ADVERTISEMENT

5ನೇ ಬಾರಿ ಶಾಸಕ ಸ್ಥಾನಕ್ಕೆ ಶಿವಶಂಕರರೆಡ್ಡಿ ನಾಮಪತ್ರ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 6:43 IST
Last Updated 21 ಏಪ್ರಿಲ್ 2018, 6:43 IST

ಗೌರಿಬಿದನೂರು: ಐದನೇ ಬಾರಿಗೆ ಶಾಸಕರಾಗುವ ಉದ್ದೇಶದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎನ್.ಎಚ್. ಶಿವಶಂಕರರೆಡ್ಡಿ ಶುಕ್ರವಾರ ಉಮೇದುವಾರಿಕೆಗೆ ಅರ್ಜಿ ಸಲ್ಲಿಸಿದರು.

ಬೆಳಿಗ್ಗೆ ತಮ್ಮ ತನ್ನ ಆಪ್ತ ಕಾರ್ಯಕರ್ತರೊಂದಿಗೆ ಪಟ್ಟಣದ ದರ್ಗಾಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ನಂತರ ನದಿ ದಡ ಆಂಜನೇಯ ಸ್ವಾಮಿ, ಶನಿಮಹಾತ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.

ತೆಂಗಿನ ಗರಿಗಳ ಹೊದಿಕೆ ಹೊಂದಿದ್ದ ತೆರೆದ ವಾಹನದಲ್ಲಿ ಕಾರ್ಯಕರ್ತರೊಂದಿಗೆ ಮೆರವಣಿಗೆ ಯಲ್ಲಿ ತಾಲ್ಲೂಕು ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿದರು. ಶಾಸಕ ಶಿವಶಂಕರರೆಡ್ಡಿ ಜೊತೆಗೆ ಎಚ್.ವಿ. ಮಂಜುನಾಥ್, ಕೆ.ಎನ್. ಕೇಶವರೆಡ್ಡಿ, ಇಬ್ನಿ ಹಸನ್, ಅಶ್ವತ್ಥನಾರಾಯಣಗೌಡ ನಾಮಪತ್ರಕ್ಕೆ ಅರ್ಜಿ ಸಲ್ಲಿಸಿದರು.

ADVERTISEMENT

ನಂತರ ಮಾತನಾಡಿದ ಶಿವಶಂಕ ರರೆಡ್ಡಿ, 'ತಾಲ್ಲೂಕಿನಲ್ಲಿ ಎರಡು ದಶಕಗಳಿಂದ ಜನರ ನಡುವೆ ಅವಿನಾ ಭಾವ ಸಂಬಂಧ ಬೆಳೆಸಿಕೊಂಡಿ ದ್ದೇನೆ. ತಾಲ್ಲೂಕಿನಲ್ಲಿ ನನಗೆ ವಿರೋಧಿ ಬಣಗಳಿಲ್ಲ. ತಾಲ್ಲೂಕಿನಾದ್ಯಂತ ಮಾಡಿರುವ ಜನಪರ ಅಭಿವೃದ್ದಿ ಕಾರ್ಯಗಳೇ ಶ್ರೀರಕ್ಷೆ ಆಗಲಿವೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜನಸಾಮಾನ್ಯರು ಒಂದಲ್ಲಾ ಒಂದು ಸಮಸ್ಯೆಗೆ ಸಿಲುಕುತ್ತಿದ್ದಾರೆ. ಅವರ ಸಂಕಷ್ಟ ಪರಿ ಹಾರಕ್ಕೆ, ನೆಮ್ಮದಿಯ ವಾತಾವರಣ ನಿರ್ಮಾಣಕ್ಕೆ ಜಾತ್ಯತೀತ ಪಕ್ಷ ಮತ್ತು ವ್ಯಕ್ತಿಗಳ ಆಯ್ಕೆ ಅಗತ್ಯವಾಗಿದೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಗೆಲ್ಲಿಸಲು ಜನರು ಉತ್ಸುಕರಾಗಿದ್ದಾರೆ’ ಎಂದರು.

ಲಘು ಲಾಠಿ ಪ್ರಹಾರ

ನಾಮಪತ್ರ ಸಲ್ಲಿಸಲು ತೆರೆದ ವಾಹನವನ್ನು ಇಳಿದು ಶಿವಶಂಕರರೆಡ್ಡಿ ಹಾಗೂ ಇನ್ನಿತರ ನಾಯಕರು ತಾಲ್ಲೂಕು ಕಚೇರಿಯತ್ತ ಹೊರಟರು. ಆಗ ಅಭಿಮಾನಿಗಳು ಅವರೊಂದಿಗೆ ಮನ್ನುಗ್ಗಲು ಮುಂದಾದರು. ಜನರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಸಂಸದ ಮೊಯಿಲಿಗೆ ಸಿಗದ ಪ್ರವೇಶ

ಗೌರಿಬಿದನೂರು ವಿಧಾನಸಭಾ ಕ್ಷೇತ್ರದಿಂದ ಶಿವಶಂಕರರೆಡ್ಡಿ ಅವರು ಶುಕ್ರವಾರ ನಾಮಪತ್ರ ಸಲ್ಲಿಸುತ್ತಾರೆ ಎಂಬುದನ್ನು ತಿಳಿದು ಸಂಸದ ಎಂ. ವೀರಪ್ಪಮೊಯಿಲಿ ಒಂದು ತಾಸು ಮುಂಚೆ ತಾಲ್ಲೂಕು ಕಚೇರಿಯ ಬಳಿ ಬಂದಿದ್ದರು. ಆದರೆ ಪೊಲೀಸ್ ಸಿಬ್ಬಂದಿ ಕಚೇರಿ ಒಳಗೆ ಹೋಗಲು ಅವಕಾಶ ನೀಡಲಿಲ್ಲ. ಇದರಿಂದಾಗಿ ಕಚೇರಿ ಮುಂಭಾಗದ ಇಸ್ತೂರಿ ಅವರ ಅಂಗಡಿಯಲ್ಲಿ ಕುಳಿದರು. ನಂತರ ಕಾಂಗ್ರೆಸ್‌ ಮುಖಂಡ ಬಿ.ಆರ್. ಶ್ರೀನಿವಾಸಮೂರ್ತಿ ಹಾಗೂ ಇಸ್ತೂರಿ ಸಂಪಂಗಿರಾಮ್ ಅವರೊಂದಿಗೆ ವಾಪಸ್‌ ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.