ಚಿಕ್ಕಬಳ್ಳಾಪುರ: ಪ್ರಕರಣವೊಂದರ ವಿಚಾರಣೆಗೆ ಹಾಜರಾಗದ ನಗರಸಭೆ ಆಯುಕ್ತ ಉಮಾಕಾಂತ್ ಅವರಿಗೆ ನಗರದ ಜೆಎಂಎಫ್ಸಿ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿ ಮಾಡಿದೆ.
ಏನಿದು ಪ್ರಕರಣ?: 2016ರ ಅ.22 ರಂದು ನಗರಸಭೆ ಆಯುಕ್ತರು ನಗರದ ಹಳೆ ಮೈಸೂರು ಬ್ಯಾಂಕ್ ವೃತ್ತದ ಹಳೆ ಸಂತೆ ರಸ್ತೆಯ ನಿವಾಸಿ ಟಿ.ಎನ್.ಆನಂದ್ ಅವರು ಮನೆ ಮುಂದೆ ಹಾಕಿದ್ದ ಗೇಟ್ ನಗರಸಭೆ ಜಾಗ ಒತ್ತುವರಿ ಮಾಡಿಕೊಂಡು ಹಾಕಲಾಗಿದೆ ಎಂದು ಕಿತ್ತು ಹಾಕಿಸಿದ್ದರು. ಈ ಕುರಿತು ಆನಂದ್ ಅ.24 ರಂದು ನಗರ ಠಾಣೆಯಲ್ಲಿ ದೂರು ನೀಡಿದ್ದರು.
ಜಮೀನು ವ್ಯಾಜ್ಯವಾದ್ದರಿಂದ ನ್ಯಾಯಾಲದಲ್ಲಿ ಮೊಕದ್ದಮೆ ಹೂಡಲು ಪೊಲೀಸರು ದೂರು ದಾಖಲಿಸಿ ಕೊಂಡಿರಲಿಲ್ಲ. ಬಳಿಕ ಆನಂದ್ ಅವರು ಜೆಎಂಎಫ್ಸಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು. ಇದೇ ವೇಳೆ ಆನಂದ್ ತಮ್ಮ ಆಸ್ತಿಗೆ ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ಬ್ರಹ್ಮಚಾರಿ ಹಾಗೂ ಗೋವಿಂದಚಾರಿ ಎಂಬುವರ ವಿರುದ್ಧ ಕೂಡ ಪ್ರಕರಣ ದಾಖಲಿಸಿದ್ದರು.
ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಜ.8ರಂದು ಮೂರು ಜನ ಆರೋಪಿಗಳಿಗೆ ನೋಟಿಸ್ ಜಾರಿಗೊಳಿಸಿತ್ತು. ಆದರೆ ಹಾಜರಾಗಿರ ಲಿಲ್ಲ. ಹೀಗಾಗಿ ವಾರೆಂಟ್ ಹೊರಡಿಸಿ, ಫೆ. 26ರಂದು ಹಾಜರಾಗಲು ಸೂಚಿಸಿದೆ.
ಈ ಕುರಿತು ಉಮಾಕಾಂತ್, ‘ನಗರ ಸಭೆ ನಕಾಶೆಯಲ್ಲಿರುವ ರಸ್ತೆಯಲ್ಲಿದ್ದ ಗೇಟ್ ಕಿತ್ತು ವಶಕ್ಕೆ ಪಡೆಯಲಾಗಿತ್ತು. ಪ್ರಕರಣ ದಾಖಲಾಗಿರುವ ಬಗ್ಗೆ ನನಗೆ ಮಾಹಿತಿ ಇರಲಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.