ಚಿಕ್ಕಬಳ್ಳಾಪುರ: ‘ಕೇಂದ್ರ ಸರ್ಕಾರ ಸಮಗ್ರ ಶಿಶು ಕಲ್ಯಾಣ ಯೋಜನೆಯ (ಐ.ಸಿ.ಡಿ.ಎಸ್) ಕಡಿತಗೊಳಿಸಿರುವ ಅನುದಾನ ವಾಪಸ್ ನೀಡಬೇಕು ಎಂದು ಆಗ್ರಹಿಸಿ ಜನವರಿ 17 ರಂದು ಜಿಲ್ಲೆಯಲ್ಲಿ ಎಲ್ಲ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ, ರಾಜ್ಯ ಅಂಗನವಾಡಿ ನೌಕರರ ಸಂಘ, ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ವತಿಯಿಂದ ಕೇಂದ್ರ ಸಚಿವ ಸದಾನಂದಗೌಡ ನಿವಾಸದ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದು ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಲಕ್ಷ್ಮಿದೇವಮ್ಮ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರದ 2014–15ನೇ ಸಾಲಿನಲ್ಲಿ ಬಜೆಟ್ನಲ್ಲಿ ಐಸಿಡಿಎಸ್ ಯೋಜನೆಗೆ ₹ 18,391 ಕೋಟಿ ಅನುದಾನ ನೀಡಿತ್ತು. ಆದರೆ, 2015 –16 ನೇ ಸಾಲಿನ ಈ ಮೊತ್ತವನ್ನು ಕಡಿತಗೊಳಿಸಲಾಗಿದೆ. ಇವತ್ತು ಕೇಂದ್ರ ಸರ್ಕಾರ 42 ವರ್ಷಗಳ ಈ ಯೋಜನೆಯನ್ನು ರದ್ದುಪಡಿಸಲು ಮುಂದಾಗಿದೆ’ ಎಂದು ಅವರಯ ಆರೋಪಿಸಿದರು.
‘ಈಗಾಗಲೇ ದೇಶದಲ್ಲಿ 26 ಲಕ್ಷ ಅಂಗನವಾಡಿ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ ಗುಜರಾತ್, ಒಡಿಶಾ ರಾಜ್ಯಗಳಲ್ಲಿ ಮಕ್ಕಳ ಅಪೌಷ್ಟಿಕತೆ ನಿವಾರಿಸಲು ನೇರವಾಗಿ ಫಲಾನುಭವಿಯ ಖಾತೆಗೆ ಹಣ ವರ್ಗಾವಣೆ ಮಾಡಲು ಚಿಂತಿಸಿವೆ. ದೆಹಲಿ ಸರ್ಕಾರ ಮಕ್ಕಳಿಗೆ ಆಹಾರದ ಪಾಕೆಟ್ ನೀಡಲು ಮುಂದಾಗಿದೆ. ಇದೇ ಮಾದರಿಗಳನ್ನು ರಾಜ್ಯದಲ್ಲಿ ಜಾರಿಗೊಳಿಸಿದರೆ ಮಕ್ಕಳಲ್ಲಿ ಇನ್ನಷ್ಟು ಅಪೌಷ್ಠಿಕತೆ ಹೆಚ್ಚಾಗಲಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.