ಗೌರಿಬಿದನೂರು: ನಗರದ ನ್ಯಾಯಾಲಯದ ಆವರಣದಲ್ಲಿ ಕಾನೂನು ಸೇವಾ ಪ್ರಾಧಿಕಾರದಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಲೋಕ ಅದಾಲತ್ನಲ್ಲಿ ವಿಚ್ಛೇದನಕ್ಕಾಗಿ ಬಂದಿದ್ದ ಮೂವರು ದಂಪತಿಗಳು ರಾಜೀ ಸಂಧಾನದ ಮೂಲಕ ನ್ಯಾಯಾಧೀಶರ ಸಮ್ಮುಖದಲ್ಲಿ ಒಂದಾದರು.
ಕಳೆದ ಮೂರು ವರ್ಷಗಳ ಹಿಂದೆ ಮೂವರು ದಂಪತಿಗಳು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ್ದ ಜಿಲ್ಲಾ ಮಟ್ಟದ ನ್ಯಾಯಾಧೀಶರಾದ ಲತಾಕುಮಾರಿ ಆ ಜೋಡಿಗಳನ್ನು ಕರೆಸಿ, ಸ್ಥಳೀಯ ನ್ಯಾಯಾಧೀಶರು, ವಕೀಲರ ಸಹಕಾರದಿಂದ ರಾಜೀ ಸಂಧಾನ ಮಾಡಿದರು.
ಹಿರಿಯ ಶ್ರೇಣಿ ನ್ಯಾಯಾಧೀಶರಾದ ಗೀತಾ ಕುಂಬಾರ್ ಮಾತನಾಡಿ, ‘ಕುಟುಂಬದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಬರುವುದು ಸಹಜ. ಅದನ್ನೇ ದೊಡ್ಡದು ಮಾಡಿಕೊಂಡು ದಂಪತಿಗಳು ನ್ಯಾಯಾಲಯದ ಮೆಟ್ಟಿಲೇರುವುದು ಸಾಮಾನ್ಯವೆಂಬಂತಾಗಿದೆ. ಇಂತಹ ಸಮಸ್ಯೆಗಳನ್ನು ಹಿರಿಯ ಸಮ್ಮುಖದಲ್ಲಿ ಇತ್ಯರ್ಥ ಮಾಡಿಕೊಂಡರೆ ದೀರ್ಘ ಕಾಲ, ಸುಂದರ ಸಂಸಾರ ನಡೆಸಬಹುದು’ ಎಂದು ಕಿವಿಮಾತು ಹೇಳಿದರು.
ಈ ಬಾರಿಯ ಅದಾಲತ್ನಲ್ಲಿ 1789 ಪ್ರಕರಣಗಳು ಇತ್ಯರ್ಥಗೊಂಡಿವೆ. ಇದರಲ್ಲಿ ಬ್ಯಾಂಕ್, ಸಿವಿಲ್ ಚೆಕ್ ಪ್ರಕರಣಗಳು, ಕುಟುಂಬ ಸೇರಿದಂತೆ ಇನ್ನಿತರ ಪ್ರಕರಣಗಳು ಇದ್ದವು. ಲೋಕ ಅದಾಲತ್ನಲ್ಲಿ 16.91 ಲಕ್ಷ ಸಂಗ್ರಹವಾಗಿದೆ ಎಂದು ತಿಳಿಸಿದರು.
ಈ ಲೋಕ ಅದಾಲತ್ನಲ್ಲಿ ಪ್ರಧಾನ ನ್ಯಾಯಾಧೀಶ ಪಿ ಎಂ ಸಚಿನ್, ವಕೀಲರ ಸಂಘದ ಅಧ್ಯಕ್ಷ ದಿನೇಶ್, ಲಿಂಗಪ್ಪ, ಹಿರಿಯ ವಕೀಲ ಗೋಪಾಲ್, ಸಂಧಾನಕಾರರಾಗಿ ಹರೀಶ್, ಭಾರತಿ, ವಕೀಲ ಶ್ಯಾಮ್, ಹರ್ಷವರ್ಧನ್, ಎನ್,ಧನುಂಜಯ್, ಜಗದೀಶ್, ಹಿರಿಯ ವಕೀಲರು ಮತ್ತು ಸಿಬ್ಬಂದಿ ಶ್ರೀನಾಥ್, ಸಂಧ್ಯಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.