡುತ್ತಿರುವ ಕಟ್ಟಡದ ಮೇಲೆ ನೆರಳಿಗಾಗಿ ಕಟ್ಟಿರುವ ಟಾರ್ಪಲಿನ್‌ ಗಳು ಗಾಳಿಗೆ ಹಾರಿ ಹೋಗುತ್ತವೆ. ಮಳೆ ಬಂದರೆ ಅಲ್ಲಿಗೆ ಹೂವು ಕೊಳ್ಳಲು ಯಾರು ಬರುವುದಿಲ್ಲ. ಪುರಸಭೆ ಅಧಿಕಾರಿಗಳು ಅಂಗಡಿಗಳನ್ನು ವಿತರಿಸಲು ಕ್ರಮ ಕೈಗೊಳ್ಳುವಂತೆ ಹೂವು ಮಾರಾಟಗಾರರಾದ ಕೃಷ್ಣ, ರಾಮಚಂದ್ರ, ಶ್ರೀನಿವಾಸ್ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.