ADVERTISEMENT

ಆರ್ಥಿಕ ಸದೃಢತೆ: ರೈತರಿಗೆ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 2:01 IST
Last Updated 30 ನವೆಂಬರ್ 2020, 2:01 IST
ಗುಡಿಬಂಡೆ ಪಟ್ಟಣದ ಕೃಷಿ ಇಲಾಖೆಯಲ್ಲಿ ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ ನಡೆಯಿತು
ಗುಡಿಬಂಡೆ ಪಟ್ಟಣದ ಕೃಷಿ ಇಲಾಖೆಯಲ್ಲಿ ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ ನಡೆಯಿತು   

ಗುಡಿಬಂಡೆ: ‘ಸರ್ಕಾರದಿಂದ ರೈತರಿಗೆ ಅನೇಕ ಸೌಲಭ್ಯ ನೀಡುತ್ತಿದ್ದು, ಅವುಗಳನ್ನು ಬಳಸಿಕೊಂಡು ರೈತರು ಆರ್ಥಿಕವಾಗಿ ಸದೃಢರಾಗಬೇಕು’ ಎಂದು ತಾ.ಪಂ. ಸದಸ್ಯ ಜಯರಾಮರೆಡ್ಡಿ ಸಲಹೆ ನೀಡಿದರು.

ಪಟ್ಟಣದ ಕೃಷಿ ಇಲಾಖೆ ಕಚೇರಿಯಲ್ಲಿ ಟರ್ಪಾಲಿನ್‌ ವಿತರಣೆ ಸಂಬಂಧ ನಡೆದ ಲಾಟರಿ ಪ್ರಕ್ರಿಯೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೊರೊನಾದಿಂದ ಎಲ್ಲರೂ ಪರದಾಡುವಂತಾಗಿದೆ. ಅದರಲ್ಲೂ ಲಾಕ್‌ಡೌನ್ ಸಮಯದಲ್ಲಿ ರೈತರು ಕೃಷಿ ಚಟುವಟಿಕೆ ಕೈಗೊಳ್ಳಲು ಪರದಾಡುವಂತಾಗಿತ್ತು. ಇದರ ಜೊತೆಗೆ ಬಿಡುಗಡೆಯಾಗಬೇಕಿದ್ದ ಅನುದಾನವೂ ಶೇಕಡ 50ರಷ್ಟು ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಕಡಿಮೆ ಪ್ರಮಾಣದ ಟರ್ಪಾಲಿನ್‌ಗಳು ತಡವಾಗಿ ಬಂದಿವೆ. ಲಾಟರಿ ಮೂಲಕ ಆಯ್ಕೆಯಾದ ರೈತರು ಇವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ADVERTISEMENT

ಸಹಾಯಕ ಕೃಷಿ ನಿರ್ದೇಶಕ ಕೇಶವರೆಡ್ಡಿ ಮಾತನಾಡಿ, ರೈತರು ಬೆಳೆದಿರುವ ಕೃಷಿ ಉತ್ಪನ್ನಗಳ ಒಕ್ಕಣೆ ಮತ್ತು ಸಂಸ್ಕರಣೆ ಮಾಡಿಕೊಂಡು ಶುಚಿತ್ವಗೊಳಿಸಿಕೊಳ್ಳುವುದು ಅತ್ಯಾವಶ್ಯಕವಾಗಿದೆ. ಮಳೆ ಮತ್ತು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಇಲಾಖೆಯಿಂದ ಟರ್ಪಾಲಿನ್‌ಗಳನ್ನು ವಿತರಿಸುವ ಕಾರ್ಯಕ್ರಮದಡಿ ಸಾಮಾನ್ಯ ವರ್ಗದ ರೈತರಿಗೆ ಶೇಕಡ 50, ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇಕಡ 90 ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತದೆ. ಗುರಿ ಮೀರಿ ಅರ್ಜಿಗಳು ಬಂದಿರುವುದರಿಂದ ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ ಮಾಡಲಾಗುತ್ತಿದೆ ಎಂದರು.

ಕಸಬಾ ಹೋಬಳಿಯಲ್ಲಿ 176 ಹಾಗೂ ಸೋಮೇನಹಳ್ಳಿ ಹೋಬಳಿಯಲ್ಲಿ 170 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ತಾ.ಪಂ. ಅಧ್ಯಕ್ಷೆ ವರಲಕ್ಷ್ಮೀ, ಉಪಾಧ್ಯಕ್ಷ ಬೈರಾರೆಡ್ಡಿ, ಮುಖಂಡ ಕೃಷ್ಣೇಗೌಡ, ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಶಂಕರಯ್ಯ, ಸಿಬ್ಬಂದಿಯಾದ ಲಾವಣ್ಯ, ಸಂಧ್ಯಾ, ಸುಧಾಕರ್, ಶಿವಕುಮಾರ್, ರಾಜಕುಮಾರ್, ಶಿವಶಂಕರನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.