ಚಿಂತಾಮಣಿ: ಬಿಸಿಯೂಟ, ಕ್ಷೀರಭಾಗ್ಯ ಯೋಜನೆಗಳ ಜವಾಬ್ದಾರಿಯಿಂದ ಶಿಕ್ಷಕರಿಗೆ ಬಿಡುಗಡೆ ನೀಡಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಸರ್ಕಾರ ಮುಂದಾಗಬೇಕು ಎಂದು ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಸಲಹೆ ನೀಡಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಗುರುವಾರ ನಗರದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಶಿಕ್ಷಕರಿಗೆ ಅನಗತ್ಯ ಹೊರೆ ನೀಡಿರುವುದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ದರೆಯಾಗುತ್ತದೆ. ಪಾಠಕ್ಕೂ ಊಟಕ್ಕೂ ಸಂಬಂಧವಿರಬಾರದು ಎಂದು ಅಭಿಪ್ರಾಯಪಟ್ಟರು.
ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ತಮ್ಮ ಕರ್ತವ್ಯದಲ್ಲಿ ವಂಚನೆ, ದ್ರೋಹ ಮಾಡಬಾರದು ಎಂದು ಹೇಳಿದರು. ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ನಗರದಲ್ಲಿ ನಿಮಾರ್ಣವಾಗಲಿರುವ ಸರ್ಕಾರಿ ನೌಕರರ ಭವನಕ್ಕೆ ಸಂಸದರ ಅನುದಾನದಿಂದ ರೂ. 10 ಲಕ್ಷ ನೀಡುವುದಾಗಿ ಭರವಸೆ ನೀಡಿದರು.
ಶಿಡ್ಲಘಟ್ಟ ಶಾಸಕ ಎಂ.ರಾಜಣ್ಣ ಮಾತನಾಡಿ, ಡಾ.ಎಸ್.ರಾಧಾಕೃಷ್ಣನ್ ಅವರ ತತ್ವ, ನೀತಿ, ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಪ್ರಾಥಮಿಕ ಹಂತದಿಂದಲೇ ಮಕ್ಕಳಲ್ಲಿ ಜವಾಬ್ದಾರಿ, ಪ್ರೀತಿ, ವಾತ್ಸಲ್ಯ, ಸಹೋದರತ್ವ ಬೆಳೆಸಬೇಕು ಎಂದರು. ಸರ್ಕಾರಿ ನೌಕರರ ಭವನಕ್ಕೆ ಶಾಸಕರ ಅನುದಾನದಿಂದ ರೂ. 5 ಲಕ್ಷ ನೀಡುವುದಾಗಿ ಭರವಸೆ ನೀಡಿದರು.
ಶಾಸಕ ಎಂ.ಕೃಷ್ಣಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್.ಎನ್.ಚಿನ್ನಪ್ಪ ಡಾ.ಎಸ್.ರಾಧಾಕೃಷ್ಣನ್ ಭಾವಚಿತ್ರ ಅನಾವರಣ ಮಾಡಿದರು. ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಡಿ.ಎಸ್.ವೀರಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕೆ.ವಿ.ಮೀನಾ, ಜಿ.ಪಂ. ಸದಸ್ಯರಾದ ಎನ್.ವಿ.ಶ್ರೀರಾಮರೆಡ್ಡಿ, ವೀಣಾ ಗಂಗುಲಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಚೌಡರೆಡ್ಡಿ,
ನಗರಸಭೆ ಸದಸ್ಯ ಪ್ರಕಾಶ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜನಾರ್ಧನರೆಡ್ಡಿ, ತಹಶೀಲ್ದಾರ್ ಎಂ.ಎನ್.ಮಂಜುನಾಥ್, ತಾ.ಪಂ. ಕಾರ್ಯ ನಿರ್ವಣಾಧಿಕಾರಿ ಬಿ.ಸಿ.ವಸಂತಕುಮಾರ್, ನಿವೃತ್ತ ಡಿಡಿಪಿಐ ಸಿ.ಬಿ.ಹನುಮಂತಪ್ಪ, ಮುಖಂಡರಾದ ಗ್ಯಾಸ್ ಶ್ರೀನಿವಾಸ್, ರಾಯಲ್ ರಾಮಕೃಷ್ಣಾರೆಡ್ಡಿ, ವಸಂತರೆಡ್ಡಿ, ಕೆ.ವಿ.ಚೌಡಪ್ಪ, ಕೆ.ಆರ್.ಗೋಪಾಲರೆಡ್ಡಿ, ಆರ್.ವೆಂಕಟರಾಮರೆಡ್ಡಿ, ಜಗದೀಶ್ವರೆಡ್ಡಿ ಮತ್ತಿತರರು ಭಾಗವಹಿಸಿದ್ದರು.ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ.ರಂಗಯ್ಯ ಸ್ವಾಗತಿಸಿದರು. ಶಿವಾ ರೆಡ್ಡಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.