ADVERTISEMENT

ಚಿಂತಾಮಣಿ| ಹೊಂಡಕ್ಕೆ ಬಿದ್ದ ಮಗನ ರಕ್ಷಿಸಲು ಹೋಗಿ ತಂದೆ, ತಾತ ಸಾವು

​ಪ್ರಜಾವಾಣಿ ವಾರ್ತೆ
Published 29 ಜೂನ್ 2023, 18:43 IST
Last Updated 29 ಜೂನ್ 2023, 18:43 IST
   

ಚಿಂತಾಮಣಿ: ತಾಲ್ಲೂಕಿನ ಮುಂಗಾನಹಳ್ಳಿ ಹೋಬಳಿಯ ಅಂಕಾಲಮಡುಗು ಗ್ರಾಮದಲ್ಲಿ ಗುರುವಾರ ಕಾಲುಜಾರಿ ಕೃಷಿ ಹೊಂಡಕ್ಕೆ ಬಿದ್ದ ಮಗನ ರಕ್ಷಣೆಗೆ ಇಳಿದ ಆತನ ತಂದೆ ಮತ್ತು ತಾತ ಹೊಂಡದ ಪಾಚಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.

ಕೃಷಿ ಹೊಂಡಕ್ಕೆ ಬಿದ್ದ ಬಾಲಕ ಸಂಜಯ್‌ನನ್ನು ಅಕ್ಕಪಕ್ಕದ ಜಮೀನಿನಲ್ಲಿದ್ದವರು ರಕ್ಷಿಸಿದ್ದು, ಆತನ ತಾತ ವೆಂಕಟರಾಯಪ್ಪ(70) ಮತ್ತು ತಂದೆ ಚೌಡರೆಡ್ಡಿ(50)  ಮೃತ‍ಪಟ್ಟಿದ್ದಾರೆ.  

ತಾತ, ತಂದೆ ಜೊತೆ ಬಾಲಕ ತೋಟಕ್ಕೆ ಹೋಗಿದ್ದ. ಕೃಷಿ ಹೊಂಡದಲ್ಲಿ ನೀರು ಕುಡಿಯಲು ಹೋಗಿದ್ದ ಬಾಲಕ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ. ಅವನ ರಕ್ಷಣೆಗಾಗಿ ಇಳಿದ ತಾತ ರಕ್ಷಣೆ ಮಾಡಲಾಗದೆ ಕೂಗಿಕೊಂಡಿದ್ದಾರೆ. ಸ್ವಲ್ಪ ದೂರದಲ್ಲಿದ್ದ ಆತನ ತಂದೆ ಕೂಡ ಕೃಷಿ ಹೊಂಡಕ್ಕೆ ಇಳಿದಿದ್ದಾರೆ.

ಆದರೆ, ಇಬ್ಬರೂ ಪಾಚಿಯಲ್ಲಿ ಸಿಲುಕಿದ ಕಾರಣ ರಕ್ಷಣೆಗಾಗಿ ಜೋರಾಗಿ ಕೂಗಿಕೊಂಡಿದ್ದಾರೆ. ಅವರ ಕೂಗು ಕೇಳಿ ಪಕ್ಕದ ಜಮೀನಿನಲ್ಲಿದ್ದ ಪೆದ್ದ ಚೌಡರೆಡ್ಡಿ ಹಾಗೂ ಸುದೀಪ್ ಸ್ಥಳಕ್ಕೆ ಧಾವಿಸಿ ಹೊಂಡಕ್ಕೆ ಇಳಿದಿದ್ದಾರೆ. ಆದರೆ, ಅವರು ಕೂಡ ಪಾಚಿಯಲ್ಲಿ ಸಿಲುಕಿಕೊಂಡು ಹೊರ ಬರಲಾಗದೆ ಒದ್ದಾಡುತ್ತಿದ್ದರು.

ADVERTISEMENT

ಆ ವೇಳೆಗೆ ಅಲ್ಲಿಗೆ ಬಂದ ಪ್ರಮೀಳಮ್ಮ ಎಂಬುವರು ತಮ್ಮ ಸೀರೆ ಬಿಚ್ಚಿ ಕೃಷಿ ಹೊಂಡಕ್ಕೆ ಎಸೆದಿದ್ದಾರೆ. ಬಾಲಕನನ್ನು ಎತ್ತಿಕೊಂಡು ಇಬ್ಬರೂ ದಡಕ್ಕೆ ಬಂದಿದ್ದಾರೆ.  ಅಸ್ವಸ್ಥಗೊಂಡಿರುವ ಬಾಲಕನನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.